ಹಾಸನ: ಕರಾವಳಿ ಜನರ ವಿರೋಧದ ನಡುವೆಯೂ ಎತ್ತಿನಹೊಳೆ ಯೋಜನೆ ಕಾಮಗಾರಿ ಸಾಗುತ್ತಿದೆ. ಆದರೆ ಕಳೆದ ಏಳು ವರ್ಷಗಳ ಹಿಂದೆ ಆರಂಭಗೊಂಡಿರುವ ರಾಜ್ಯ ಸರ್ಕಾರದ ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.
ಹಾಸನ ಜಿಲ್ಲೆಯ ಬಹುತೇಕ ಕಡೆ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು ಗುರುವಾರ ಸಕಲೇಶಪುರ ತಾಲೂಕಿನ ಕಾಡುಮನೆಯ ಬಳಿಯ ಚೆಕ್ಡ್ಯಾಂ ನಿಂದ ಪ್ರಾಯೋಗಿಕವಾಗಿ ನೀರು ಹರಿಸಲಾಗಿದ್ದು, ಆರಂಭದಲ್ಲೇ ಹಲವು ಹಾನಿ ಉಂಟಾಗಿದೆ. ಭಾರೀ ಪ್ರಮಾಣದಲ್ಲಿ ನೀರು ಹರಿದಿದ್ದರಿಂದ ಹಲವೆಡೆ ಪೈಪ್ನಿಂದ ನೀರು ಸೋರಿಕೆಯಾಗಿ ರಸ್ತೆಗೆ ನುಗ್ಗಿದ್ದು ಹಲವು ಪ್ರದೇಶಗಳಿಗೆ ಹಾನಿಯಾಗಿದೆ.
ಭೂಮಿಯೊಳಗೆ ಬೃಹತ್ ಗಾತ್ರದ ಪೈಪ್ ಜೋಡಣೆ ಮಾಡಿದ್ದು, ನೀರು ಹರಿದ ರಭಸಕ್ಕೆ ಹಲವೆಡೆ ಭೂಮಿ ಕಂಪಿಸಿದ್ದು ಕೆಲ ಕಾಲ ಜನರು ಆತಂಕಗೊಂಡಿದ್ದರು. ಭೂಮಿಯೊಳಗೆ ಜೋಡಣೆ ಮಾಡಿದ ಪೈಪ್ನಲ್ಲಿ ನೀರು ರಭಸವಾಗಿ ಹರಿದ ಪರಿಣಾಮ ಭೂಮಿ ಕಂಪಿಸಿದಂತಾಗಿದ್ದು, ದೇಖಲ ಗ್ರಾಮದ ಗ್ರಾಮಸ್ಥರು ಭಯದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ಧಾರೆ. ನಿನ್ನೆ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು.