ಮೈಸೂರು: ಮೈಸೂರು ಚಾಮುಂಡಿಬೆಟ್ಟ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದರೂ ಕಸ ಎಸೆಯುವವರಿಗೇನು ಕೊರತೆಯಿಲ್ಲ. ಬೆಟ್ಟದ ತಪ್ಪಲು ಸೇರಿದಂತೆ ರಸ್ತೆಯುದ್ದಕ್ಕೂ ಪ್ಲಾಸ್ಟಿಕ್, ನೀರಿನ ಬಾಟಲಿ ಅಷ್ಟೇ ಅಲ್ಲದೆ ಮದ್ಯದ ಬಾಟಲಿಗಳನ್ನು ಎಸೆದು ಹೋಗುತ್ತಿರುವುದು ಕಂಡು ಬರುತ್ತಿದೆ.
ಬಹಳಷ್ಟು ಮಂದಿ ಬೆಟ್ಟದ ವ್ಯಾಪ್ತಿಯಲ್ಲಿ ಮದ್ಯ ಸೇವಿಸಿ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಾರೆ. ಈ ವ್ಯಾಪ್ತಿಯಲ್ಲಿ ಇಂತಹ ಚಟುವಟಿಕೆಗೆ ಅವಕಾಶವಿಲ್ಲದಿದ್ದರೂ ಕೂಡ ಪೊಲೀಸರ ಕಣ್ತಪ್ಪಿಸಿ ಮದ್ಯ ಸೇವಿಸುತ್ತಾರೆ. ಬಳಿಕ ಬಾಟಲಿಗಳನ್ನು ರಸ್ತೆಯಲ್ಲಿಯೇ ಬಿಟ್ಟು ಹೋಗುತ್ತಾರೆ. ದೇವಸ್ಥಾನದ ವ್ಯಾಪ್ತಿಯಲ್ಲಿಯೂ ಕೆಲವು ಪುಂಡರು ಬರ್ತ್ ಡೇ ಪಾರ್ಟಿಗಳನ್ನು ಮಾಡಿ ಬಾಟಲಿಗಳನ್ನು ಎಸೆದು ಕಸವನ್ನು ಹಾಕಿ ಹೋಗುವ ದೃಶ್ಯಗಳು ಆಗಾಗ್ಗೆ ಕಾಣಸಿಗುತ್ತಿರುತ್ತದೆ.
ಚಾಮುಂಡಿಬೆಟ್ಟವನ್ನು ಪ್ಲಾಸ್ಟಿಕ್ ಮತ್ತು ಕಸ ಮುಕ್ತ ಮಾಡಬೇಕೆಂದು ಪಣತೊಟ್ಟರೂ ಪ್ರಯೋಜನವಾಗುತ್ತಿಲ್ಲ. ಸಂಘ ಸಂಸ್ಥೆಗಳು ಆಗಾಗ್ಗೆ ಸ್ವಚ್ಛತಾ ಅಭಿಯಾನ ನಡೆಸುವ ಮೂಲಕ ಕಸಗಳನ್ನು ಸಂಗ್ರಹಿಸುವ ಕೆಲಸವನ್ನು ಮಾಡುತ್ತಾ ಬರುತ್ತಿವೆ. ಅದರಂತೆ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕುವೆಂಪುನಗರದ ಬಿಜಿಎಸ್ ಬಿ.ಇಡಿ ಕಾಲೇಜಿನ ಸುಮಾರು 170 ಜನ ಪ್ರಶಿಕ್ಷಣಾರ್ಥಿಗಳು ಸ್ವಚ್ಛತಾ ಕಾರ್ಯ ನಡೆಸಿದ್ದು ಈ ವೇಳೆ ರಾಶಿಗಟ್ಟಲೆ ಬಾಟಲಿ, ಪ್ಲಾಸ್ಟಿಕ್, ಕವರ್ ಗಳು ಹಾಗೂ ಇನ್ನಿತರ ತ್ಯಾಜ್ಯ ವಸ್ತುಗಳು ದೊರೆತಿದ್ದು, ಇದನ್ನು ನೋಡಿದ ಪ್ರಶಿಕ್ಷಣಾರ್ಥಿಗಳೇ ಒಂದು ಕ್ಷಣ ಹೌಹಾರಿದ್ದಾರೆ.
ಅರಣ್ಯ ಇಲಾಖೆ ಈಗಾಗಲೇ ಪ್ಲಾಸ್ಟಿಕ್ ಮುಕ್ತ ಚಾಮುಂಡಿ ಬೆಟ್ಟ ಅಭಿಯಾನವನ್ನು ನಡೆಸುತ್ತಿದ್ದು, ಅದಕ್ಕೆ ಬಿಜಿಎಸ್ ಬಿ.ಇಡಿ ಕಾಲೇಜಿನವರು ಕೈ ಜೋಡಿಸಿದ್ದಾರೆ. ಸದ್ಯ ನಗರ ಹಸಿರೀಕರಣ ಪ್ರಾದೇಶಿಕ ಅರಣ್ಯಾಧಿಕಾರಿ ಧನ್ಯಶ್ರೀ ಅವರ ಮಾರ್ಗದರ್ಶನದಲ್ಲಿ ಆರು ತಂಡಗಳಾಗಿ ವಿಂಗಡಿಸಿ ಚಾಮುಂಡಿ ಬೆಟ್ಟದ ದ್ವಾರದಿಂದ ಸ್ವಚ್ಛತಾ ಅಭಿಯಾನವನ್ನು ಪ್ರಾರಂಭಿಸಿದ್ದು, ಪ್ಲಾಸ್ಟಿಕ್, ಪ್ಲಾಸ್ಟಿಕ್ ಬಾಟಲಿ, ಮದ್ಯದ ಬಾಟಲಿ ಹಾಗೂ ಇನ್ನಿತರ ತ್ಯಾಜ್ಯ ವಸ್ತುಗಳನ್ನು ಸುಮಾರು 50ರಿಂದ60ಕ್ಕೂ ಹೆಚ್ಚು ಚೀಲಗಳಲ್ಲಿ ಸಂಗ್ರಹಿಸಲಾಯಿತು.
ವಿದ್ಯಾರ್ಥಿಗಳು ರಸ್ತೆಯ ಬದಿ ಅರಣ್ಯದೊಳಗೆ ಇಳಿದು ತ್ಯಾಜ್ಯಗಳನ್ನು ಸಂಗ್ರಹಿಸಿದ್ದು ವಿಶೇಷವಾಗಿತ್ತು. ಅಲ್ಲದೆ ಸಂಗ್ರಹಿಸಿದ ತ್ಯಾಜ್ಯವನ್ನು ವಿಲೇವಾರಿಗೆ ಅರಣ್ಯ ಇಲಾಖೆಯ ಸಿಬ್ಬಂದಿಗೆ ಹಸ್ತಾಂತರಿಸಲಾಯಿತು. ರಾಶಿಗಟ್ಟಲೆ ಸಂಗ್ರಹಿಸಲಾದ ಕಸವನ್ನು ಸಿಬ್ಬಂದಿಯವರು ಸ್ಥಳೀಯರು ಪಂಚಾಯಿತಿ ಅವರ ನೆರವಿನಿಂದ ಸುಯೋಜ್ ಫಾರಂಗೆ ಕಸವಿಲೇವಾರಿ ಘಟಕಕ್ಕೆ ಸಾಗಿಸಿದ್ದಾರೆ. ಇದೇ ವೇಳೆ ಬೆಟ್ಟಕ್ಕೆ ಬರುವ ಭಕ್ತರು ಮತ್ತು ಪ್ರವಾಸಿಗರು ಯಾವುದೇ ರೀತಿಯ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯಬಾರದು ನಿಗದಿತ ಸ್ಥಳದಲ್ಲಿ ಹಾಕಿ ಪ್ರತಿಯೊಬ್ಬರೂ ಸ್ವಚ್ಛತೆ ಕಾಪಾಡಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಲಾಯಿತು.
ಈ ಸ್ವಚ್ಛತಾ ಅಭಿಯಾನದಲ್ಲಿ ಡಿಸಿಎಫ್ ಡಾ.ಕೆ.ಎನ್.ಬಸವರಾಜು, ಎಸಿಎಫ್ ಗಳಾದ ಲಕ್ಷ್ಮೀಕಾಂತ್, ಶಿವರಾಮ್, ಬಿಜಿಎಸ್ ಬಿ.ಇಡಿ ಕಾಲೇಜಿನ ಪ್ರಾಂಶುಪಾಲ ಡಾ.ನಾಗರಾಜು, ಕಾರ್ಯಕ್ರಮದ ಸಂಯೋಜಕ ಬಿಜಿಎಸ್ ಬಿ.ಇಡಿ ಕಾಲೇಜಿನ ಸಿ.ಆರ್.ಶರತ್ ಕುಮಾರ್, ಗಸ್ತು ಅರಣ್ಯ ಪಾಲಕರಾದ ವೈ.ಕೆ.ಸತೀಶ್, ಗಗನ್, ಅಪ್ಪಣ, ಡಿಆರ್ ಎಫ್ ಒ ಎಂ.ಜೆ.ಸತೀಶ್ ಕುಮಾರ್ , ಸಹಾಯಕ ಪ್ರಾಧ್ಯಾಪಕ ಕೆ.ಟಿ.ಬಸವರಾಜು ಹಾಗೂ ಕಾಲೇಜಿನ ಪ್ರಾಧ್ಯಾಪಕ ವರ್ಗದವರು ಭಾಗವಹಿಸಿದ್ದರು.