ಹಾಸನ: ರಾಜ್ಯದಲ್ಲಿಯೇ ತೀವ್ರ ಕುತೂಹಲ ಹಾಗೂ ಗೊಂದಲದ ಕಾರಣ ಎಲ್ಲರ ಗಮನ ಸೆಳೆದಿರುವ ಹಾಸನ ಜಿಲ್ಲೆಯ ಕೆಲ ವಿಧಾನಸಭಾ ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ನಾಳೆ ಬಿಡುಗಡೆಯಾಗುವ ಸಾಧ್ಯತೆಗಳು ಹೆಚ್ಚಿದೆ.
ರಾಜ್ಯ ರಾಜಕೀಯದಲ್ಲಿ ಹಾಸನ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಪೈಕಿ ಹಾಸನ, ಅರಸೀಕೆರೆ ಜೆಡಿಎಸ್ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ರಾಜ್ಯದಲ್ಲೆಡೆ ಚರ್ಚೆಯಾಗುತ್ತಿದ್ದು ನಾಳೆ ನಡೆಯುವ ಪಂಚರತ್ನ ಯಾತ್ರೆಯ ಮೇಲೆ ಎಲ್ಲರ ದೃಷ್ಟಿ ನಟ್ಟಿದೆ.
ಅರಸೀಕೆರೆ ವಿಧಾನಸಭಾ ಕ್ಷೇತ್ರದ ಮಟ್ಟಿಗೆ ಮೂರು ಬಾರಿ ಶಾಸಕರಾಗಿ ಜೆಡಿಎಸ್ ಪಕ್ಷದಲ್ಲಿ ಗುರುತಿ ಸಿಕೊಂಡಿದ್ದ ಶಿವಲಿಂಗೇಗೌಡರನ್ನು ಹೊರತಾಗಿ ಹೊಸ ಅಭ್ಯರ್ಥಿಯನ್ನು ಫೆ.೧೨ ರಂದು ಘೋಷಣೆ ಮಾಡುವುದಾಗಿ ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.
ಈ ನಡುವೆ ನಾಳೆ ನಡೆಯುವ ಪಂಚರತ್ನ ರಥಯಾತ್ರೆ ತೀವ್ರ ಕುತೂಹಲ ಕೆರಳಿಸಿದೆ ಯಾತ್ರೆಯಲ್ಲಿ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಜೆಡಿಎಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿಎಂ ಇಬ್ರಾಹಿಂ , ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ , ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಭವಾನಿ ರೇವಣ್ಣ ಸೇರಿದಂತೆ ಜಿಲ್ಲೆಯ ಎಲ್ಲಾ ಜೆಡಿಎಸ್ ಶಾಸಕರು ಹಾಗೂ ಮುಖಂಡರು ಸೇರಿದಂತೆ ಸಾವಿರಾರು ಕಾರ್ಯಕರ್ತರು ಭಾಗಿಯಾಗಲಿದ್ದಾರೆ.
ಸ್ವಾಭಿಮಾನದ ಪ್ರಶ್ನೆ..!!
ಪಂಚರತ್ನ ಯಾತ್ರೆಯಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚು ಮಂದಿಯನ್ನು ಸೇರಿಸುವ ಸವಾಲನ್ನು ಜೆಡಿಎಸ್ ಪಕ್ಷದ ಕಾರ್ಯಕರ್ತರ ಸ್ವಾಭಿಮಾನದ ಪ್ರಶ್ನೆಯಾಗಿ ತೆಗೆದುಕೊಂಡಿರುವುದಾಗಿ ಈಗಾಗಲೇ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ಪಕ್ಷೇತರರಾಗಿ ಸ್ಪರ್ಧೆ ಆಡಿಯೋ ಲೀಕ್..!!
ಶಿವಲಿಂಗೇಗೌಡರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಈ ಎರಡೂ ಪಕ್ಷ ಬಿಟ್ಟು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಗ್ಗೆ ಶಿವಲಿಂಗೇಗೌಡರು ಮಾತನಾಡಿರುವ ಆಡಿಯೋ ಲೀಕ್ ಆಗಿದೆ.
ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಇವರ ಚರ್ಚೆ ನಡೆಯುತ್ತಿದೆ ಮೂರು ಬಾರಿ ಶಾಸಕರಾಗಿ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಉತ್ತಮ ಕೆಲಸಗಳನ್ನು ಮಾಡಿರುವ ಅವರು ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲುವ ಬಗ್ಗೆ ಹಿಂಗಿತ ವ್ಯಕ್ತಪಡಿಸಿದ್ದು ಈ ನಿರ್ಧಾರ ಎಷ್ಟರಮಟ್ಟಿಗೆ ಅವರಿಗೆ ಲಾಭವಾಗಲಿದೆ ಎಂಬುದರ ಬಗ್ಗೆಯೂ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಕಾದು ನೋಡುವ ತಂತ್ರ
ಫೆ.೧೨ ರಂದು ಪಂಚರತ್ನ ಯಾತ್ರೆಯಲ್ಲಿ ಜೆಡಿಎಸ್ ಮುಖಂಡರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ತಿಳಿದು ಜೆಡಿಎಸ್ ಬಿಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಶಿವಲಿಂಗೇಗೌಡರು ಈಗಾಗಲೇ ಘೋಷಣೆ ಮಾಡಿದ್ದಾರೆ. ಪಕ್ಷ ತೊರೆಯುವ ಬಗ್ಗೆ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಸಾರ್ವಜನಿಕರ ಅಭಿಪ್ರಾಯ ಪಡೆದು ಮುನ್ನಡೆಯುವುದಾಗಿ ಘೋಷಣೆ ಮಾಡಿರುವ ಅವರು ಫೆಬ್ರವರಿ ೧೨ರ ನಂತರ ತೀರ್ಮಾನ ಪ್ರಕಟಿಸುವುದಾಗಿ ಹೇಳಿದ್ದಾರೆ .
ಜೆಡಿಎಸ್ ಅಧಿಕಾರಕ್ಕೆ ತರುವವರಿಗೆ ನಿದ್ದೆ ಮಾಡುವುದಿಲ್ಲ ಹಲವು ವರ್ಷಗಳ ಬಳಿಕ ಅರಸಿಕೆರೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಜೆಡಿಎಸ್ ಕಚೇರಿಯನ್ನು ಉದ್ಘಾಟನೆ ಮಾಡಿದ್ದು ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸುವವರೆಗೆ ನಿದ್ರಿಸುವುದಿಲ್ಲ ಎಂದು ಹೇಳಿರುವುದು ಶಿವಲಿಂಗೇಗೌಡರ ಪಕ್ಷಾಂತರವನ್ನು ಸವಾಲಾಗಿ ಸ್ವೀಕರಿಸುವುದು ಸಾಬೀತಾಗಿದೆ.