ಮಡಿಕೇರಿ,ಆ.12: ಸರಣಿ ಭೂಕಂಪನ, ಜಲಸ್ಫೋಟ ಮತ್ತು ನಿರಂತರ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಚೆಂಬು ಗ್ರಾಮದ ಸಮಸ್ಯೆಗಳನ್ನು ಅವಲೋಕಿಸಲು ಹಾಗೂ ಪರಿಹಾರದ ಕುರಿತು ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಲು ಆ.13 ರಂದು ಗ್ರಾಮ ವಾಸ್ತವ್ಯ ಮಾಡುವುದಾಗಿ ಜಾತ್ಯತೀತ ಜನತಾದಳದ ಮುಖಂಡ ನಾಪಂಡ ಮುತ್ತಪ್ಪ ಹಾಗೂ ವಕೀಲ ಡಾ.ಯಾಲದಾಳು ಮನೋಜ್ ಬೋಪಯ್ಯ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಚೆಂಬು ಗ್ರಾಮಸ್ಥರು ಅನೇಕ ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇತ್ತೀಚೆಗೆ ಸುರಿದ ಮಹಾಮಳೆಯ ಪರಿಣಾಮ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೆ ಮುಂದೆ ಅನಾಹುತ ಎದುರಾಗಬಹುದೆನ್ನುವ ಆತಂಕದಲ್ಲಿದ್ದಾರೆ. ಆದ್ದರಿಂದ ತಕ್ಷಣ ಸರ್ಕಾರ ಗ್ರಾಮಸ್ಥರ ನೆರವಿಗೆ ಬರಬೇಕೆಂದು ಒತ್ತಾಯಿಸಿದ್ದಾರೆ.
ಚೆಂಬು ಗ್ರಾಮದ ಸಮಸ್ಯೆಗಳನ್ನು ಕಲೆ ಹಾಕಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು. ಇದಕ್ಕೆ ಸೂಕ್ತ ಸ್ಪಂದನೆ ದೊರೆಯದಿದ್ದಲ್ಲಿ ಕಾನೂನು ಹೋರಾಟ ನಡೆಸಿ ಗ್ರಾಮಸ್ಥರ ಪರವಾಗಿ ನ್ಯಾಯ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.
ಚೆಂಬು ವ್ಯಾಪ್ತಿಯ ಜೆಡಿಎಸ್ ಪ್ರಮುಖ ರಜಿತ್ ಪಾಲ್ತಾಡು ಅವರ ಸಹಕಾರದೊಂದಿಗೆ ಒಂದು ದಿನದ ಗ್ರಾಮ ವಾಸ್ತವ್ಯ ಮಾಡಲಾಗುತ್ತಿದ್ದು, ಗ್ರಾಮಸ್ಥರು ತಮ್ಮ ನೋವನ್ನು ಹಂಚಿಕೊಳ್ಳಬಹುದೆಂದು ನಾಪಂಡ ಮುತ್ತಪ್ಪ ತಿಳಿಸಿದ್ದಾರೆ.