ಕೊಡಗು: ಕರಿಮೆಣಸು ಕೊಯ್ಲು ಮಾಡುತ್ತಿದ್ದ ಸಂದರ್ಭ ಅಲ್ಯೂಮಿನಿಯಂ ಏಣಿಗೆ ವಿದ್ಯುತ್ ಸ್ಪರ್ಶಗೊಂಡು ಕಾರ್ಮಿಕ ಸಾವನ್ನಪ್ಪಿದ ಘಟನೆ ಸುಂಟಿಕೊಪ್ಪ ಸಮೀಪದ ಹರದೂರಿನಲ್ಲಿ ನಡೆದಿದೆ.
ಮೃತರನ್ನು ತಮಿಳುನಾಡು ಮೂಲದ ಜಮನಮತ್ ಗ್ರಾಮದ ಯುವಕ ವಿಜಯಕಾಂತ್ (20) ಎಂದು ಗುರುತಿಸಲಾಗಿದೆ.
ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಜಪ್ರಭ ಎಸ್ಟೇಟ್’ಗೆ ಕಳೆದ ಒಂದು ತಿಂಗಳ ಹಿಂದೆ ಕಾಫಿ ಕರಿಮೆಣಸು ಕೊಯ್ಲಿಗೆ ವಿಜಯಕಾಂತ್ ಕುಟುಂಬ ಸಮೇತ ಆಗಮಿಸಿದ್ದರು.
ಸೋಮವಾರ ಮಧ್ಯಾಹ್ನ ಎಲ್ಲರೂ ಊಟಕ್ಕೆ ಕುಳಿತಿದ್ದ ವೇಳೆ ವಿಜಯಕಾಂತ್ ಮೆಣಸು ಕುಯ್ಯಲು ಅಲ್ಯೂಮಿನಿಯಂ ಏಣಿಯೊಂದಿಗೆ ತೆರಳಿ ಕೆಲಸಕ್ಕೆ ತೊಡಗಿದ್ದಾರೆ. ಆದರೆ ಬಹಳ ಹತ್ತಿರವಿದ್ದ ವಿದ್ಯುತ್ ತಂತಿ ಏಣಿಗೆ ತಗುಲಿದ ಪರಿಣಾಮ ಕ್ಷಣ ಮಾತ್ರದಲ್ಲಿ ಆತ ಸುಟ್ಟು ಕರಕಲಾಗಿದ್ದಾರೆ. ಸ್ಥಳಕ್ಕೆ ಸುಂಟಿಕೊಪ್ಪ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.