ಮಡಿಕೇರಿ : ಮಡಿಕೇರಿ ನಗರದ ಗಾಂಧಿ ಮಂಟಪದ ಆವರಣದಲ್ಲಿ ತ್ಯಾಜ್ಯ ವಿಲೇವಾರಿಯ ವಾಹನಗಳನ್ನು ನಿಲುಗಡೆಗೊಳಿಸುವ ಮೂಲಕ ನಗರಸಭೆ ಮಹಾತ್ಮ ಗಾಂಧಿಗೆ ಅಗೌರವ ತೋರಿದೆ ಎಂದು ಕೊಡಗು ಜಿಲ್ಲಾ ಸರ್ವೋದಯ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.
ಗಾಂಧಿ ಮಂಟಪಕ್ಕೆ ಭೇಟಿ ನೀಡಿದ್ದ ಸರ್ವೋದಯ ಸಮಿತಿಯ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ ಅಲ್ಲಿನ ಅಶುಚಿತ್ವದ ವಾತಾವರಣಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಶೌಚಾಲಯಗಳ ತ್ಯಾಜ್ಯ ವಿಲೇವಾರಿ ಮಾಡುವ ವಾಹನ ಸಹಿತ ಕಸ ಸಾಗಿಸುವ ಎಲ್ಲಾ ವಾಹನಗಳನ್ನು ಗಾಂಧಿ ಮಂಟಪದ ಆವರಣದಲ್ಲಿ ನಿಲುಗಡೆಗೊಳಿಸಲಾಗಿದೆ. ಈ ಪ್ರದೇಶ ಕೆಸರುಮಯವಾಗಿದ್ದು, ಗಾಂಧಿ ಪ್ರತಿಮೆಯ ಬಳಿಯೇ ಸ್ವಚ್ಛತೆಗೆ ಆದ್ಯತೆ ನೀಡದೆ ನಿರ್ಲಕ್ಷಿಸಲಾಗಿದೆ. ಗಾಂಧಿ ಮಂಟಪವನ್ನು ವೀಕ್ಷಿಸಲು ಬರುವ ಪ್ರವಾಸಿಗರು ಕಸದ ವಾಹನಗಳನ್ನು ನೋಡುವ ಪರಿಸ್ಥಿತಿ ಇದೆ.
ಸ್ವಚ್ಛ ಭಾರತಕ್ಕೆ ನಾಂದಿ ಹಾಡಿದ ಮಹಾತ್ಮ ಗಾಂಧಿ ಅವರ ಪ್ರತಿಮೆಯ ಬಳಿಯೇ ತ್ಯಾಜ್ಯ ವಿಲೇವಾರಿ ಮಾಡುವ ವಾಹನಗಳನ್ನು ನಿಲುಗಡೆ ಮಾಡುವ ಮೂಲಕ ನಗರಸಭೆ ಗಾಂಧಿ ಸಂದೇಶವನ್ನು ಕುಹಕ ಮಾಡಿದೆ ಎಂದು ಕುಶಾಲಪ್ಪ ಆರೋಪಿಸಿದರು.
ಗಾಂಧಿ ಮಂಟಪದ ಅಭಿವೃದ್ಧಿಗಾಗಿ ಸರ್ಕಾರ ಈ ಜಾಗವನ್ನು ಮೀಸಲಿಟ್ಟು ಹಣವನ್ನು ಕೂಡ ಬಿಡುಗಡೆ ಮಾಡಿದೆ. ಯೋಜನೆಯ ಅನುಷ್ಠಾನಕ್ಕಾಗಿ ಸರ್ವೋದಯ ಸಮಿತಿ ಅವಿರತ ಶ್ರಮ ವಹಿಸಿದೆ. ಆದರೆ ಈಗ ಈ ಪ್ರದೇಶವನ್ನು ತ್ಯಾಜ್ಯ ವಿಲೇವಾರಿ ಮಾಡುವ ವಾಹನಗಳ ನಿಲುಗಡೆಗೆ ಬಳಸಿಕೊಳ್ಳಲಾಗಿದೆ. ತಕ್ಷಣ ನಗರಸಭೆ ವಾಹನಗಳನ್ನು ತೆರವುಗೊಳಿಸಿದೆ ಸ್ವಚ್ಛತೆಯನ್ನು ಕಾಪಾಡದಿದ್ದಲ್ಲಿ ಆ.20 ರಂದು ವಾಹನಗಳ ಸಹಿತ ಗಾಂಧಿ ಮಂಟಪದ ಆವರಣಕ್ಕೆ ಬೀಗ ಜಡಿಯುವುದಾಗಿ ಅವರು ಎಚ್ಚರಿಕೆ ನೀಡಿದರು.