ಎಚ್.ಡಿ.ಕೋಟೆ: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ಇಪ್ಪಾತ್ತಾರು ಮಂದಿ ಭಾರತೀಯರನ್ನು ಬಲಿ ಪಡೆದ ನಂತರ ಪ್ರತೀಕಾರವಾಗಿ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪಾಕಿಸ್ತಾನದಲ್ಲಿದ್ದ 9 ಉಗ್ರರ ಅಡಗುತಾಣಗಳನ್ನು ಹೊಡೆದುರಿಳಿಸಿದ ನಂತರ ಭಾರತದ ಎಲ್ಲ ರಾಜ್ಯಗಳಲ್ಲೂ ಕಟ್ಟೆಚರ ವಹಿಸಲಾಗಿದೆ.
ಕೇಂದ್ರ ಗೃಹ ಸಚಿವಾಲಯ ಎಲ್ಲ ರಾಜ್ಯಗಳಿಗೂ ಈಗಾಗಲೇ ಮಾರ್ಗಸೂಚಿಗಳನ್ನು ಕಳುಹಿಸಿ ನಾಗರಿಕ ರಕ್ಷಣೆಗೆ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಸಲಹೆ ನೀಡಿದೆ. ಈ ಹಿನ್ನೆಲೆಯಲ್ಲಿ ನೀರು ಸಂಗ್ರಹಣೆಯ ಅಣೆಕಟ್ಟೆ, ಬಂದರು ಸೇರಿದಂತೆ ಸೂಕ್ಷ್ಮ ಪ್ರದೇಶಗಳಿಗೆ ಕೈಗಾರಿಕಾ ಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ. ರಾಜ್ಯದಲ್ಲಿಯೇ ಮೊದಲು ಭರ್ತಿಯಾಗುವ ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದ ಕಬಿನಿ ಜಲಾಶಯದಲ್ಲೂ ಭಾರಿ ಭದ್ರತೆ ಕೈಗೊಳ್ಳಲಾಗಿದೆ.
ಸುರಕ್ಷತೆ ದೃಷ್ಟಿಯಿಂದ ಜಲಾಶಯಕ್ಕೆ ಪ್ರವಾಸಿಗರಿಗೆ ನಿರ್ಭಂಧ ವಿಧಿಸಿದ್ದು, ಕೈಗಾರಿಕಾ ಭದ್ರತಾ ಪಡೆಯ (KSISF) ಇನ್ಸ್ ಪೆಕ್ಟರ್ ಬಿ.ಕೆ.ಜಗದೀಶ್ ನೇತೃತ್ವದಲ್ಲಿ ಹದಿಮೂರು ಪೇದೆಗಳು ಜಲಾಶಯದ ಮುಖ್ಯದ್ವಾರ, ಉತ್ತರ, ದಕ್ಷಿಣದ್ವಾರ ಹಾಗೂ ಬ್ರಿಡ್ಜ್ ಬಳಿ ದಿನದ 24 ಗಂಟೆಯೂ ನಿಗಾವಹಿಸಿದ್ದಾರೆ.
ತುರ್ತು ಸಂದರ್ಭದಲ್ಲಿ ಭದ್ರತಾ ಪಡೆಯ ಎಲ್ಲ ಸಿಬ್ಬಂದಿಗಳ ರಜೆಯನ್ನು ರದ್ದುಗೊಳಿಸಲಾಗಿದೆ. ಅಗತ್ಯ ಬಿದ್ದರೆ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಿಕೊಳ್ಳಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿಕೊಂಡಿದೆ.

