ಮಡಿಕೇರಿ: ಕೊಡಗಿನ ಜನ ಶಾಂತಿಯ ಕಾವೇರಿ ತಾಯಿಭೂಮಿಯನ್ನು ಬಯಸುತ್ತಾರೆಯೇ ಹೊರತು ಸ್ವಾರ್ಥ ರಾಜಕೀಯ ರಣರಂಗವನ್ನಲ್ಲ. ಆದರೆ ಕಾಂಗ್ರೆಸ್ ಪಕ್ಷದ ಪ್ರೇರಣೆಯಿಂದ ಕೇರಳದ ಮತೀಯ ಶಕ್ತಿಗಳು ಜಿಲ್ಲೆಯಲ್ಲಿ ಅಶಾಂತಿ ಮೂಡಿಸಲು ಯತ್ನಿಸುತ್ತಿವೆ ಎಂದು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪಾರಂಪರಿಕತೆ, ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಮತ್ತು ಧಾರ್ಮಿಕ ತಳಹದಿಯ ಮೇಲೆ ಪರಸ್ಪರ ಶಾಂತಿಯಿಂದ ಇದ್ದ ಕೊಡಗು ಜಿಲ್ಲೆಯನ್ನು ಕಾಂಗ್ರೆಸ್ ಪಕ್ಷ ವ್ಯವಸ್ಥಿತವಾಗಿ ವಿಭಜಿಸುವ ಮತ್ತು ಅಶಾಂತಿ ಸೃಷ್ಟಿಸುವ ಪ್ರಯತ್ನ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.
ಕೊಡಗಿನ ಜನತೆ ಜಾಗೃತರಾಗದಿದ್ದರೆ ವೈಭವದ ಕೊಡಗನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಗೆ ಆಗಮಿಸಿದ ನಂತರ ತಲೆದೋರಿದ ಸಾಮಾಜಿಕ ವೈಪರೀತ್ಯಕ್ಕೆ ಸ್ವತಃ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷ ಕಾರಣ. ಭಾರತೀಯ ಜನತಾ ಪಕ್ಷದ ವಿರುದ್ಧ ಮತ್ತು ದಕ್ಷ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಮಲ್ಲಚೀರ ಅಯ್ಯಪ್ಪರನ್ನು ವರ್ಗಾಯಿಸಲು ಕಾಂಗ್ರೆಸ್ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ನೆರೆಯ ಕೇರಳ ಹಾಗೂ ಇತರ ಕಡೆಗಳಿಂದ ಮತೀಯ ಸಂಘಟನೆಗಳು ಪಾಲ್ಗೊಂಡು ಕೊಡಗನ್ನು ರಣರಂಗ ಮಾಡಲು ಹೊಂಚು ಹಾಕಿದ್ದವು ಎಂಬ ಮಾಹಿತಿ ಪೊಲೀಸ್ ಗುಪ್ತಚರ ಇಲಾಖೆಯಿಂದ ಹೊರ ಬಿದ್ದಿದ್ದು, ಇದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಕೊಡಗಿನ ಆರ್ಥಿಕತೆ ಮತ್ತು ಅಸ್ಮಿತೆಯ ಮೂಲವಾದ ಕಾಫಿ ಬೆಳೆಗಾರರು, ರೈತರು, ಕೃಷಿ ಕಾರ್ಮಿಕರ ಸ್ಥಿತಿ ಮುಂದಿನ ದಿನಗಳಲ್ಲಿ ಹೇಗಿರಬಹುದು ಎನ್ನುವ ಭೀತಿ ಸೃಷ್ಟಿಯಾಗಿದೆ. ಕೊಡಗಿಗೆ ಬೇಡವಾದ ಮತಾಂಧ ಟಿಪ್ಪುವಿನ ಜಯಂತಿಯನ್ನು ಅನಗತ್ಯವಾಗಿ ಹೇರಿ ಕೇರಳದ ಮತಾಂಧರನ್ನು ಆಹ್ವಾನಿಸಿ ಅಮಾಯಕರನ್ನು ಆಹುತಿ ತೆಗೆದುಕೊಂಡ ಕೀರ್ತಿ ಕಾಂಗ್ರೆಸ್ ಗೆ ಸಲ್ಲುತ್ತದೆ. ಇನ್ನಷ್ಟು ಬಲಿಗಾಗಿ ಕಾದಿರುವ ಕಾಂಗ್ರೆಸ್ ಪಕ್ಷ ಕೇರಳದ ಮತೀಯ ಸಂಘಟನೆಗಳಿಗೆ ಕೊಡಗಿನಲ್ಲಿ ಆಶ್ರಯ ನೀಡಲು ಮುಂದಾಗಿದೆ ಎಂದರೆ ಅದು ಕೇವಲ ಆಶ್ರಯವಲ್ಲ ಕೊಡಗಿನ ಮೂಲ ತಳಹದಿಯನ್ನೇ ನಾಶ ಮಾಡಲು ಹೊರಟಿರುವ ಸಂಚು ಎಂದು ಆರೋಪಿಸಿದ್ದಾರೆ.
ಕೊಡಗಿನ ಮೂಲ ನಿವಾಸಿಗಳು, ಬೆಳೆಗಾರರು, ರೈತರು, ಕೃಷಿ ಕಾರ್ಮಿಕರು ಈ ಕುತಂತ್ರದ ಬಗ್ಗೆ ಮನಗಾಣಬೇಕಾಗಿರುವುದು ಅಗತ್ಯವಾಗಿದೆ. ಕೊಡಗಿನ ಜನ ರಾಷ್ಟ್ರಪ್ರೇಮಿಗಳು, ದೇಶ ಸೇವೆಗೆ ಕುಟುಂಬ ಜೀವನವನ್ನು ತ್ಯಾಗ ಮಾಡಿ ಸೇನೆಗೆ ಹಾಗೂ ದೇಶ ಕಟ್ಟುವ ಕೆಲಸಕ್ಕೆ ಹೋದವರು.ಇಲ್ಲಿನವರು ಎಂದೆಂದಿಗೂ ನೈಜ ಮತ್ತು ಪ್ರಾಕೃತಿಕ ಕೊಡಗನ್ನು ಬಯಸುವವರು. ಮತಾಂಧ ಕ್ರೂರಿ ಟಿಪ್ಪು ಕೊಡವರು, ಕ್ರೆöÊಸ್ತರು, ನಾಯರ್ ಗಳು ಮುಂತಾದ ಸಮುದಾಯದ ಮಹಿಳೆಯರು, ಯುವತಿಯರನ್ನು ಕುತಂತ್ರದಿಂದ ಅಮಾನುಷವಾಗಿ ಹತ್ಯೆ ಮಾಡಿದ ದೇಶದ ಮೊಟ್ಟ ಮೊದಲ ಭಯೋತ್ಪಾದಕ ಟಿಪ್ಪುವನ್ನು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವೈಭವೀಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸ್ವಾತಂತ್ರ ಹೋರಾಟಗಾರ ವೀರ ಸಾವರ್ಕರ್ ರನ್ನು ಸಿದ್ದರಾಮಯ್ಯ ಅವಮಾನ, ಅವಹೇಳನ ಮಾಡಿದಾಗ ಸಹಜವಾಗಿ ಸ್ವಾರ್ಥ, ಅಧಿಕಾರದ ವಾಂಛೆಗೆ ಮುಗಿಬೀಳದ ಕೊಡಗು ಮೂಲ ನಿವಾಸಿಗಳು ವಿರೋಧ ವ್ಯಕ್ತಪಡಿಸಿ ಸಿದ್ದರಾಮಯ್ಯನವರಿಗೆ ಘೇರಾವ್ ಹಾಕಿದ್ದಾರೆ. ಕೊಡಗನ್ನು ಜಾತಿ, ಧರ್ಮದ ಹೆಸರಿನಲ್ಲಿ ವಿಂಗಡಿಸಲು ಆಸ್ಪದ ಕೊಡುವಷ್ಟು ಮೂರ್ಖರು ಇಲ್ಲಿನವರಲ್ಲ. ಸಿದ್ದರಾಮಯ್ಯನವರು ಇನ್ನೊಂದು ಚಾಮುಂಡೇಶ್ವರಿ ಕ್ಷೇತ್ರವನ್ನು, ಜಮೀರ್ ಅಹಮ್ಮದ್ ನ ಚಾಮರಾಜಪೇಟೆಯನ್ನು ಸೃಷ್ಟಿಸಲು ಸಾಧ್ಯವಿದೆ. ಆದರೆ ದಕ್ಷಿಣ ಕಾಶ್ಮೀರ, ವರ್ಣಾತೀತ ಉಪಮೆಗಳಿಗಿಂತಲೂ ದಕ್ಷಿಣ ಕರ್ನಾಟಕ, ತಮಿಳುನಾಡಿಗೆ ನೀರು ನೀಡುತ್ತಿರುವ ಪವಿತ್ರ ತೀರ್ಥ ಸ್ವರೂಪಿಣಿಯ ಕೊಡಗನ್ನು ಸೃಷ್ಟಿ ಮಾಡಲು ಯಾರಿಂದಲು ಸಾಧ್ಯವಿಲ್ಲ. ದೇಶದ ಜನತೆಗೆ ಬೇಕಿರುವುದು ನೈಜ ಕೊಡಗು, ಪ್ರಾಕೃತಿಕ ಕೊಡಗು, ಸಾಂಸ್ಕೃತಿಕ ಕೊಡಗು ಹೊರತು ಕಲುಷಿತ, ರಾಜಕೀಯ ಗೊಂದಲದ ಮತ್ತು ಹಿಂಸೆಯ ಕೊಡಗು ಅಲ್ಲ ಎಂದು ಶಿವಕುಮಾರ್ ನಾಣಯ್ಯ ತಿಳಿಸಿದ್ದಾರೆ.