ಎಚ್.ಡಿ.ಕೋಟೆ: ಈ ಬಾರಿ ಮಳೆಯ ಕೊರತೆಯಿಂದ ತಡವಾಗಿ ಕಬಿನಿ ಜಲಾಶಯ ಭರ್ತಿಯಾಗಿತ್ತಾದರೂ ಇದೀಗ ಸುಪ್ರೀಂಕೋರ್ಟ್ ಆದೇಶದಂತೆ ಆರು ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಜಲಾಶಯದ ನೀರನ್ನು ನಂಬಿದ್ದ ಬೆಳೆಗಾರರಲ್ಲಿ ಆತಂಕ ಶುರುವಾಗಿದೆ.
ಹಾಗೆನೋಡಿದರೆ ಪೂರ್ವ ಮುಂಗಾರು ಮಳೆ ಕೈಕೊಟ್ಟರೂ ಕಳೆದ ಜುಲೈ ತಿಂಗಳಲ್ಲಿ ಕೇರಳದ ವೈನಾಡು ಮತ್ತು ಕಬಿನಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಮುಂಗಾರು ಮಳೆ ಆರ್ಭಟಿಸಿದ ಪರಿಣಾಮ ಮೈಸೂರಿನ ಹೆಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯ ಭರ್ತಿಗೊಂಡಿತ್ತು. ಇದೀಗ ಭರ್ತಿಯಾಗಿ 20 ದಿನ ಕಳೆಯುತ್ತಿದ್ದಂತೆಯೇ ಸರ್ಕಾರದಿಂದ ಬಾಗಿನ ಸಲ್ಲಿಸುವ ಮೊದಲೇ ಸುಪ್ರೀಂ ಕೋರ್ಟ್ ಆದೇಶದಂತೆ ಜಲಾಶಯ ಪಕ್ಕದ ಸುಭಾಷ್ ವಿದ್ಯುತ್ ಘಟಕದ ಮೂಲಕ ನೆರೆರಾಜ್ಯ ತಮಿಳುನಾಡಿಗೆ 6 ಸಾವಿರ ಕ್ಯುಸೆಕ್ ಗೂ ಹೆಚ್ಚಿನ ನೀರನ್ನು ಬಿಡಲಾಗಿದೆ. ಇದು ಅಚ್ಚುಕಟ್ಟು ಪ್ರದೇಶದ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಾರಿ ಮುಂಗಾರು ತಡವಾದ್ದರಿಂದ ಜಲಾಶಯದ ನೀರಿನ ಸಂಗ್ರಹಮಟ್ಟ ತೀವ್ರ ಕುಸಿತ ಕಂಡು ಡೆಡ್ ಸ್ಟೋರೆಜ್ ತಲುಪಿ ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿತ್ತು, ಅದರೆ ಕಳೆದ ಜುಲೈ ತಿಂಗಳಲ್ಲಿ ಮುಂಗಾರು ಮಳೆ ಕೇರಳದ ವೈನಾಡು ಹಾಗೂ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಸತತ ಹದಿನೈದು ದಿನಗಳ ಕಾಲ ಎಡಬಿಡದೆ ಸುರಿದ ಪರಿಣಾಮ ಜಲಾಶಯಕ್ಕೆ 30 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬಂದು ಜಲಾಶಯ ಕಳೆದ ಜು.25 ರಂದು ಭರ್ತಿಯಾಗಿ ಮುಂಭಾಗದ ನದಿಗೆ 20 ಸಾವಿರಕ್ಕೂ ಹೆಚ್ಚು ನೀರನ್ನು ಹರಿಸಲಾಗಿತ್ತು.
19.52 ಟಿಎಂಸಿ ಸಾಮರ್ಥ್ಯದ ಕಬಿನಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬಂದು ಎರಡು ವಾರದಲ್ಲಿ ಜಲಾಶಯದ ಗರಿಷ್ಠ ಸಂಗ್ರಹಮಟ್ಟ 2284 ಅಡಿಗಳಿಗೆ ತಲುಪಿ ಭರ್ತಿಗೊಂಡಿದ್ದ ಜಲಾಶಯದಿಂದ ಈಗ ತಮಿಳುನಾಡಿಗೆ ನೀರು ಹರಿಸುತ್ತಿರುವುದರಿಂದ ಜಲಾಶಯದ ಸಂಗ್ರಹಮಟ್ಟದಲ್ಲಿ ದಿಢೀರ್ ಕುಸಿತ ಕಂಡಿದ್ದು, 2279 ಅಡಿಗಳಿಗೆ ಇಳಿದಿದೆ. ಈಗ ಮುಂಗಾರು ಮಳೆ ಕ್ಷೀಣಿಸಿದ್ದು ಮಳೆ ಬರುವ ಲಕ್ಷಣಗಳು ಗೋಚರಿಸದಿದ್ದರೂ ಅಧಿಕಾರಿಗಳ ನಡೆ ತಾಲೂಕಿನ ರೈತರು ಸೇರಿದಂತೆ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ದಿಗ್ಭ್ರಮೆ ಮೂಡಿಸಿದೆ.