ಮೈಸೂರು: ನಮ್ಮಲ್ಲಿ ಬೇಕಾದಷ್ಟು ಭಾಗ್ಯಗಳಿದ್ದು ಎಲ್ಲ ಭಾಗ್ಯಗಳಿಗಿಂತಲೂ ಆರೋಗ್ಯ ಭಾಗ್ಯವೇ ಅಮೂಲ್ಯವಾಗಿದ್ದು ನಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿದ್ದಲ್ಲಿ, ನಮ್ಮಲ್ಲಿ ಆರೋಗ್ಯಲಕ್ಷ್ಮಿ ಇರುತ್ತಾಳೆಂದು ಪತ್ರಕರ್ತರೂ ಆದ ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯಪಟ್ಟರು.

ನಗರದ ಪ್ರತಿಷ್ಠಿತ ಕಾರ್ಮಿಕ ಸಂಘಟನೆಗಳಲ್ಲೊಂದಾದ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘವು ಆಷಾಢ ಮಾಸದ ಅಂಗವಾಗಿ ಬುಧವಾರ ಚಾಮುಂಡಿ ಬೆಟ್ಟದ ಪಾದದ ಬಳಿ ಆಯೋಜಿಸಿದ್ದ ಬೆಟ್ಟದ ಸಾವಿರ ಮೆಟ್ಟಿಲುಗಳ ಸ್ವಚ್ಛತೆ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ಜೀವಿಸುವ ಪರಿಸರ, ಸೇವಿಸುವ ಆಹಾರ, ಕುಡಿಯುವ ನೀರು, ಉಸಿರಾಡುವ ಗಾಳಿ, ಹಾಗು ನಡೆದಾಡುವ ನೆಲ ಇದೆಲ್ಲವೂ ಪರಿಶುದ್ಧವಾಗಿದ್ದು ನಾವೆಲ್ಲರೂ ಆರೋಗ್ಯವಾಗಿರಬೇಕೆಂದರೆ ಪ್ರತಿಯೊಬ್ಬರಲ್ಲೂ ಸ್ವಚ್ಛತೆಯ ಅರಿವು ಮತ್ತು ಪರಿಸರ ಪ್ರಜ್ಞೆ ಇರಬೇಕೆಂದರು.

ಸ್ವಚ್ಛತೆ ಎಂದರೆ ಕೇವಲ ಕಸ ಗುಡಿಸಿ ತೆಗೆಯುವುದಷ್ಟೇ ಅಲ್ಲ. ಜಲಮಾಲಿನ್ಯ, ಭೂ ಮಾಲಿನ್ಯ, ವಾಯುಮಾಲಿನ್ಯ, ಹಾಗೂ ಶಬ್ದಮಾಲಿನ್ಯ ಸೇರಿದಂತೆ ಪ್ರತಿಯೊಂದು ಮಾಲಿನ್ಯವನ್ನೂ ತೊಡೆದು ಹಾಕುವುದರ ಜೊತೆಗೆ ಬಹುಮುಖ್ಯವಾಗಿ ಮನುಷ್ಯರು ಮನೋಮಾಲಿನ್ಯದಿಂದ ಸ್ವಯಂ ಅವರಿಗವರೇ ಶುದ್ಧೀಕರಿಸಿ ಕೊಳ್ಳಬೇಕು ಎಂದರು.

ಡಾ.ಖಾದರ್ ವಲ್ಲಿ ದುಡೇಕುಲ ಅವರು, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪದ್ಮಶ್ರೀ ಡಾ.ಖಾದರ್ ವಲ್ಲಿ ದುಡೇಕುಲ ಮತ್ತು ಸಾಹಿತಿ ಬನ್ನೂರು ಕೆ. ರಾಜು ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸಂಘದ ಉಪಾಧ್ಯಕ್ಷ ಎಂ.ಎಸ್.ಸುರೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ರವಿ ಕುಮಾರ್, ಖಜಾಂಚಿ ಎಂ.ಪ್ರಕಾಶ್, ನಿರ್ದೇಶಕರಾದ ಚಂದ್ರೇಗೌಡ, ರುದ್ರಸ್ವಾಮಿ, ಸಂತೋಷ್ ಕುಮಾರ್ ಬೆಹೆರಾ, ಮೊಹಮದ್ ಜಕೀರ್ ಹುಸೇನ್, ಶಿವರಾಜ್, ಯೋಗೇಶ್ ಹೆಬ್ಬಾಳು ಹಾಗೂ ಹಿರಿಯ ಸದಸ್ಯರಾದ ಬಸವರಾಜು, ಸಿದ್ದರಾಜು, ಕಾಳೇಗೌಡ, ಮುನಿರತ್ನ, ಮಹದೇವು, ಕೃಷ್ಣ ಹಾಗೂ ಛಾಯಾಗ್ರಾಹಕ ಅನಿಲ್ ಕುಮಾರ್ ಇನ್ನಿತರರು ಭಾಗವಹಿಸಿದ್ದರು.