ಹಾಸನ: ನಮ್ಮ ಆಡಳಿತವಧಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ಅನೇಕ ಮೀಸಲಾತಿ, ಯೋಜನೆಯನ್ನು ನೀಡಲಾಗಿದ್ದು, ಮುಂದೆಯೂ ಕೂಡ ನಾನು ಮತ್ತು ನನ್ನ ಕುಟುಂಬವು ಯಾವಾಗಲೂ ಮುಸಲ್ಮಾನ ಸಮುದಾಯದ ಪರವಾಗಿ ಇರುತ್ತೇವೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ವಿಶ್ವಾಸವ್ಯಕ್ತಪಡಿಸಿದರು.
ನಗರದ ವಲ್ಲವಾಯಿ ರಸ್ತೆ, ಗಂಗಾ ಪರಮೇಶ್ವರಿ ದೇವಾಲಯದ ಬಳಿ ಇರುವ ಮದೀನಾ ಶಾದಿ ಮಹಲ್ ಸಭಾಂಗಣದಲ್ಲಿ ರಾಜ್ಯ ಔಕಫ್ ಮಂಡಳಿ ಬೆಂಗಳೂರು, ಜಿಲ್ಲಾ ವಕ್ಫ್ ಕಾರ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಮುತವಲ್ಲಿ ಸಮಾವೇಶ ಹಾಗೂ ವಕ್ಫ್ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಆಡಳಿತಾವಧಿಯಲ್ಲಿ ನಾನು ಹಾಸನ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದಲ್ಲಿ ಯಾವ ತಾಲೂಕಿಗೂ ಅನ್ಯಾಯವಾಗುವುದಕ್ಕೆ ಬಿಟ್ಟಿಲ್ಲ. ರಾಜ್ಯದ ಇಡೀ ರಾಜ್ಯದಲ್ಲಿ ಮುಸಲ್ಮಾನ ಸಮುದಾಯಕ್ಕೆ ಶೈಕ್ಷಣಿಕವಾಗಿ ಸೇರಿದಂತೆ ಹಲವಾರು ಮೀಸಲಾತಿ ಕೊಟ್ಟಿದ್ದು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ್ರು. ಇದುವರೆಗೂ ಬೇರೆ ಯಾವ ಸರಕರವು ಕೊಟ್ಟಿರುವುದಿಲ್ಲ. ಹಾಸನದಲ್ಲಿ ಕಾಂಕ್ರೀಟ್ ರಸ್ತೆ ಸೇರಿದಂತೆ ಹಲವಾರು ಯೋಜನೆಗಳಿಗೆ ನಮ್ಮ ಪಕ್ಷವು ಕೋಟ್ಯಾಂತರ ರೂಗಳನ್ನು ನೀಡಿದೆ ಎಂದರು.
ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರಾದ ಜನಾಬ್ ಶಾಫಿ ಸಾ ಅದಿ ಅವರು ಉದ್ದೇಶಿಸಿ ಮಾತನಾಡುತ್ತಾ, ವಕ್ಫ್ ಮಂಡಳಿಯು ರಾಜ್ಯಾದ್ಯಂತ ಅನೇಕ ಕಡೆ ಜಾಗಗಳನ್ನು ಒತ್ತುವರಿ ಮಾಡಿ, ಅವುಗಳನ್ನು ಒಡೆಯುವ ಕೆಲಸ ನಡೆಯುತ್ತಿದ್ದು, ಅವುಗಳ ರಕ್ಷಣೆಗೆ ಎಲ್ಲರೂ ಒಂದಾಗಬೇಕು, ಮುಸಲ್ಮಾನರು ತಮ್ಮ ಸಮುದಾಯದ ಅಭಿವೃದ್ಧಿಗೆ ಸಂವಿಧಾನದ ಆಶಯದ ಅಡಿಯಲ್ಲಿ ಹೋರಾಟ ನಡೆಸಬೇಕು ಎಂದರು.
ಬಸವಣ್ಣ, ಕುವೆಂಪು ಅಂತಹ ಮಹಾನ್ ವ್ಯಕ್ತಿಗಳ ಆದರ್ಶ ಹೊಂದಿರುವ ಜಾತ್ಯತೀತ ಕರ್ನಾಟಕ ರಾಜ್ಯದಲ್ಲಿ ಸಂವಿಧಾನದ ಅಡಿಯಲ್ಲಿ ತಮಗೆ ಸರ್ಕಾರದಿಂದ ನೀಡುತ್ತಿರುವ ಸೌಲವುಗಳನ್ನು ಪಡೆದು ತಮ್ಮ ಸಮುದಾಯದ ಅಭಿವೃದ್ಧಿಗೆ ಶ್ರಮ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಕಾನೂನು ಕಟ್ಟಳೆಗಳಿಗೆ ಅನುಗುಣವಾಗಿ, ಪ್ರತಿಯೊಬ್ಬ ಮುಸಲ್ಮಾನರು ತಮ್ಮ ವಾಸ ಸ್ಥಳದ, ಹಾಗೂ ಜೀವಿಸಲು ಅಗತ್ಯವಿರುವ ಮತ್ತು ಸರ್ಕಾರದ ಸೌಲಭ್ಯ ಗಳನ್ನು ಪಡೆಯಲು ಅಗತ್ಯವಿರುವ ಎಲ್ಲ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಇಟ್ಟುಕೊಳ್ಳಬೇಕು, ಈ ಮೂಲಕ ಸರ್ಕಾರದಿಂದ ನೀಡಲಾಗುವ ಸೌಲಭ್ಯ ಪಡೆಯಬೇಕಿದೆ ಎಂದು ಸಲಹೆ ನೀಡಿದರು.
ಸಮುದಾಯದಲ್ಲಿ ಯಾವುದೇ ಸಮಸ್ಯೆ ಹಾಗೂ ದಾಖಲೆಗಳಲ್ಲಿನ ಗೊಂದಲ ಇದ್ದರೆ ಜಿಲ್ಲಾ, ವಕ್ಫ್ ಸಲಹಾ ಸಮಿತಿಯನ್ನು ಸಂಪರ್ಕಿಸಿ ಯಾವುದೇ ಸಲಹೆ ಸೂಚನೆಗಳನ್ನು ಪಡೆಯಬಹುದಾಗಿದೆ ಎಂದು ಹೇಳಿದರು.