ಮಡಿಕೇರಿ: 1965ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ವೀರ ಮರಣ ಹೊಂದಿದ ಮಹಾವೀರ ಚಕ್ರ (ಮರಣೋತ್ತರ)ಪುರಸ್ಕೃತ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ.ದೇವಯ್ಯ ಅವರ ಜನ್ಮದಿನಾಚರಣೆಯನ್ನು ಕೊಡವ ಮಕ್ಕಡ ಕೂಟದಿಂದ ಆಚರಿಸಲಾಯಿತು.
ನಗರದ ಸ್ವಾ.ಲೀ ಅಜ್ಜಮಾಡ ಬಿ.ದೇವಯ್ಯ ವೃತ್ತದಲ್ಲಿ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.
ನಂತರ ಮಾತನಾಡಿದ ಅಯ್ಯಪ್ಪ ವೀರಯೋಧರ ಸ್ಮರಣೆಯ ಮೂಲಕ ಗೌರವ ಸಲ್ಲಿಸುವುದರೊಂದಿಗೆ ಪ್ರತಿಯೊಬ್ಬರು ದೇಶಾಭಿಮಾನ ಮೆರೆಯಬೇಕೆಂದು ಕರೆ ನೀಡಿದರು. ಅಜ್ಜಮಾಡ ಕುಟುಂಬದ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಕೊಡವ ಮಕ್ಕಡ ಕೂಟದ ಸದಸ್ಯರು ಹಾಗೂ ಅಭಿಮಾನಿಗಳು ಹಾಜರಿದ್ದರು.
ವೀರಯೋಧ ಅಜ್ಜಮಾಡ ಬಿ.ದೇವಯ್ಯ :
1965ನೇ ಇಸವಿ ಭಾರತ-ಪಾಕ್ ಯುದ್ಧದ ಸಂದರ್ಭ ವಿಂಗ್ ಕಮಾಂಡರ್ ಆಗಿದ್ದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ.ದೇವಯ್ಯ ಅವರಿಗೆ ಪಾಕ್ ಭದ್ರಕೋಟೆಯಾಗಿದ್ದ ಸರಗೋಡ ವಾಯುನೆಲೆಯ ಮೇಲೆ ದಾಳಿ ನಡೆಸುವ ಜವಾಬ್ದಾರಿ ವಹಿಸಲಾಗಿತ್ತು. ದೇವಯ್ಯ ಅವರ ತಂಡಕ್ಕೆ ಶತ್ರುಗಳ ವಾಯುನೆಲೆಯನ್ನು ಧ್ವಂಸಗೊಳಿಸುವ ಮೂಲಕ ಗುರಿಸಾಧಿಸಿ ಹಿಂತಿರುಗಿ ಬರುವ ಎಲ್ಲಾ ಅವಕಾಶಗಳಿದ್ದರೂ ತಮ್ಮ ತಂಡದ ಇತರೆ ಯುದ್ಧ ವಿಮಾನಗಳ ಮೇಲೆ ದಾಳಿಯಾಗದಿರಲಿ ಎಂದು ಬೆಂಗಾವಲಾಗಿ ಸುರಕ್ಷಿತವಾಗಿ ಹಿಂತಿರುಗುತ್ತಿದ್ದಂತೆ ದಿಢೀರನೆ ಹಿಂಬಾಲಿಸಿದ ಶತ್ರು ವಿಮಾನದೊಂದಿಗೆ ಮತ್ತೆ ಹೋರಾಟ ನಡೆಸಬೇಕಾಯಿತು.
ಎದೆಗುಂದದ ದೇವಯ್ಯ ಅವರು ಪ್ರಾಣದ ಹಂಗುತೊರೆದು ಹೋರಾಟ ಮುಂದುವರೆಸಿದರು. ವಾಯೂಸೇನೆಯಲ್ಲೂ ಮುಖಾಮುಖಿ ಹೋರಾಡುವ ಅಪಾಯಕಾರಿ ಯುದ್ಧವನ್ನು ದೇವಯ್ಯ ಕೆಚ್ಚೆದೆಯಿಂದ ಎದುರಿಸಿದರು. ಯುದ್ಧ ವಿಮಾನಗಳು ಪರಸ್ಪರ ಡೈ ಹೊಡೆಯುತ್ತಾ ಬಹುಹೊತ್ತಿನವರೆಗೆ ದಾಳಿ ಮುಂದುವರೆಸಿದವು. ಶತ್ರುಗಳ ಬಲಿಷ್ಠವಾದ ಸೂಪರ್ ಸಾನಿಕ್ ವಿಮಾನವನ್ನು ಹೊಡೆದುರುಳಿಸುವ ಮೂಲಕ ದೇವಯ್ಯ ಅವರು ಭಾರತೀಯ ವಾಯುಪಡೆಯಲ್ಲಿ ಅಮೋಘ ಸಾಹಸದ ದಾಖಲೆ ನಿರ್ಮಿಸಿದರು.
ಹೋರಾಟದ ಕೊನೆಯಲ್ಲಿ ದೇವಯ್ಯನವರ ವಿಮಾನಕ್ಕೂ ದಕ್ಕೆಯಾಯಿತು. ಆ ಸಂದರ್ಭ ಪ್ಯಾರಚೂಟ್ನಲ್ಲಿ ಹಾರುವ ಅವಕಾಶವಿತ್ತಾದರೂ ಶತ್ರುವಿನ ನೆಲದಲ್ಲಿ ಇಳಿದು ಸೆರೆಯಾಗಿ ತಲೆತಗ್ಗಿಸುವ ಇಚ್ಛೆ ಅವರಿಗಿರಲಿಲ್ಲ. ತಾನಿದ್ದ ಯುದ್ಧವಿಮಾನ ಪತನಗೊಂಡು ಸುಟ್ಟು ಕರಕಲಾದ ಪರಿಣಾಮ ದೇವಯ್ಯ ಹತಾತ್ಮರಾದರು, ಅಮರದಾದರು.
ಕೊಡಗಿನ ಶ್ರೀಮಂಗಲದ ಕುರ್ಚಿ ಗ್ರಾಮದ ಅಜ್ಜಮಾಡ ಬೋಪಯ್ಯ, ನೀಲಮ್ಮ ದಂಪತಿಗಳ ಪುತ್ರ ದೇವಯ್ಯ 1954ರಲ್ಲಿ ಸೇನೆಗೆ ಸೇರಿ 11 ವರ್ಷಗಳ ದೇಶ ಸೇವೆಯಲ್ಲಿ ಅಸಾಮಾನ್ಯ ಸಾಹಸ ಮೆರೆದರು. ಇವರ ತ್ಯಾಗ-ಬಲಿದಾನವನ್ನು ಪರಿಗಣಿಸಿ ಭಾರತ ಸರ್ಕಾರ ಮರಣೋತ್ತರವಾಗಿ 1988ರಲ್ಲಿ ವiಹಾವೀರಚಕ್ರ ಪ್ರಶಸ್ತಿಯನ್ನು ನೀಡಿತು. ಅಂದಿನ ರಾಷ್ಟ್ರಪತಿ ಆರ್.ವೆಂಕಟರಾಮನ್ ಅವರು ದಿ.ದೇವಯ್ಯ ಅವರ ಪತ್ನಿ ಸುಂದರಿ ದೇವಯ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.