ಮಡಿಕೇರಿ: ಬುಡಕಟ್ಟು ಜನರು ಅರಣ್ಯದಲ್ಲಿ ಸಂಗ್ರಹಿಸುವ ಕಿರು ಅರಣ್ಯ ಉತ್ಪನ್ನಗಳಿಗೆ ಉತ್ತಮ ಬೆಲೆ ಕಲ್ಪಿಸುವಲ್ಲಿ ವನ-ಧನ ವಿಕಾಸ ಕೇಂದ್ರ ತೆರೆಯಲು ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಅವಕಾಶ ಮಾಡಿದೆ ಎಂದು ಐಟಿಡಿಪಿ ಇಲಾಖಾ ಅಧಿಕಾರಿ ಶ್ರೀನಿವಾಸ ಅವರು ತಿಳಿಸಿದ್ದಾರೆ.
ವನ-ಧನ ವಿಕಾಸ ಕೇಂದ್ರಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿದ ಐಟಿಡಿಪಿ ಇಲಾಖಾ ಅಧಿಕಾರಿ ಶ್ರೀನಿವಾಸ ಅವರು, ಕಿರು ಅರಣ್ಯ ಉತ್ಪನ್ನಗಳಿಗೆ ಬೆಂಬಲ ಬೆಲೆ ಒದಗಿಸುವ ಸಂಬಂಧ ವನ-ಧನ ಕೇಂದ್ರಗಳನ್ನು ಸ್ಥಾಪಿಸಿ ಕಿರು ಅರಣ್ಯ ಉತ್ಪನ್ನಗಳ ಮೌಲ್ಯವರ್ಧಿತ ಮಾರುಕಟ್ಟೆ ಸೃಜಿಸುವ ಮೂಲಕ ಬುಡಕಟ್ಟು ಜನರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡುವುದು ಈ ಕಾರ್ಯಕ್ರಮದ ಉಧೇಶವಾಗಿದೆ ಎಂದರು.
ಜಿಲ್ಲೆಯಲ್ಲಿ ವನ ಧನ ವಿಕಾಸ ಕೇಂದ್ರ ಸ್ಥಾಪಿಸಲು ಕನಿಷ್ಟ 20 ಸದಸ್ಯರನ್ನೊಳಗೊಂಡ 15 ಸ್ವಸಹಾಯ ಸಂಘಗಳ 300 ಸದಸ್ಯರನ್ನು ಆಯ್ಕೆ ಮಾಡಬೇಕಿದೆ. ಆದರೆ ಕಜಲ್ಲೆಯಲ್ಲಿ ಲ್ಯಾಂಪ್ಸ್ ಸಹಕಾರದೊಂದಿಗೆ ವನ-ಧನ ವಿಕಾಸ ಕೇಂದ್ರ ಸ್ಥಾಪಿಸಲು 300 ಸದಸ್ಯರನ್ನು ಗುರುತಿಸಲಾಗಿದೆ. ಅದರಂತೆ ಜಿಲ್ಲೆಯಲ್ಲಿ ಮೂರು ಸಂಘಗಳನ್ನು ಗುರುತಿಸಲಾಗಿದೆ ಎಂದು ನುಡಿದರು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನೆ (ಎನ್ಆರ್ಎಲ್ಎಂ) ಯಡಿ ನಾಗರಹೊಳೆಯಲ್ಲಿ ಜೇನು ಸಾಕಾಣಿಕೆ ಮತ್ತು ಸಂರಕ್ಷಣೆ ಹಾಗೂ ಲ್ಯಾಂಟೇನಾ ಪೀಠೋಪಕರಣ ತಯಾರಿಕೆ, ಬಸವನಹಳ್ಳಿಯಲ್ಲಿ ಸೀಗೆಹುಡಿ ಸಂಗ್ರಹಣೆ ಮತ್ತು ಸಂಸ್ಕರಣೆ ಹಾಗೂ ಬಿದಿರಿನಿಂದ ಬುಟ್ಟಿ ಮತ್ತು ಕರಕುಶಲ ವಸ್ತುಗಳ ತಯಾರಿಕೆ, ಹಾಗೆಯೇ ಮಡಿಕೇರಿ ತಾಲೂಕಿನ ಮದೆ ಗ್ರಾಮದಲ್ಲಿ ಜೇನು ಸಂಗ್ರಹಣೆ ಹಾಗೂ ಸಂರಕ್ಷಣೆ ಜೊತೆಗೆ ಕಾಚಂಪುಳಿ ತಯಾರಿಕಾ ಘಟಕ ಆರಂಭಿಸಲು ಈ ಸಂಘಗಳನ್ನು ಸ್ಥಾಪಿಸಲಾಗಿದೆ ಎಂದು ಶ್ರೀನಿವಾಸ ಅವರು ವಿವರಿಸಿದರು.
800ಕ್ಕೂಅಧಿಕ ಸದಸ್ಯರು:
ಬಸವನಹಳ್ಳಿ ವ್ಯಾಪ್ತಿಯ 27 ಸಂಘದಿಂದ 354 ನಾಗರಹೊಳೆ 22 ಸಂಘದಿಂದ 298 ಸದಸ್ಯರು, ಮಡಿಕೇರಿ ತಾಲೂಕಿನ ಮದೆ ಗ್ರಾಮದ 26 ಸಂಘದಿಂದ 240 ಸದಸ್ಯರು ಇದ್ದು, ಈ ಸಂಘಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯಕಾರಿ ಮಂಡಳಿ ರಚಿಸಲಾಗಿದೆ.
ಕಿರು ಅರಣ್ಯ ಉತ್ಪನ್ನ ಸಂಬಂಧಿಸಿದಂತೆ ಮೂರು ತಾಲೂಕಿನ ಮೂರು ಸ್ವಸಹಾಯ ಸಂಘದ 20 ಮಂದಿಗೆ ತರಬೇತಿ ನೀಡಲಾಗುತ್ತದೆ. ಈ 20 ಮಂದಿ ಉಳಿದ ಸದಸ್ಯರಿಗೆ ಮಾಹಿತಿ ನೀಡಲಿದ್ದಾರೆ ಎಂದು ಐಟಿಡಿಪಿ ಇಲಾಖಾ ಅಧಿಕಾರಿ ಅವರು ತಿಳಿಸಿದರು.
ಮಾಹಿತಿ ಪಡೆದು ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು, ಬುಡಕಟ್ಟು ಜನರು ಅರಣ್ಯದಲ್ಲಿ ಸಂಗ್ರಹಿಸುವ ಕಿರು ಅರಣ್ಯ ಉತ್ಪನ್ನ ಸಂಬಂಧಿಸಿದಂತೆ ಅರಣ್ಯ ಇಲಾಖೆ ಜೊತೆ ಸಮನ್ವಯ ಸಾಧಿಸಿ ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಸಮನ್ವಯ ಅಧಿಕಾರಿ ಕುಮಾರ್ ಅವರು ವನಧನ ಕಾರ್ಯಕ್ರಮ ಅನುಷ್ಠಾನ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬಾನಾ ಎಂ.ಶೇಖ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಾಷಾ, ನಗರಸಭೆಯ ರೇಖಾ, ಬಿಸಿಎಂ ಇಲಾಖೆ ಅಧಿಕಾರಿ ಕವಿತಾ, ಐಟಿಡಿಪಿ ಇಲಾಖೆಯ ವ್ಯವಸ್ಥಾಪಕ ದೇವರಾಜು, ನವೀನ್ ಮತ್ತಿತರರು ಇದ್ದರು.