ನಂಜನಗೂಡು: ಮಳೆ ಬಂದರೆ ಗದ್ದೆಯಂತಾಗುವ ರಸ್ತೆ ಬಗ್ಗೆ ಗ್ರಾಮಸ್ಥರು ಕಿಡಿಕಾರಿದ್ದಾರೆ. ರಸ್ತೆಯನ್ನ ಅಭಿವೃದ್ದಿಪಡಿಸುವಂತೆ ನಿರಂತರವಾಗಿ ಮನವಿ ಮಾಡುತ್ತಿದ್ದರೂ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು, ಜನಪ್ರತಿನಿಧಿಗಳ ಬಗ್ಗೆ ಕಿಡಿಕಾರಿದ್ದಾರೆ. ಮುಂದಿನ ಚುನಾವಣೆಯಲ್ಲಿ ವೋಟ್ ಕೇಳಕ್ಕೆ ಬಂದಾಗ ಬುದ್ದಿ ಕಲಿಸ್ತೀವಿ ಅಂತ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಂಜನಗೂಡು ತಾಲ್ಲೂಕು ಹರದನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಹದೇವನಗರ ಗ್ರಾಮಸ್ಥರ ಪರಿಸ್ಥಿತಿ ಇದು. ಗ್ರಾಮಕ್ಕೆ ಸಂಪರ್ಕ ಕೊಡಲು ಇರುವುದೊಂದೆ ರಸ್ತೆ. ಅಭಿವೃದ್ದಿ ಕಾಣದೆ ರಸ್ತೆ ತೀವ್ರ ಹದಗೆಟ್ಟಿದೆ. ಮಳೆ ಬಂದರೆ ಮನುಷ್ಯರ ಓಡಾಟವಿರಲಿ ವಾಹನಗಳ ಸಂಚಾರವೂ ದುರ್ಗಮವಾಗುತ್ತದೆ.

ಗ್ರಾಮಕ್ಕೆ ಸರಿಯಾಗಿ ನೀರಿನ ವ್ಯವಸ್ಥೆ ಇಲ್ಲ, ವಿದ್ಯುತ್ ಕಣ್ಣಾಮುಚ್ಚಾಲೆ ಬೇಸರ ಉಂಟುಮಾಡಿದೆ. ಒಳಚರಂಡಿ ವ್ಯವಸ್ಥೆಯಂತೂ ಎಕ್ಕುಟ್ಟುಹೋಗಿದೆ, ಶಾಲೆ ಇಲ್ಲ, ಇಂತಹ ಪರಿಸ್ಥಿತಿಯಲ್ಲಿ ರಸ್ತೆಯೂ ಹದಗೆಟ್ಟರೆ ಗ್ರಾಮಸ್ಥರ ಸಹನೆಯ ಕಟ್ಟೆ ಒಡೆಯುತ್ತದೆ. ಗದ್ದೆಯಂತಾದ ರಸ್ತೆಯಲ್ಲಿ ಗ್ರಾಮಸ್ಥರು ಭತ್ತದ ನಾಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ದಿವಂಗತ ಮಾಜಿ ಶಾಸಕ ಬೆಂಕಿಮಹದೇವು ರವರ ಹೆಸರಿನಲ್ಲಿ ರಚನೆಯಾದ ಮಹದೇವನಗರದ ಗ್ರಾಮಸ್ಥರು ಮೂಲಭೂತ ಸೌಕರ್ಯ ಕಾಣದೆ ಹಿಡಿಶಾಪ ಹಾಕುತ್ತಿದ್ದಾರೆ. ರಸ್ತೆ ಅಭಿವೃದ್ದಿ ಪಡಿಸದಿದ್ದಲ್ಲಿ ಮುಂದಿನ ಚುನಾವಣೆಗಳಿಗೆ ಬಹಿಷ್ಕಾರ ಹಾಕುವ ಎಚ್ಚರಿಕೆ ನೀಡಿದ್ದಾರೆ. ಸ್ಥಳೀಯ ಶಾಸಕರಾದ ದರ್ಶನ್ ಧ್ರುವನಾರಾಯಣ್ ಇತ್ತ ಗಮನ ಹರಿಸಿ ಅಭಿವೃದ್ಧಿಪಡಿಸುವವರೇ ಕಾದು ನೋಡಬೇಕಿದೆ.