ಮಡಿಕೇರಿ: ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯನ್ನು ನಂಬದೆ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆ ಚುನಾವಣೆಯಲ್ಲಿ ಆಶೀರ್ವಾದ ಮಾಡಿ ಎಂದು ಕೊಡಗಿನ ಜನರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಜಿಲ್ಲೆಯ ವಿರಾಜಪೇಟೆಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು ಕೊಡಗಿನ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಕ್ಕೆ ಜನತೆಗೆ ಧನ್ಯವಾದಗಳನ್ನು ತಿಳಿಸಿದರು. ಕಾಂಗ್ರೆಸ್ ಪಕ್ಷ ದೀರ್ಘ ಇತಿಹಾಸ ಹೊಂದಿರುವ ಪಕ್ಷವಾಗಿದ್ದು, ಸ್ವಾತಂತ್ರ್ಯಕ್ಕೆ ಹೋರಾಡಿದೆ. ಈಗಿರುವ ಬಿಜೆಪಿ ಯಾವತ್ತೂ ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿ ಆದ ಪಕ್ಷ ಅಲ್ಲ. 1925ರಲ್ಲಿ ಆರ್ ಎಸ್ ಸ್ಎಸ್ ಪ್ರಾರಂಭ ಆದರೂ ಏಕೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ.
ಆರ್ ಎಸ್ ಎಸ್, ಜನಸಂಘ ಆಗಲೀ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಕೊಟ್ಟಿದ್ದು, ಸಂವಿಧಾನ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ, ಬಿಜೆಪಿ ಅಲ್ಲ. ಅವತ್ತು ನಿಮಗೆ ದೇಶ ಭಕ್ತಿ ಇರಲಿಲ್ವಾ ಅಂತ ಬಿಜೆಪಿಯವರನ್ನ ಪ್ರಶ್ನಿಸಿದ ಸಿಎಂ ಏನ್ ಮಾಡಿದೆ ಕಾಂಗ್ರೆಸ್ ಅಂತ ಕೇಳ್ತೀರಾ? ದೇಶದ ಅಣೆಕಟ್ಟು ಕಟ್ಟಿದ್ದು ಕಾಂಗ್ರೆಸ್. ಒಂದೇ ಒಂದು ಅಣೆಕಟ್ಟು ಕಟ್ಟಿದ್ದು ತೋರಿಸಿದ್ರೆ ನಾ ನಿಮ್ಮ ವಿರುದ್ಧ ಮಾತಾಡೋದನ್ನ ನಿಲ್ಲಿಸ್ತೀನಿ. ಹಸಿರು ಕ್ರಾಂತಿ ಮಾಡಿದ್ದು ಕಾಂಗ್ರೆಸ್, ಇದು ಬಿಜೆಪಿಯವರು ಮಾಡಿದ್ರಾ? ಎಂದು ಪ್ರಶ್ನಿಸಿದರು.
ನಾವು ಬಂದಿದ್ದು ಸಂವಿಧಾನ ಬದಲಾಯಿಸಲು ಅಂತ ಅನಂತ್ ಕುಮಾರ್ ಹೆಗ್ಡೆ ಹೇಳ್ತಾರೆ. ಅವರ ವಿರುದ್ಧ ಬಿಜೆಪಿ ಕ್ರಮ ತೆಗೆದುಕೊಂಡಿಲ್ಲ, ಅಲ್ಲೇ ಎಲ್ಲವೂ ಗೊತ್ತಾಗುತ್ತದೆ. ಈ ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ. ಇವತ್ತು ದೇಶ ಅಭಿವೃದ್ದಿ ಆಗಿದ್ರೆ ಅದಕ್ಕೆ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಸರ್ಕಾರ ಕಾರಣ. ಕಳೆದ ಬಾರಿ ಸಿಎಂ ಆಗಿದ್ದಾಗ 165 ಭರವಸೆಯಲ್ಲಿ 158 ಭರವಸೆ ಈಡೇರಿಸಿದ್ದೆ. ಅದೇ ಬಿಜೆಪಿಯವರು 2018ರಲ್ಲಿ 600 ಭರವಸೆ ಕೊಟ್ಟು ಕೇವಲ ಶೇ.10ರಷ್ಟು ಭರವಸೆ ಈಡೇರಿಸಿದ್ದಾರೆ. ನರೇಂದ್ರ ಮೋದಿಜಿ ನೀವು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸ್ತೀನಿ ಅಂದಿದ್ರಲ್ಲಾ ಮಾಡಿದೀರ..? ಬೆಲೆ ಏರಿಕೆ ತಡೆದು ಅಚ್ಛೇ ದಿನ್ ತರುತ್ತೀವಿ ಅಂದಿದ್ರಿ, ಬೆಲೆ ಏನಾಗಿದೆ ಅಂತ ಗೊತ್ತಾ..? ಸಬ್ ಕಾ ಸಾಥ್ ಸಬ್ ಕಾ ವಿಕಾಸ್.. ಕಹಾಹೆ ಹೋ…? ನರೇಂದ್ರ ಮೋದೀಜಿ ಕ್ಯೋ ಇತುನೆ ಜೂಟ್ ಬೋಲಿಯೇ..? ಎಂದು ಕಿಚಾಯಿಸಿದರು.
ನಾವು ಯಾವತ್ತೂ ಜಾತಿ, ಭಾಷೆ ಧರ್ಮದ ಆಧಾರದ ಮೇಲೆ ವಿಂಗಡಣೆ ಮಾಡಲು ಹೋಗಲ್ಲ. ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ಭದ್ಧತೆ ಇರೋದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ಎನ್ ಡಿಆರ್ ಎಫ್ ಹಣ ಕೇಂದ್ರದ ಅನುದಾನ ಅಲ್ಲ ನಮಗೆ ಕೊಡಬೇಕಾದ ಹಣ. ಅದನ್ನು ಇವತ್ತಿನವರೆಗೂ ಒಂದು ಬಿಡಿಗಾಸೂ ಕೂಡ ಕೇಂದ್ರ ಬಿಡುಗಡೆ ಮಾಡಿಲ್ಲ ಎಂದು ದೂರಿದರು. ಇನ್ನು ಸಂಸದ ಪ್ರತಾಪ್ ಸಿಂಹಗೆ ಟಾಂಗ್ ನೀಡಿದ ಅವರು ಮಿಸ್ಟರ್ ಪ್ರತಾಪ್ ಸಿಂಹ ಕೊಡಗಿಗೆ ಏನು ಮಾಡಿದ್ದೀರ..? ಸುಳ್ಳು ಹೇಳೋದು, ರೈಲು ಬಿಡೋದು ಬಿಟ್ಟು ನೀನು ಬೇರೆ ಏನು ಮಾಡಿಲ್ಲ. ರೈಲು ಬಿಡೋದ್ರಲ್ಲಿ ಮಾತ್ರ ಪ್ರತಾಪ ನಿಂದು, ಸುಳ್ಳು ಹೇಳೋದನ್ನ ಬಿಡು ಎಂದು ಸಲಹೆ ನೀಡಿದರು.