ಮಡಿಕೇರಿ: ಟಿಪ್ಪು ಮತ್ತು ಫ್ರೆಂಚ್ ದಾಳಿಕೋರರು ಕೊಡವರನ್ನು ಹತ್ಯೆಗೀಡು ಮಾಡಿದ ಪ್ರದೇಶವಾದ ದೇವಟ್ ಪರಂಬನ್ನು ಅಂತರಾಷ್ಟ್ರೀಯ ಹತ್ಯಾಕಾಂಡದ ಸ್ಮರಣೀಯ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ.
ಜಿಲ್ಲೆಯ ದೇವಟ್ ಪರಂಬುನಲ್ಲಿ ಟಿಪ್ಪು ಮತ್ತು ಫ್ರೆಂಚ್ ದಾಳಿಕೋರರಿಂದ ಹತ್ಯೆಗೀಡಾದ ಕೊಡವರಿಗೆ ಶ್ರದ್ಧಾಂಜಲಿ ಅರ್ಪಿಸುವ ಮಾಸಿಕ ಕಾರ್ಯಕ್ರಮದಲ್ಲಿ ಮಡಿದ ಹಿರಿಯರಿಗೆ ಪುಷ್ಪನಮನ ಸಲ್ಲಿಸಿ ಪ್ರಾರ್ಥಿಸಿ ಮಾತನಾಡಿದ ಅವರು, ನರಮೇಧ ಘಟನೆಯನ್ನು ಅಂತರರಾಷ್ಟ್ರೀಯ ಹತ್ಯಾಕಾಂಡದ ಸ್ಮರಣೆಯ ಪಟ್ಟಿಯಲ್ಲಿ ಸೇರಿಸಬೇಕೆಂದರು.
ಟಿಪ್ಪು ನಡೆಸಿದ 32ಕ್ಕೂ ಹೆಚ್ಚು ಆಕ್ರಮಣವನ್ನು ವಿಫಲಗೊಳಿಸಿದ ಕೊಡವರು ರಾಜ್ಯವನ್ನು ರಕ್ಷಿಸಿದರು. ತನ್ನ ಸೋಲಿನ ಸೇಡು ತೀರಿಸಿಕೊಳ್ಳಲು ಹೊಂಚು ಹಾಕಿದ ಟಿಪ್ಪು ಬುಡಕಟ್ಟು ಕೊಡವರನ್ನು ಹತ್ಯೆ ಮಾಡಿದನು. ಇದೊಂದು ಹೇಯ ಕೃತ್ಯವಾಗಿದ್ದು, ಕೊಡವ ಜನಾಂಗಕ್ಕೆ ಮಾಡಿದ ಘೋರ ಅನ್ಯಾಯವಾಗಿದೆ ಎಂದು ವಿವರಿಸಿದ ಅವರು ಈ ಘಟನೆಯ ಸ್ಮರಣೆಗಾಗಿ ದೇವಟ್ಪರಂಬುವಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಸ್ಮರಣೆಯ ಪಟ್ಟಿಯಲ್ಲಿ ಸೇರಿಸುವುದರೊಂದಿಗೆ ಸ್ಮಾರಕ ನಿರ್ಮಿಸಬೇಕೆಂದು ಒತ್ತಾಯಿಸಿದರು.
ಕೊಡವ ಬುಡಕಟ್ಟು ಜನಾಂಗಕ್ಕೆ ಭೌಗೋಳಿಕ ಮತ್ತು ರಾಜಕೀಯ ಸ್ವಾಯತ್ತತೆ ನೀಡಬೇಕು, ಕೊಡವರನ್ನು ಬುಡಕಟ್ಟು ಜನಾಂಗವೆಂದು ಘೋಷಿಸಿ ಎಸ್ಟಿ ಟ್ಯಾಗ್ ನೀಡುವುದರೊಂದಿಗೆ ಜನಾಂಗದ ಸಮಗ್ರ ಸಬಲೀಕರಣಕ್ಕೆ ಸರಕಾರ ಮುಂದಾಗಬೇಕು, ಸಂವಿಧಾನದ 25 ಮತ್ತು 26 ನೇ ವಿಧಿಗಳಡಿಯಲ್ಲಿ ಕೊಡವ ಬುಡಕಟ್ಟು ಜನಾಂಗದ “ಸಂಸ್ಕಾರ ಗನ್” ಗೆ ಸಂವಿಧಾನಿಕ ಖಾತ್ರಿ ನೀಡಬೇಕು. ಕೊಡವ ಭಾಷೆಯನ್ನು 8ನೇ ಶೆಡ್ಯೂಲ್ಗೆ ಸೇರಿಸಬೇಕು, ಯುಎನ್ಒ ಮೂಲಕ ವಿಶೇ? ಜನಾಂಗೀಯ ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡಬೇಕೆಂದು ಆಗ್ರಹಿಸಿದರು.
ಈ ವೇಳೆ ಸಿಎನ್ಸಿ ಪ್ರಮುಖರಾದ ಕಲಿಯಂಡ ಪ್ರಕಾಶ್, ಪಟ್ಟಮಾಡ ಕುಶ, ಅರೆಯಡ ಗಿರೀಶ್, ಅಲ್ಮಂಡ ಜೈ, ಮಂದಪಂಡ ದೀಪು, ಕಾಟುಮಣಿಯಂಡ ಉಮೇಶ್, ಕಾಟುಮಣಿಯಂಡ ಲೆಹರ್ ಮೊದಲಾದವರು ಪಾಲ್ಗೊಂಡಿದ್ದರು.