ಮಡಿಕೇರಿ: ಮೇಕೇರಿ ವಿಷ್ಪರಿಂಗ್ ವುಡ್ ರೆಸಾರ್ಟ್ ಮತ್ತು ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಸಹಯೋಗದಲ್ಲಿ ಮೇಕೇರಿಯಲ್ಲಿ ಆಟಿದ ಕೂಟ ಕಾರ್ಯಕ್ರಮ ನಡೆಯಿತು.
ತುಳುವೆರ ಜನಪದ ಕೂಟದ ಜಿಲ್ಲಾಧ್ಯಕ್ಷ ಬಿ.ಬಿ.ಐತಪ್ಪ ರೈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ತುಳು ಜನಾಂಗದ ಸಂಸ್ಕೃತಿ, ಆಚಾರ, ವಿಚಾರಗಳನ್ನು ಉಳಿಸಿ ಬೆಳೆಸುವಂತೆ ಕರೆ ನೀಡಿದರಲ್ಲದೆ, ಎಲ್ಲರೂ ಸಂಘಟಿತರಾಗಿ ತುಳು ಸಂಸ್ಕೃತಿಗೆ ಪೂರಕವಾದ ಹಬ್ಬಗಳನ್ನು ಆಚರಿಸುವಂತೆ ತಿಳಿಸಿದರು.
ಕೂಟದ ಉಪಾಧ್ಯಕ್ಷ ಆನಂದ ರಘು, ಸ್ಥಾಪಕ ಸಲಹೆಗಾರ ಹರೀಶ್ ಆಳ್ವ ಹಾಗೂ ರೆಸಾರ್ಟ್ ಮಾಲೀಕರ, ಸಂಯೋಜಕರೂ ಆದ ರತ್ನಾಕರ್ ರೈ, ಚಿತ್ರನಟ ಹಾಗೂ ಪ್ರಗತಿಪರ ಕೃಷಿಕ ಶರಣ್ ಶೆಟ್ಟಿ ಮಾತನಾಡಿ, ತುಳು ಭಾಷೆಯನ್ನು ೮ನೇ ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿ ಒಗ್ಗಟ್ಟಿನ ಪರಿಶ್ರಮ ಅಗತ್ಯವೆಂದರು.
ಕಾರ್ಯಕ್ರಮದಲ್ಲಿ ತುಳುವೆರ ಜನಪದ ಕೂಟದ ಮಾಜಿ ಅಧ್ಯಕ್ಷರು ಹಾಗೂ ಗೋಣಿಕೊಪ್ಪ ಜನಪದ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶೇಖರ್ ಭಂಡಾರಿ, ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ, ಸಂಘಟನಾ ಕಾರ್ಯದರ್ಶಿ ಬಿ.ಪಿ.ರಾಜೀವ್ ಲೋಚನ, ಖಜಾಂಚಿ ಪ್ರಭು ರೈ, ಕಾರ್ಯದರ್ಶಿ ಬಿ.ಎಸ್.ಆನಂದ ರಘು, ಜಿಲ್ಲಾ ನಿರ್ದೇಶಕರು, ತಾಲ್ಲೂಕು ಅಧ್ಯಕ್ಷರು, ತುಳುವೆರ ೧೩ ಸಮುದಾಯದ ಜಿಲ್ಲಾ ಹಾಗೂ ತಾಲ್ಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಬಿ.ಎಸ್.ಪುರುಷೋತ್ತಮ ಪ್ರಾರ್ಥಿಸಿ, ಜಯಪ್ಪ ವಂದಿಸಿದರು. ಆಟಿ ಕೂಟದ ವಿಶೇಷ ಖಾದ್ಯಗಳು ಮತ್ತು ಊಟದ ವ್ಯವಸ್ಥೆಯನ್ನು ಮೇಕೇರಿ ವಿಷ್ಪರಿಂಗ್ ವುಡ್ ರೆಸಾರ್ಟ್ನ ಪವನ್ ಆಳ್ವ, ಅಭಿಷೇಕ್ ಕೇಕಡ್ಕ ಹಾಗೂ ಶ್ರವಣ್ ಮಾಡಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಕರ್ಷಕ ಚಂಡೆವಾದನ, ಕೋಟಿ ಚೆನ್ನಯ್ಯ ಯಕ್ಷಗಾನ ಪ್ರಸಂಗ ಹಾಗೂ ವಿಕ್ರಮ್ ಜಾದೂಗಾರರಿಂದ ನಡೆದ ಜಾದೂ ಪದರ್ಶನ ಗಮನ ಸೆಳೆಯಿತು.