ಮಡಿಕೇರಿ: ಕೊಡವ ಸಂಪ್ರದಾಯ ಮತ್ತು ಸಂಸ್ಕೃತಿಗೆ ಧಕ್ಕೆ ತರುವ ಪ್ರಕ್ರಿಯೆಗಳು ಇತ್ತೀಚೆಗೆ ಕಂಡು ಬರುತ್ತಿದ್ದು, ಇದು ಹೀಗೆ ಮುಂದುವರೆದರೆ ಕಾರಣಕರ್ತರ ವಿರುದ್ಧ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ಪೊನ್ನಂಪೇಟೆ ಕೊಡವ ಸಮಾಜದ ನಿರ್ದೇಶಕ ಚೆಪ್ಪುಡಿರ ರಾಕೇಶ್ ದೇವಯ್ಯ ಎಚ್ಚರಿಕೆ ನೀಡಿದ್ದಾರೆ.
ಅತ್ಯಂತ ಸೂಕ್ಷ್ಮ ಮತ್ತು ಸಣ್ಣ ಜನಾಂಗವಾಗಿರುವ ಕೊಡವರಲ್ಲಿ ವಿಶಿಷ್ಟ ಸಂಪ್ರದಾಯ ಆಚರಣೆಯಲ್ಲಿದೆ. ಅದರಲ್ಲೂ ವಿವಾಹ ಸಮಾರಂಭದಲ್ಲಿ ದೇಶದ ಯಾವುದೇ ಭಾಗದಲ್ಲಿ ಇಲ್ಲದ ವಿಭಿನ್ನವಾದ ಆಚಾರ, ವಿಚಾರಗಳನ್ನು ಅನುಸರಿಸಲಾಗುತ್ದೆ. ಕೊಡವ ಸಮುದಾಯ ಹಾಗೂ ಕೊಡವ ಸಂಸ್ಕೃತಿ ತನ್ನದೇ ಆದ ಗೌರವವನ್ನು ಪಡೆದುಕೊಂಡಿದೆ. ಆದರೆ ಕೆಲವರು ವಿವಾಹವಾಗುವ ಸಂದರ್ಭ ಕೊಡವ ಸಂಪ್ರದಾಯವನ್ನು ತಮಗೆ ಇಷ್ಟ ಬಂದಂತೆ ಬಳಸಿಕೊಂಡು ಅವಮಾನಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಕೊಡವ ವಿವಾಹವೊಂದರ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೊಡವ ಸಂಸ್ಕೃತಿಯ ಕಟ್ಟುಪಾಡುಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಈ ವಿವಾಹಕ್ಕೆ ಸಂಬಂಧಿಸಿದ ಕುಟುಂಬಗಳ ಸದಸ್ಯರು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿರುವ ರಾಕೇಶ್ ದೇವಯ್ಯ, ತಪ್ಪಿದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಯಾವುದೇ ಸಮುದಾಯದ ಮೂಲ ಸಂಸ್ಕೃತಿಗೆ ದಕ್ಕೆ ತರುವ ಅಥವಾ ಅವಮಾನಿಸುವ ಪ್ರಕರಣಗಳು ನಡೆದಾಗ ನ್ಯಾಯಾಲಯದ ಮೆಟ್ಟಿಲೇರಲು ಅವಕಾಶ ಕಲ್ಪಿಸಲಾಗಿದೆ. ಇದರ ಆಧಾರದಡಿ ಸಂಬಂಧಿಸಿದ ಎಲ್ಲಾ ವ್ಯಕ್ತಿಗಳ ವಿರುದ್ಧ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಕೊಡವ ಸಂಪ್ರದಾಯವನ್ನು ಆಚರಿಸುವ ಸಂದರ್ಭ ಯಾವುದೇ ಆಚಾರ, ವಿಚಾರಗಳಿಗೆ ಕಳಂಕವಾಗದಂತೆ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕೆಂದು ಅವರು ಮನವಿ ಮಾಡಿದ್ದಾರೆ.