ಹಾಸನ: ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು ಹೇಮಾವತಿ ಜಲಾಶಯಕ್ಕೂ ಒಳಹರಿವು ಹೆಚ್ಚಳವಾಗಿದೆ. ಆದ್ದರಿಂದ ಕೃಷಿಗೆ ಪೂರಕವಾಗಿ ನಾಲೆಗಳಿಗೆ ನೀರು ಹರಿಸುವಂತೆ ಮಾಜಿ ಸಚಿವ ಎಚ್ ಡಿ ರೇವಣ್ಣ ಒತ್ತಾಯಿಸಿದರು.
ನಗರದ ಸಂಸದರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಲಾಶಯದಲ್ಲಿ ಪ್ರಸ್ತುತ ೨೨ ಟಿಎಂಸಿ ನೀರಿನ ಸಂಗ್ರಹವಿದ್ದು, ಉತ್ತಮ ಮಳೆಯಾಗುತ್ತಿ ರುವುದ ರಿಂದ ಹಳೆಯ ನಾಲೆಗಳ ಮೂಲಕ ಕೃಷಿಗೆ ಅನುಕೂಲವಾಗಲು ನೀರು ಹರಿಸುವಂತೆ ಒತ್ತಾಯಿಸಿದರು.
ಹಿಂದೆ ಎರಡು ಬೆಳೆಗೆ ಆಗುವಂತೆ ನೀರನ್ನು ಹರಿಸಲಾಗುತ್ತಿತ್ತು ಆದರೆ ಕೆಲ ದಿನಗಳ ಹಿಂದೆ ತುಮಕೂರಿಗೆ ನೀರು ಹರಿಸಲಾಗಿದೆ. ಇದಕ್ಕೆ ನಮ್ಮ ಯಾವುದೇ ಆಕ್ಷೇಪ ಇಲ್ಲ; ಆದರೆ ಜಿಲ್ಲೆಯ ರೈತರ ಅನುಕೂಲಕ್ಕೆ ನೀರು ಹರಿಸಿದರೆ ಉತ್ತಮ ಎಂದು ತಿಳಿಸಿದರು.
ಈ ಸಂಬಂಧ ಅಧಿವೇಶನದಲ್ಲಿಯೂ ಪ್ರಸ್ತಾಪ ಮಾಡಿದ್ದು, ರೈತರ ಕೃಷಿ ಚಟುವಟಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆ ಕರೆಯಬೇಕು ಮತ್ತು ನಾಲೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಲಾಗಿದೆ ಎಂದು ಹೇಳಿದರು.
ಕಲ್ಲು ಗಣಿಗಾರಿಕೆಗೆ ನೂರಾರು ಎಕರೆ: ಆಕ್ಷೇಪ
ಹಿಂದೆ ಇದ್ದ ಸಚಿವರು ಎಣ್ಣಿ ಭಾಗ್ಯ ಕರುಣಿಸಿದರು ಇದೀಗ ಜಿಲ್ಲೆಯಲ್ಲಿನ ಗುಡ್ಡಗಳನ್ನು ಕರಗಿಸಲು ಸರ್ಕಾರ ಹೊರಟಿದೆ. ಇದಕ್ಕಾಗಿ ಜಿಲ್ಲೆಯ ೨೧೦ ಮಂದಿಗೆ ೬೬೭ ಎಕರೆ ಪ್ರದೇಶ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಲು ಕಡತಗಳು ಅಂತಿಮ ಹಂತದಲ್ಲಿ ಇದೆ. ಒಬ್ಬೊಬ್ಬರಿಂದ ೪ ರಿಂದ ೫ ಲಕ್ಷ ಹಣವನ್ನು ವಸೂಲಿ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು .
ಜಿಲ್ಲೆಯ ಅಮೃತ ಮಹಲ್ ಕಾವಲು ಸೇರಿದಂತೆ ನೈಸರ್ಗಿಕ ಸಮತೋಲನಕ್ಕೆ ಅನುಕೂಲವಾಗು ವ ಗುಡ್ಡ ಬೆಟ್ಟಗಳನ್ನು ಗುರುತಿಸಲಾಗಿದ್ದು ಇಂತಹ ಸ್ಥಳಗಳಲ್ಲಿ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಬಾರದು. ಈ ಕುರಿತು ಸಂಬಂಧಪಟ್ಟ ಸಚಿವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳು ಸಹ ಈ ಸಂಬಂಧ ಅಗತ್ಯ ಕ್ರಮವನ್ನು ಕೈಗೊಳ್ಳಬೇಕು ೨೧೦ ಮಂದಿಗೆ ಬೇಕಾಬಿಟ್ಟಿಯಾಗಿ ಕಲ್ಲುಗುಣಿಗಾರಿಕೆ ನಡೆಸಲು ಅವಕಾಶ ನೀಡಬಾರದು. ಸರ್ಕಾರಕ್ಕೆ ಆದಾಯ ಬರಬೇ ಕಾಗಿದ್ದರೆ ಹರಾಜಿನ ಮೂಲಕ ಆಯ್ಕೆ ಮಾಡಿ ಗಣಿಗಾರಿಕೆಗೆ ಅವಕಾಶ ನೀಡಬೇಕು ಆದರೆ ಇತಿಹಾಸ ಹಿನ್ನೆಲೆವುಳ್ಳ ಗುಡ್ಡ ಬೆಟ್ಟಗಳನ್ನು ಖಾಲಿ ಮಾಡಬಾರದು ಎಂದು ರೇವಣ್ಣ ಆಗ್ರಹಿಸಿದರು.
ಸರ್ಕಾರದಿಂದ ಲೋಕೋಪಯೋಗಿ ಇಲಾಖೆಗೆ ೨೫೦ ಕೋಟಿ ರೂ ಬಾಕಿ ಇದ್ದು ಸಮಯಕ್ಕೆ ಸರಿಯಾಗಿ ಹಣ ಬಿಡುಗಡೆ ಮಾಡದೇ ಇರುವುದರಿಂದ ಗುತ್ತಿಗೆದಾರರು ವಿಷ ಕುಡಿಯುವ ಪರಿಸ್ಥಿತಿ ಇದೆ.
ಅಧಿವೇಶನದಲ್ಲೂ ಈ ಬಗ್ಗೆ ಪ್ರಸ್ತಾಪಿಸಲಾಗಿದ್ದು ಕೂಡಲೇ ಸರ್ಕಾರ ಹಣ ಬಿಡುಗಡೆ ಮಾಡಬೇಕು ಎಂದು ರೇವಣ್ಣ ಅವರು ಆಗ್ರಹಿಸಿದರು.