ಹಾಸನ: ರಾಜ್ಯದಲ್ಲಿ ತೀವ್ರ ಬರಗಾಲದ ಛಾಯೆ ಆವರಿಸಿದೆ. ಡಿಸೆಂಬರ್ ಅಂತ್ಯಕ್ಕೆ ಮುನ್ನವೇ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಮಳೆ ಕೊರತೆ ಕಾರಣ ಭತ್ತ ಬೆಳೆಗೆ ಹಿನ್ನಡೆಯಾಗಿದೆ. ಈ ಕಾರಣ ಮಾರುಕಟ್ಟೆಗೆ ಅಕ್ಕಿಯ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಬೆಲೆ ಏರಿಕೆಯಾಗಿವೆ.
ಇದೇ ಮೊದಲ ಬಾರಿಗೆ ರಾಜಮುಡಿ ಅಕ್ಕಿಯ ಬೆಲೆ ಕೆಜಿಗೆ 100 ರೂ. ಗಡಿ ದಾಟಿದೆ. ಮುಂದಿನ ತಿಂಗಳುಗಳಲ್ಲಿ ಅಕ್ಕಿಯ ದರ ಇನ್ನಷ್ಟು ಹೆಚ್ಚಳವಾಗುವ ಸೂಚನೆಯೂ ಸಿಕ್ಕಿದೆ. ರಾಜಮುಡಿ ಮಾತ್ರವಲ್ಲ ಸೋನಾ ಮಸೂರಿ ಅಕ್ಕಿಯ ದರದಲ್ಲಿಯೂ ಶೇ 25ರಷ್ಟು ಏರಿಕೆ ಕಂಡುಬಂದಿದೆ.
ರಾಜಮುಡಿ ಅಕ್ಕಿ ಅಪರೂಪದ ಮತ್ತು ಪೌಷ್ಠಿಕಾಂಶವುಳ್ಳ ಕೆಂಪು ಅಕ್ಕಿಗಳಲ್ಲಿ ಒಂದು. ಮೈಸೂರು, ಹಾಸನ ಭಾಗದಲ್ಲಿ ಬೆಳೆಯುವ ಈ ಅಕ್ಕಿಗೆ ಭಾರೀ ಬೇಡಿಕೆ ಇದೆ. ಆದರೆ ಈ ಬಾರಿ ಬರ ಪರಿಸ್ಥಿತಿಯ ಕಾರಣ ಭತ್ತದ ಬೆಳೆಯಲ್ಲಿ ಕೊರತೆ ಉಂಟಾಗಿದೆ. ಇದರ ಪರಿಣಾಮ ಬೆಂಗಳೂರು ನಗರದಲ್ಲಿ ರಾಜಮುಡಿ ಅಕ್ಕಿ ಕೆಜಿ ದರ 100 ರಿಂದ 110 ರೂ. ಆಗಿದೆ.
ಕಳೆದ ತಿಂಗಳು 52 ರಿಂದ 60 ರೂ. ಇದ್ದ ಅಕ್ಕಿಯ ದರ ಏಕಾಏಕಿ ಏರಿಕೆ ಕಂಡಿದೆ. ಸಾವಯವ ಪದ್ಧತಿಯಲ್ಲಿ ಬೆಳೆದ ರಾಜಮುಡಿ ಅಕ್ಕಿಯ ದರ ಕೆಜಿಗೆ 130 ರೂ. ಇದೆ. ಕಳೆದ ವರ್ಷ ರಾಜಮುಡಿ ಭತ್ತದ ಕ್ವಿಂಟಾಲ್ ದರ 2,500 ರೂ. ಇತ್ತು. ಈ ಬಾರಿ 4 ಸಾವಿರ ರೂ.ಗಳಿಗೆ ಏರಿಕೆ ಕಂಡಿದೆ. 2022ರ ಡಿಸೆಂಬರ್ನ ಸಂಗ್ರವನ್ನು ಈಗ ಮಾರಾಟ ಮಾಡಲಾಗುತ್ತಿದೆ.