ಮಡಿಕೇರಿ: ಮಡಿಕೇರಿಯ ಗಾಂಧಿ ಮೈದಾನದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿಗಳು ಕೊಡಗು ಜಿಲ್ಲೆಯಲ್ಲಿ ನೈಸರ್ಗಿಕವಾಗಿ ಅಭಿವೃದ್ಧಿ ಮಾಡಲು ಹೆಚ್ಚುವರಿಗಾಗಿ 100 ಕೋಟಿ ಪ್ಯಾಕೇಜ್ ಅನ್ನು ಬಿಡುಗಡೆ ಮಾಡಿದ್ದೇವೆ.
ಕೊಡವ ಜನಾಂಗದ ಅಭಿವೃದ್ಧಿಗೆ 10 ಕೋಟಿ. ಬೆಂಗಳೂರಿನಲ್ಲಿ ಕೊಡವ ಸಮಾಜಕ್ಕೆ ಏಳು ಕೋಟಿ ಹಣ ನೀಡಲಾಗಿದೆ. ಕೊಡುಗು ಕರ್ನಾಟಕದ ಹೆಮ್ಮೆ. ಕೊಡಗು ಪ್ರವಾಸೋದ್ಯಮ ಜಿಲ್ಲೆಯಾಗಿ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ, ಇದಕ್ಕಾಗಿ ನಮ್ಮ ಸರ್ಕಾರ ಮೈಸೂರನ್ನು ಒಳಗೊಂಡು ಸರ್ಕ್ಯೂಟ್ ಟೂರಿಸಂ ಆಗಿ ರೂಪಿಸಿದೆ. ಇದರಿಂದ ಅಂತರಾಷ್ಟ್ರೀಯ ಮ್ಯಾಪಿನಲ್ಲಿ ಕೊಡಗು ಸೇರಿಕೊಂಡಿದೆ ಎಂದರು.
ದೇಶಕ್ಕಾಗಿ ವೀರ ಸೈನಿಕರನ್ನು ನೀಡಿದ ಜಿಲ್ಲೆ ಕೊಡಗು. ಅದಕ್ಕಾಗಿ ಸೈನಿಕರು ದೇಶ ಸೇವೆ ಮುಗಿಸಿ ಬಂದಾಗ ಅವರಿಗೆ ಆರೋಗ್ಯ ಶಿಕ್ಷಣ ಹಾಗೂ ಮನೆಯನ್ನು ಸರ್ಕಾರ ಕೊಡಲು ಯೋಜನೆಯನ್ನು ರೂಪಿಸಿದ್ದೇವೆ, ಅದನ್ನು ಈ ವರ್ಷದಿಂದಲೇ ನೀಡುತ್ತೇವೆ ಎಂದರು. ಕೊಡಗಿನಲ್ಲಿ ನಿರಂತರ ಮಳೆ, ಈ ಹಿಂದೆ ನಡೆದ ಭೂಕುಸಿತ, ಈ ಸಂದರ್ಭ ಕೇಂದ್ರ ಸರ್ಕಾರ ಹಾಗೂ ನಮ್ಮ ಸರ್ಕಾರ ಈ ಹಿಂದೆ ಇದ್ದ ಯಡಿಯೂರಪ್ಪನವರು ಹೆಚ್ಚಿನ ಅನುದಾನವನ್ನು ಕೊಡುಗೆಗೆ ನೀಡಿದ್ದಾರೆ. ಇಲ್ಲಿಯ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ ಎಂದರು….. ಬೆಳೆ ಪರಿಹಾರವನ್ನು 3 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗೆ ಏರಿಸಿದ್ದೇವೆ.
ನೀರಾವರಿ ತೋಟಗಾರಿಕೆ ಸೇರಿದಂತೆ ಕೊಡಗು ಜಿಲ್ಲೆಗೆ ಒಟ್ಟು 132 ಕೋಟಿ ಬೆಳೆ ಪರಿಹಾರ ವಿತರಿಸಿದ್ದೇವೆ. ಮಹಿಳೆಯರ ಅಭಿವೃದ್ಧಿಗಾಗಿ ಶ್ರೀ ಶಕ್ತಿ ಯೋಜನೆ ಹಾಗೂ ವಿವೇಕಾನಂದ ಯೋಜನೆಯ ಮೂಲಕ 5 ಲಕ್ಷ ನೀಡಿ ಉತ್ಪಾದನೆ ಹಾಗೂ ಮಾರುಕಟ್ಟೆಗೆ ವ್ಯವಸ್ಥೆ ಕಲ್ಪಿಸಿದ್ದೇವೆ. ಮಹಿಳೆಯರು ಸ್ವಾವಲಂಬಿ ಬದುಕನ್ನು ಸಾಗಿಸಬೇಕು ಎಂಬುದೇ ಸರ್ಕಾರದ ಗುರಿಯಾಗಿದೆ. ಕಿಸಾನ್ ಸನ್ಮಾನ ಯೋಜನೆಯಲ್ಲಿ ರಾಜ್ಯದ 43,000 ರೈತರಿಗೆ ನೇರವಾಗಿ ಬ್ಯಾಂಕ್ ಮೂಲಕ ಅವರ ಖಾತೆಗೆ ಸಹಾಯಧನವನ್ನು ನೀಡಿದ್ದೇವೆ . ರೈತರ ಮಕ್ಕಳಿಗೆ 12 ಕೋಟಿ ಸ್ಕಾಲರ್ಶಿಪ್ ಅನ್ನು ವಿತರಿಸಿದ್ದೇವೆ.
ಕೊಡಗಿನಲ್ಲಿ ಬದಲಾದ ಪರಿಸ್ಥಿತಿಯಲ್ಲಿ ಅತಿ ಸಣ್ಣ ಭೂಮಿ ಹೊಂದಿರುವ ರೈತರಿಗೆ ಅವರ ಮಕ್ಕಳಿಗೆ ಸಹಾಯಧನವನ್ನು ನೀಡಿದ್ದೇವೆ. ರೈತರಿಗೆ ಶಕ್ತಿ ತುಂಬೋ ಕೆಲಸ ಮಾಡಿದ್ದೇವೆ. ರೈತರಿಗೆ ಪ್ರಥಮ ಬಾರಿ ಜೀವ ವಿಮೆಯನ್ನು ಜಾರಿಗೆ ತಂದಿದ್ದೇವೆ. ಜೀವನ್ ಜ್ಯೋತಿ ಯೋಜನೆಯ ಮೂಲಕ ಪ್ರತಿಯೊಬ್ಬರಿಗೂ ಎರಡು ಲಕ್ಷ ರೂಪಾಯಿ ಜೀವ ವಿಮೆ ದೊರಕುತ್ತದೆ. ಯಶಸ್ವಿನಿ ಯೋಜನೆಯನ್ನು ಮತ್ತೆ ಪುನ ಈ ರಾಜ್ಯದಲ್ಲಿ ಜಾರಿಗೆ ತಂದಿದ್ದೇವೆ ಎಂದರು. ಒಂದು ತಾಸಿಗೂ ಹೆಚ್ಚು ಹೊತ್ತು ಮಾತನಾಡಿದ ಮುಖ್ಯಮಂತ್ರಿಗಳು ಸರ್ಕಾರದ ಯೋಜನೆಗಳನ್ನು ಎಳೆ ಎಳೆಯಾಗಿ ಜನರ ಮುಂದಿಟ್ಟರು.
ಕೊಡಗಿನ ಕಾಫಿ ಬೆಳಗಾರರ ಬಗ್ಗೆ ಮಾತನಾಡಿದ ಬೊಮ್ಮಾಯಿ. 10 ಹೆಚ್ ಪಿ ವರೆಗಿನ ರೈತರ ಪಂಸೆಟ್ಟಿಗೆ ಉಚಿತ ವಿದ್ಯುತ್ತನ್ನು ನೀಡುತ್ತಿದ್ದೇವೆ. ಇದನ್ನು ಕಾಫಿ ಬೆಳಗಾರಿಗೂ ಕೂಡ ಅನ್ವಯಿಸುತ್ತದೆ. ಈ ಹಿಂದಿನ ಬಾಕಿ ಕಾಫಿ ಬೆಳಗಾರರು ಉಳಿಸಿಕೊಂಡಿದ್ದರೆ ಅವೆಲ್ಲವನ್ನು ಕೂಡ ಮನ್ನ ಮಾಡಿ ರೈತರಿಗೆ 10 ಹೆಚ್ ಪಿ ಪಂಪ್ಸೆಟ್ಟಿಗೆ ಉಚಿತ ವಿದ್ಯುತ್ ನೀಡುವಂತೆ ವೇದಿಕೆಯ ಮೂಲಕ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಮ್ಮ ಸರ್ಕಾರ ಸುಳ್ಳು ಆಶ್ವಾಸನೆಯನ್ನು ನೀಡುತ್ತಿಲ್ಲ ಬದಲಾಗಿ ಜನರ ನಡುವೆ ಇರುವ ಸಮಸ್ಯೆಯನ್ನು ಅರಿತುಕೊಂಡು ಸಮಸ್ಯೆ ಪರಿಹಾರಕ್ಕೆ ಸಂಪೂರ್ಣವಾಗಿ ಸರ್ಕಾರ ತೊಡಗಿಸಿಕೊಂಡಿದೆ ಎಂದರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರಿಂದ ಫಲಾನುಭವಿಗಳ ಸಮ್ಮೇಳನ
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನೇರವಾಗಿ ಹೆಲಿ ಪ್ಯಾಡ್ ನಿಂದ ಗಾಂಧಿ ಮೈದಾನಕ್ಕೆ ಆಗಮಿಸಿ ಜಿಲ್ಲಾಡಳಿತ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಯ ಫಲಾನುಭವಿಗಳ ಸಮ್ಮೇಳನ ಹಾಗೂ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಗೆ ಚಾಲನೆ ನೀಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊದಲಿಗೆ ಸಮ್ಮೇಳನವನ್ನು ಉದ್ಘಾಟಿಸಿದರು. ಶಾಲಾ ಶಿಕ್ಷಣ, ಸಾಕ್ಷರತೆ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ನಾಗೇಶ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಅಧ್ಯಕ್ಷತೆ ವಹಿಸಿದ್ದರು.ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಜಿ.ಬೋಪಯ್ಯ, ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಎಂ.ಪಿ.ಸುಜಾ ಕುಶಾಲಪ್ಪ, ಸಹಕಾರ ಸಚಿವರಾದ ಎಸ್ ಟಿ ಸೋಮಶೇಖರ್ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾದ ನಾಪಂಡ ರವಿಕಾಳಪ್ಪ, ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ಕಂದಾಯ ಇಲಾಖೆಯ ಕಾರ್ಯದರ್ಶಿ ಎನ್.ಜಯರಾಮ್, ಬೆಂಗಳೂರು ಕ.ರಾ.ರ.ಸಾ.ನಿ. ವ್ಯವಸ್ಥಾಪಕ ನಿರ್ದೇಶಕರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬುಕುಮಾರ್, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಡಾ.ಜಿ.ಸಿ.ಪ್ರಕಾಶ್, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿ.ಪಂ.ಸಿಇಒ ಡಾ.ಎಸ್.ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಇತರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.