ಮೈಸೂರು: ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಕುವೆಂಪು ನಗರದ ನವಿಲು ರಸ್ತೆಯ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಮಧ್ವನವಮಿಯನ್ನು ಮಧ್ವಾಚಾರ್ಯರ ಭಾವಚಿತ್ರಕ್ಕೆ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಈ ವೇಳೆ ಮೂಡ ಮಾಜಿ ಅಧ್ಯಕ್ಷ ಎಚ್ ವಿ ರಾಜೀವ್ ಮಾತನಾಡಿ, ಆಚಾರ್ಯ ಮಧ್ವರ ಸಂದೇಶಗಳು ಸಾರ್ವಕಾಲಿಕ ಮಾರ್ಗದರ್ಶಕವಾಗಿವೆ. ಅವರ ಗ್ರಂಥಗಳಲ್ಲಿ ಮಾನವೀಯ ಗುಣಗಳ ಉಲ್ಲೇಖವಿದೆ. ಮಧ್ವಮತದ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಅಗ್ರಗಣ್ಯರಲ್ಲಿ ಮಧ್ವಾಚಾರ್ಯರು ಒಬ್ಬರಾಗಿದ್ದಾರೆ ಎಂದರು.
ಹಿರಿಯ ಸಮಾಜ ಸೇವಕ ಕೆ ರಘುರಾಮ ವಾಜಪೇಯಿ ಮಾತನಾಡಿ, ಮಧ್ವರನ್ನು ಕೇವಲ ಒಂದು ದಿನ ಆರಾಧಿಸಿದರೆ ಸಾಲದು. ಪ್ರತಿನಿತ್ಯ ಅವರು ಪ್ರತಿಪಾದಿಸಿದ ತತ್ವ, ಸಿದ್ಧಾಂತಗಳ ಆಚರಣೆ ಮಾಡಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಜ್ಞಾನಕಾರ್ಯಗಳನ್ನು ಮಾಡಿ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು. ವಿಶ್ವಕ್ಕೆ ಪೂರ್ಣಪ್ರಜ್ಞ ದೃಷ್ಟಿಯನ್ನು ನೀಡಿದ ಮಧ್ವರ ಸ್ಮರಣೆ ಪ್ರತಿ ಕ್ಷಣವೂ ಆಗಬೇಕು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಎನ್ ಎಂ ನವೀನ್ ಕುಮಾರ್ ಮಾತನಾಡಿ ಉಡುಪಿ ಜಿಲ್ಲೆಯ ಪಾಜಕ ಗ್ರಾಮದ ಮಧ್ಯಗೇಹ ಭಟ್ಟ ಮತ್ತು ವೇದಾವತಿ ದಂಪತಿಗಳಿಗೆ ಜನಿಸಿದ ಆನಂದತೀರ್ಥರು ಪೂರ್ವಾಶ್ರಮದ ಬಳಿಕ ವಾಸುದೇವ ಮಧ್ವಾಚಾರ್ಯರಾಗಿ 13ನೇ ಶತಮಾನದಲ್ಲಿ ದ್ವೈತ ಮತದ ಸ್ಥಾಪಕರಾಗಿ ತತ್ವಜ್ಞಾನಿಗಳಾದರು, ಪುರಾಣದಲ್ಲಿ ಬರುವ ಹನುಮ ಮತ್ತು ಅವತಾರವೇ ಮಧ್ವಾಚಾರ್ಯರು, 74ನೇ ವಯಸ್ಸಿನಲ್ಲಿ ಬದರಿಕಾಶ್ರಮಕ್ಕೆ ಒಬ್ಬರೇ ಕಾಲ್ನಡಿಗೆಯಲ್ಲಿ ಪ್ರಯಾಣ ಹೋದ ದಿನವೇ ಮಧ್ವನವಮಿ ಎಂದು ಆಚರಿಸಲ್ಪಡುತ್ತದೆ. ಭಕ್ತಿಮಾರ್ಗದ ಪ್ರವರ್ತಕರಾದ ಮಧ್ವಾಚಾರ್ಯರು ಕನ್ನಡಲ್ಲಿ ದಾಸಪಂಥದ ಮಾರ್ಗ ಸಂಗೀತ ಕಲಾ ಪ್ರಕಾರದೊಡನೆ ಬೆಳೆಯಲು ಸ್ಪೂರ್ತಿಯಾದರು ಎಂದರು
ಎಸ್ ಬಿ ವಾಸುದೇವಮೂರ್ತಿ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ವಿನಯ್ ಕಣಗಾಲ್, ಪುನೀತ್ ಜಿ ಕುಡ್ಲೂರು, ವಿಕಾಸ್ ಶಾಸ್ತ್ರಿ, ರಂಗನಾಥ್, ಸುಚಿಂದ್ರ, ರಘು ಭಾರದ್ವಾಜ್, ಮಿರ್ಲೆ ಪನೀಶ್, ಕಡಕೋಳ ಜಗದೀಶ್, ಗುರುರಾಜ್, ವಿಜಯ್ ಕುಮಾರ್ ಹಾಗೂ ಇನ್ನಿತರರು ಹಾಜರಿದ್ದರು

