ಎಚ್.ಡಿ.ಕೋಟೆ: ಕಬಿನಿ ಹಿನ್ನೀರು ವ್ಯಾಪ್ತಿ ಪ್ರದೇಶ ಸೇರಿದಂತೆ ಕೇರಳದ ವೈನಾಡು ಪ್ರದೇಶದಲ್ಲಿ ಭಾರಿ ಮಳೆಯಾದ ಪರಿಣಾಮ ಕಬಿನಿ ಜಲಾಶಯ ಭರ್ತಿಯಾಗಿದ್ದು, 20 ಸಾವಿರ ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ.
ಈ ಬಾರಿ ಪೂರ್ವ ಮುಂಗಾರು ಕೈಕೊಟ್ಟು, ಮುಂಗಾರು ಮಳೆ ತಡವಾದ್ದರಿಂದ ಜಲಾಶಯ ಸಂಗ್ರಹ ಮಟ್ಟ ಭಾರಿ ಕುಸಿತ ಕಂಡು ಡೆಡ್ ಸ್ಟೋರೆಜ್ ಮಟ್ಟ ತಲುಪಿತ್ತು, ಇದರಿಂದ ಅಚ್ಚುಕಟ್ಟು ರೈತರ ನೀರಾವರಿ ಬೆಳೆಗಳಿಗೆ ಸಂಕಷ್ಟ ಎದುರಾಗುವುದಲ್ಲದೇ, ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವ ಆತಂಕ ಎದುರಾಗಿತ್ತು. ಅದರೆ ಕಳೆದ ಒಂದು ವಾರದಿಂದ ಕೇರಳದ ವೈನಾಡು ಸೇರಿದಂತೆ ಜಲಾಶಯದ ಹಿನ್ನೀರು ವ್ಯಾಪ್ತಿಯಲ್ಲಿ ಎಡಬಿಡದೆ ಮಳೆ ಅಬ್ಬರಿಸಿದ್ದರಿಂದ ಜಲಾಶಯದ ಒಳ ಹರಿವಿನ ಪ್ರಮಾಣ ಗಣನೀಯವಾಗಿ ಏರಿಕೆ ಕಂಡು ಪ್ರತಿನಿತ್ಯ 20 ಸಾವಿರ ಕ್ಯುಸೆಕ್ಗೂ ಹೆಚ್ಚು ನೀರು ಹರಿದು ಬಂದಿದ್ದರಿಂದ ಜಲಾಶಯ ಭರ್ತಿಯಾಗಿದೆ.
ಜಲಾಶಯ ಗರಿಷ್ಟ 2284 ಅಡಿಗಳಷ್ಟು ಸಂಗ್ರಹ ನೀರಿನ ಮಟ್ಟ ಹೊಂದಿದ್ದು, 25 ಸಾವಿರ ಕ್ಯುಸೆಕ್ಗೂ ಹೆಚ್ಚು ನೀರು ಹರಿದು ಬರುತ್ತಿರುವ ಕಾರಣ ಜಲಾಶಯದ ಸಂಗ್ರಹ ಮಟ್ಟವನ್ನು 2282 ಅಡಿಗಳಿಗೆ ಕಾಯ್ದುಕೊಂಡು ಒಳ ಬರುತ್ತಿರುವ 20 ಸಾವಿರಕ್ಕೂ ಹೆಚ್ಚು ನೀರನ್ನು ಮುಂಭಾಗದ ನದಿಗೆ ಹರಿಸಲಾಗುತ್ತಿದೆ. ಒಳ ಹರಿವು ನೋಡಿಕೊಂಡು ಹೊರ ಹರಿವು ಹೆಚ್ಚಿಸಲಾಗುವುದು ಎಂದು ಎಂದು ಕಬಿನಿ ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.
ಕಬಿನಿ ಜಲಾಶಯ ಭರ್ತಿಯಾಗಿ ಜಲಾಶಯದ ನಾಲ್ಕು ಕ್ರಸ್ಟ್ ಗೇಟ್ಗಳ ಮೂಲಕ 20 ಸಾವಿರಕ್ಕೂ ಹೆಚ್ಚು ನೀರು ಹೊರ ಹರಿಸುತ್ತಿರುವುದರಿಂದ ಮುಂಭಾಗದ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ, ಇದರಿಂದಾಗಿ ಈ ಭಾಗದ ಬೀದಹಳ್ಳಿ, ಎನ್.ಬೇಗೂರು ಪಂಚಾಯಿತಿಯ ಗ್ರಾಮಗಳು ಸೇರಿದಂತೆ 20 ಕ್ಕೂ ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು, ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ, ಜಲಾಶಯದ ಮೇಲೆ ಲಘು ವಾಹನಗಳಿಗೆ ಮಾತ್ರ ಸಂಚಾರ ಕಲ್ಪಿಸಲಾಗಿದೆ.