ಮಡಿಕೇರಿ, ಆ.4: ವಿದ್ಯುತ್ ಸಂಪರ್ಕ ಕಲ್ಪಿಸುವ ಸಂದರ್ಭ ಕೆಇಆರ್ಸಿ ನಿಯಮ ಉಲ್ಲಂಘಿಸಿ ಗ್ರಾಹಕರಿಂದ ಅಧಿಕ ಹಣ ಪಡೆದ ಚೆಸ್ಕಾಂ ಸಂಬಂಧಿಸಿದ ನಾಲ್ವರು ಗ್ರಾಹಕರಿಗೆ ಹಣ ಮರಳಿಸಬೇಕೆಂದು ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು ನೀಡಿದೆ.
ಲೇಔಟ್ ಗಳನ್ನು ಹೊರತು ಪಡಿಸಿ ಉಳಿದ ನಿವೇಶನಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಂದರ್ಭ ಕೆಇಆರ್ಸಿ ನಿಯಮದನ್ವಯ ಅಭಿವೃದ್ಧಿ ಶುಲ್ಕ ಪಡೆಯಲು ಅವಕಾಶವಿಲ್ಲ. ಆದರೆ ಮಡಿಕೇರಿಯ ನಗರದ ಎಂ.ಕೆ.ಅರುಣ್ ಕುಮಾರ್, ಎಫ್.ಜೋಸೆಫ್, ಎಸ್. ಈ. ಹೇಮನಾಥ್ ಹಾಗೂ ಜಿ.ಮಹೇಶ್ವರಿ ಎಂಬುವವರಿಂದ ಕೆಇಆರ್ಸಿ ನಿಯಮದಡಿ ಅಧಿಕ ಶುಲ್ಕ ವಿಧಿಸಿದ ಆರೋಪವನ್ನು ಚೆಸ್ಕಾಂ ಎದುರಿಸುತ್ತಿತ್ತು.
ಕೊಡಗು ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಸಂಘ ಗ್ರಾಹಕರ ಹಿತದೃಷ್ಟಿಯಿಂದ ಚೆಸ್ಕಾಂ ಅಧಿಕಾರಿಗಳ ಈ ಕ್ರಮವನ್ನು ವಿರೋಧಿಸಿತ್ತು. ಆದರೆ ಅಧಿಕಾರಿಗಳು ಕೆಇಆರ್ಸಿ ನಿಯಮವನ್ನು ಸಮರ್ಥಿಸಿಕೊಂಡ ಹಿನ್ನೆಲೆ ಸಂಬಂಧಿಸಿದ ನಾಲ್ವರು ಗ್ರಾಹಕರು ನ್ಯಾಯಕೋರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೆಟ್ಟಿಲೇರಿದ್ದರು. ಸುದೀರ್ಘ ವಿಚಾರಣೆ ನಡೆಸಿದ ಆಯೋಗ ಚೆಸ್ಕಾಂ ಕೆಇಆರ್ಸಿ ನಿಯಮ ಉಲ್ಲಂಘಿಸಿರುವುದನ್ನು ಪ್ರತಿಪಾದಿಸಿ ಗ್ರಾಹಕರ ಹಣವನ್ನು ಮರಳಿಸುವಂತೆ ತೀರ್ಪು ನೀಡಿದೆ.
ಎಂ.ಕೆ.ಅರುಣ್ ಕುಮಾರ್ ಅವರ ಪ್ರಕರಣ ಸಿಸಿ ಸಂಖ್ಯೆ:68/2019ರಲ್ಲಿ ವಿದ್ಯುತ್ ಸಂಪರ್ಕಕ್ಕೆ ಹೆಚ್ಚಿಗೆ ಪಡೆದ ಮೊತ್ತ ರೂ.12 ಸಾವಿರವನ್ನು ಹಿಂತಿರುಗಿಸತಕ್ಕದ್ದು, ತಪ್ಪಿದಲ್ಲಿ ಶೇ.6 ರ ಬಡ್ಡಿ ದರದಂತೆ ಆದೇಶದ ದಿನಾಂಕದಿಂದ 45 ದಿನದ ಒಳಗೆ ಪಾವತಿಸಬೇಕು.
ಎಫ್.ಜೋಸೆಫ್ ಅವರ ಪ್ರಕರಣ ಸಿ.ಸಿ. ಸಂಖ್ಯೆ: 69/2019ರಲ್ಲಿ ವಿದ್ಯುತ್ ಸಂಪರ್ಕಕ್ಕೆ ಹೆಚ್ಚಿಗೆ ಪಡೆದ ಮೊತ್ತ ರೂ.16,650 ಗಳನ್ನು ಹಿಂತಿರುಗಿಸತಕ್ಕದ್ದು, ತಪ್ಪಿದಲ್ಲಿ ಶೇ.6 ಬಡ್ಡಿಯಂತೆ ಆದೇಶದ ದಿನಾಂಕದಿಂದ 45 ದಿನದ ಒಳಗೆ ಪಾವತಿಸಬೇಕು.
ಎಸ್.ಈ.ಹೇಮನಾಥ್ ಅವರ ಪ್ರಕರಣ ಸಿಸಿ ಸಂಖ್ಯೆ 70/2019ರಲ್ಲಿ ವಿದ್ಯುತ್ ಸಂಪರ್ಕಕ್ಕೆ ಹೆಚ್ಚಿಗೆ ಪಡೆದ ಮೊತ್ತ ರೂ.24 ಸಾವಿರವನ್ನು ಹಿಂತಿರುಗಿಸತಕ್ಕದ್ದು, ತಪ್ಪಿದಲ್ಲಿ ಶೇ.6 ಬಡ್ಡಿಯಂತೆ ಆದೇಶದ ದಿನಾಂಕದ 45 ದಿನದ ಒಳಗೆ ಪಾವತಿಸಬೇಕು.
ಜಿ.ಮಹೇಶ್ವರಿ ಅವರ ಪ್ರಕರಣ ಸಿ.ಸಿ ಸಂಖ್ಯೆ:71/2019ರಲ್ಲಿ ವಿದ್ಯುತ್ ಸಂಪರ್ಕಕ್ಕೆ ಹೆಚ್ಚಿಗೆ ಪಡೆದ ಮೊತ್ತ ರೂ.15,350 ಗಳನ್ನು ಹಿಂತಿರುಗಿಸತಕ್ಕದ್ದು, ತಪ್ಪಿದ್ದಲ್ಲಿ ಶೇ.6 ಬಡ್ಡಿಯಂತೆ ಆದೇಶದ ದಿನಾಂಕದ 45 ದಿನದ ಒಳಗೆ ಪಾವತಿಸಬೇಕು.
ಫರ್ಯಾದುದಾರರುಗಳಿಗೆ ಎದುರುದಾರರು ಜಂಟಿಯಾಗಿ ಅಥವಾ ಪ್ರತ್ಯೇಕವಾಗಿ ಪ್ರತಿ ಪ್ರಕರಣಗಳಿಗೆ ರೂ.10 ಸಾವಿರವನ್ನು ಪರಿಹಾರವಾಗಿ ನೀಡತಕ್ಕದ್ದು, ತಪ್ಪಿದಲ್ಲಿ ಶೇ.6 ಬಡ್ಡಿಯಂತೆ ಆದೇಶದ ದಿನಾಂಕದಿಂದ 45 ದಿನದ ಒಳಗೆ ಪಾವತಿಸಬೇಕು.
ಫರ್ಯಾದುದಾರರುಗಳ ನಾಲ್ಕು ಪ್ರಕರಣಗಳಲ್ಲಿ ಖರ್ಚು ವೆಚ್ಚಗಳಿಗೆ ಪ್ರತಿ ಪ್ರಕರಣಗಳಲ್ಲಿಯೂ ರೂ.5 ಸಾವಿರವನ್ನು ಪಾವತಿಸಲು ಎದುರುದಾರರು ಬಾದ್ಯರಾಗಿರುತ್ತಾರೆ. ಫರ್ಯಾದುದಾರರಿಗೆ ಉಂಟು ಮಾಡಿರುವ ಮಾನಸಿಕ ವೇದನೆಗೆ ರೂ.5 ಸಾವಿರವನ್ನು ಪಾವತಿಸಲು ಎದುರುದಾರರು ಬಾದ್ಯರಾಗಿರುತ್ತಾರೆ ಎಂದು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು ನೀಡಿದೆ.
ನಾಲ್ವರು ಗ್ರಾಹಕರ ಪರವಾಗಿ ವಕೀಲ ಯಾಲದಾಳು ಮನೋಜ್ ಬೋಪಯ್ಯ ವಾದ ಮಂಡಿಸಿದರು. ಈ ತೀರ್ಪನ್ನು ಸ್ವಾಗತಿಸಿರುವ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸತೀಶ್ ಪೂಣಚ್ಚ, ಪ್ರಧಾನ ಕಾರ್ಯದರ್ಶಿ ಪಿ.ಎನ್.ರವಿಚಂದ್ರ ಹಾಗೂ ಖಜಾಂಚಿ ಮಹಮ್ಮದ್ ಷರೀಫ್ ಚೆಸ್ಕಾಂ ಅಧಿಕಾರಿಗಳು ನಿಯಮ ಉಲ್ಲಂಘಿಸುವುದರಿಂದ ಗ್ರಾಹಕರಿಗೆ ಹೊರೆಯಾಗುತ್ತಿತ್ತು. ಇನ್ನು ಮುಂದೆ ಈ ರೀತಿಯ ಪ್ರಕರಣಗಳು ಮರುಕಳಿಸಬಾರದು ಎಂದು ತಿಳಿಸಿದ್ದಾರೆ.