News Karnataka Kannada
Sunday, May 05 2024
ಹಾಸನ

ಹಾಸನ: ಜಿಲ್ಲೆಗೆ ಬಿಜೆಪಿ ಕೊಡುಗೆ ಶೂನ್ಯ- ರೇವಣ್ಣ ಟೀಕೆ

People's blessings are on JD(S),' says Revanna
Photo Credit : News Kannada

ಹಾಸನ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ದಾ ಹಾಗೂ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಹಾಸನ ಜಿಲ್ಲೆಯ ಅಭಿವೃದ್ಧಿ ಸಂಬಂಧ ಜೆಡಿಎಸ್ ಕೊಡುಗೆ ಏನೆಂಬುದನ್ನು ದಾಖಲೆ ಪರಿಶೀಲಿಸಿ ನಂತರ ಭಾಷಣ ಮಾಡಲಿ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿದರು.

ನಗರದ ಸಂಸದರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇತ್ತೀಚಿಗೆ ಬೇಲೂರು ಹಾಗೂ ಹಾಸನದಲ್ಲಿ ಸಭೆ ನಡೆಸಿ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ದಾ ಅವರು ಹಾಸನ ಜಿಲ್ಲೆಗೆ ರೈಲ್ವೆ ಸೇರಿದಂತೆ ಇತರೆ ಯೋಜನೆಗಳನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿದೆ ಎಂದು ಬಡಾಯಿ ಕೊಚ್ಚಿಕೊಂಡಿದ್ದಾರೆ.

ಆದರೆ ಹಾಸನ, ಆಲೂರು, ಬೇಲೂರು ಚಿಕ್ಕಮಗಳೂರು ಮಾರ್ಗದ ರೈಲ್ವೆ ಯೋಜನೆಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ನಾನು ಕೇಂದ್ರ ರೈಲ್ವೆ ಸಚಿವರೊಂದಿಗೆ ಮಾತುಕತೆ ನಡೆಸುವ ಮೂಲಕ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿರುವ ಸ್ಪಷ್ಟ ದಾಖಲೆ ನನ್ನ ಬಳಿ ಇದೆ. ಅದನ್ನು ನಡ್ಡಾ ಹಾಗೂ ಕಟೀಲ್ ಅವರಿಗೂ ರವಾನಿಸಿ ಮಾಹಿತಿ ನೀಡಲಾಗುವುದು, ಮುಂದೆ ಎಂದಾದರೂ ಜಿಲ್ಲೆಯಲ್ಲಿ ಭಾಷಣ ಮಾಡುವಾಗ ದಾಖಲೆಯೊಂದಿಗೆ ಮಾತನಾಡುವಂತೆ ಸವಾಲು ಹಾಕಿದರು.

ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿ ಸಂಬಂಧ ಕೇಂದ್ರ ಸಾರಿಗೆ ಸಚಿವರಾದ ಗಡ್ಕರಿ ಅವರೊಂದಿಗೆ ಮಾತುಕತೆ ನಡೆಸಿ ಹಾಸನ – ಬೇಲೂರು, ಬಿಳಿಕೆರೆ ಮಾರ್ಗದ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದ್ದು ಇನ್ನೂ ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಆದರೆ ಈ ಯೋಜನೆಯನ್ನು ಬಿಜೆಪಿ ಸರ್ಕಾರವೇ ಮಾಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಿ ಟಿ ರವಿ ಅವರು ಸಹ ಹೇಳುತ್ತಿರುವುದು ಹಾಸ್ಯಸ್ಪದವಾಗಿದೆ ಎಂದು ರೇವಣ್ಣ ಹೇಳಿದರು.

ಹಾಸನ ಜಿಲ್ಲೆಗೆ ಬಿಜೆಪಿ ಸರ್ಕಾರ ಯಾವುದೇ ಕೆಲಸವನ್ನು ಮಾಡಿಲ್ಲ ಎಂದು ಸ್ವತಃ ಮಾಜಿ ಮುಖ್ಯಮಂತ್ರಿ ಬಿ.ಎಸ್  ಯಡಿಯೂರಪ್ಪ ಅವರೇ ತಮ್ಮ ವಿದಾಯ ಭಾಷಣದಲ್ಲಿ ಹೇಳಿದ್ದಾರೆ.

ಎಚ್ ಡಿ ಕುಮಾರಸ್ವಾಮಿ ಅವರ ೧೪ ತಿಂಗಳ ಅಧಿಕಾರ ಅವಧಿಯಲ್ಲಿ ಹಾಸನ ಮಂಡ್ಯ ಹಾಗೂ ರಾಮನಗರಕ್ಕೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿದಾಗ ಹಾಸನ -ಮಂಡ್ಯ ಬಜೆಟ್ ಎಂದು ಟೀಕಿಸಿರುವವರು ಇಂದು ನಮ್ಮ ಪಕ್ಷದಿಂದ ಅಭಿವೃದ್ಧಿ ಆಗಿದೆ ಎಂದು ಹೇಳುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ನಮ್ಮ ಅಧಿಕಾರ ಅವಧಿಯಲ್ಲಿ ೧೫೦೦ ಆಸಿಗೆಗಳ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಯಿತು. ಆದ್ದರಿಂದ ಕೊರೋನ ಆತಂಕ ಸಂದರ್ಭದಲ್ಲಿ ಸಾವಿರಾರು ಜನರ ಪ್ರಾಣ ಉಳಿದಿದೆ. ದಾಖಲೆಗಳಿಲ್ಲದೆ ನಾನು ಮಾತನಾಡುವುದಿಲ್ಲ ಎಂದರು.

ವರಿಷ್ಠರ ತೀರ್ಮಾನ – ಜನಾಭಿಪ್ರಾಯದ ನಂತರ ಎರಡನೆ ಪಟ್ಟಿ ಬಿಡುಗಡೆ:
ಹಾಸನ ವಿಧಾನಸಭಾ ಕ್ಷೇತ್ರ ಸೇರಿದಂತೆ ಎರಡನೇ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನು ಹೆಚ್ ಡಿ ಕುಮಾರಸ್ವಾಮಿ, ಸಿ.ಎಂ ಇಬ್ರಾಹಿಂ, ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕ್ಷೇತ್ರದ ಜನರ ಅಭಿಪ್ರಾಯವನ್ನು ಸಂಗ್ರಹಿಸಿ ಅಂತಿಮಗೊಳಿ ಸಲಾಗುವುದು. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ರೇವಣ್ಣ ಸ್ಪಷ್ಟಪಡಿಸಿದರು.

ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ಮೂರ್ನಾಲ್ಕು ದಿನ ೧೨ ಪಂಚಾಯಿತಿಗಳಿಗೆ ತೆರಳಿ ಜನರ ಕುಂದು ಕೊರತೆಗಳನ್ನು ಆಲಿಸಲಾಗುವುದು ಎಂದು ತಿಳಿಸಿದ ಅವರು ಅಧಿಕೃತವಾಗಿ ಚುನಾವಣಾ ಪ್ರಚಾರಕ್ಕೆ ಇಳಿದಿರುವ ಬಗ್ಗೆ ಗುಟ್ಟುಬಿಟ್ಟು ಕೊಡಲಿಲ್ಲ.

ದೇವೇಗೌಡರೇ ಕಾರಣ:
ಹಾಸನ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ತಡೆಯೋಡುವ ರಾಷ್ಟ್ರೀಯ ಪಕ್ಷದ ನಾಯಕರು ದಾಖಲೆಗಳು ಇಲ್ಲದೆ ಮಾತನಾಡುತ್ತಿದ್ದಾರೆ. ದೇವೇಗೌಡರು ಪ್ರಯತ್ನ ಪಡದಿದ್ದರೆ ಹಾಸನ ಬೇಲೂರಿನ ನಾಲ್ಕು ಪದದ ರಸ್ತೆ ಮಂಜೂರು ಆಗುತ್ತಿರಲಿಲ್ಲ, ಬೇಲೂರು -ಬಿಳಿಕೆರೆ ರಸ್ತೆ ಯೋಜನೆ ತಂದಿದ್ದು ನಾವು ಮತ್ತು ಕದ್ಬಳ್ಳಿಯಿಂದ ಹಾಸನದವರೆಗೆ ೨೮ ಫ್ಲೈ ಓವರ್ ಗಳನ್ನ ಮಾಡಲಾಗುತ್ತಿದೆ. ಇದನ್ನೆಲ್ಲಾ ಮಾಡಿದ್ದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು, ಆದರೆ ಇಂದು ನಾವೇ ಮಾಡಿದ್ದು ಎಂದು ಬಿಜೆಪಿ ನಾಯಕರು ಸಾರ್ವಜನಿಕ ಸಭೆಗಳಲ್ಲಿ ಘೋಷಣೆ ಮಾಡುತ್ತಿರುವುದು ಸರಿಯಲ್ಲ…. ದಾಖಲೆ ಸಮೇತ ಅವರಿಗೆ ಮಾಹಿತಿ ನೀಡುತ್ತೇನೆ ಎಂದರು.

ನೆಲದ ಮೇಲೆ ಓಡಾಡಲಿ:
ಮಂಗಳೂರಿನಲ್ಲಿ ಹೆಚ್ಚು ಬಿಜೆಪಿ ಸೀಟುಗಳನ್ನು ಗೆಲ್ಲಿಸಿ ಕೊಟ್ಟಿದ್ದಾರೆ ಆದರೆ ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಆಕಾಶ ಮೂಲಕ ವಿಮಾನದಲ್ಲಿ ಓಡಾಡುತ್ತಿದ್ದಾರೆ ಅವರು ನೆಲದ ಮೇಲೆ ಬಂದಿದ್ದರೆ ಹಾಸನ ಮಂಗಳೂರು ರಸ್ತೆಯ ಹೆದ್ದಾರಿ ಸ್ಥಿತಿಗತಿ ತಿಳಿಯುತ್ತಿತ್ತು ಇವರಿಗೆ ಬೆಳಗ್ಗೆ ಎದ್ದರೆ ದೇವೇಗೌಡರು ಅವರ ಕುಟುಂಬದ ವಿರುದ್ಧ ಮಾತನಾಡುತ್ತಾ ಭಜನೆ ಮಾಡುವುದೇ ರೂಢಿಯಾಗಿದೆ ಎಂದು ಟೀಕಿಸಿದರು.

ನಾಚಿಕೆ, ಮಾನ ಮರ್ಯಾದೆ ಇದೆಯೇ…!?
ಬಿಜೆಪಿಯವರಿಗೆ ನಾಚಿಕೆ ಮಾನ ಮರ್ಯಾದೆ ಇದೆಯೇ ಎಂದು ಪ್ರಶ್ನಿಸಿದ ರೇವಣ್ಣ ಹಿಂದೆ ಜೆಡಿಎಸ್ ಅಧಿಕಾರ ಅವಧಿಯಲ್ಲಿ ಜಿಲ್ಲೆಯಲ್ಲಿ ನಾನು ಮಾಡಿಟ್ಟ ಯೋಜನೆಗಳನ್ನು ಕಾಂಗ್ರೆಸ್ ಬಿಜೆಪಿ ಸರ್ಕಾರ ಉದ್ಘಾಟನೆ ಮಾಡಿದೆ ಎಂದು ಲೇವಡಿ ಮಾಡಿದರು. ನಾವು ಏನೇ ಮಾಡಿದರು ಕುಟುಂಬ ರಾಜಕಾರಣ ಎನ್ನುತ್ತಾರೆ ಹಾಸನಕ್ಕೆ ಬಿಜೆಪಿ ಏನೇನೋ ಅನ್ಯಾಯ ಮಾಡಿದೆ ಎನ್ನುವುದನ್ನು ಮುಂದಿನ ದಿನ ದಾಖಲೆ ಸಮೇತ ಬಹಿರಂಗಪಡಿಸುತ್ತೇನೆ ಎಂದು ಸವಾಲು ಹಾಕಿದರು .

ಇಡೀ ರಾಜ್ಯದಲ್ಲಿ ಕುಮಾರಣ್ಣ ಇಬ್ರಾಹಿಂ ಜೆಡಿಎಸ್ ಅಧಿಕಾರಕ್ಕೆ ತರಲು ಪ್ರವಾಸ ಮಾಡುತ್ತಿದ್ದಾರೆ ಎರಡನೇ ಜೆಡಿಎಸ್ ಪಟ್ಟಿ, ಬಿಡುಗಡೆ ಸಂಬಂಧ ಅವರ ನಿರ್ಧಾರವೇ ಅಂತಿಮ , ಜಿಲ್ಲೆಯಲ್ಲಿ ಜೆಡಿಎಸ್ ಸದೃಢವಾಗಿದ್ದು ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲುವ ವಾತಾವರಣವಿದ್ದು ಹಾಸನ ಟಿಕೆಟ್ ಬಗ್ಗೆ ನಾನು ಈ ಸಂದರ್ಭದಲ್ಲಿ ಏನನ್ನು ಮಾತನಾಡುವುದಿಲ್ಲ ಕುಮಾರಣ್ಣ ಯಾವ ನಿರ್ಧಾರವನ್ನು ಪ್ರಕಟಿಸುತ್ತಾರೆ. ಅದರ ಪ್ರಕಾರ ನಡೆಯುತ್ತೇನೆ ಎಂದರು.

ಇಂದು ನಾಳೆ ನಾಡಿದ್ದು ಪಕ್ಷದ ಕಾರ್ಯಕರ್ತರ ಸಭೆ ಕರೆದಿದ್ದು ನಾನೇ ಎಲ್ಲಾ ಕಡೆ ಓಡಾಡುತ್ತಿದ್ದೇನೆ. ಇಲ್ಲಿ ಎಲ್ಲರ ಅಭಿಪ್ರಾಯವನ್ನು ಪಡೆದು ಹೈಕಮಾಂಡ್ ಗೆ ತಿಳಿಸುತ್ತೇನೆ. ನನ್ನ ಸ್ಪರ್ಧೆಯ ಬಗ್ಗೆ ಇದೀಗ ಏನನ್ನು ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕೆಲಸ ಮಾಡಿ ತೋರಿಸುವೆ…!?
ದೇವೇಗೌಡರು ಬದುಕಿರುವುದರರೊಳಗೆ ಎಲ್ಲಾ ಕೆಲಸವನ್ನು ಜಿಲ್ಲೆಯಲ್ಲಿ ಮಾಡಿ ತೋರಿಸುತ್ತೇನೆ ಎಂದು ಸವಾಲು ಹಾಕಿದ ರೇವಣ್ಣ ಅವರು ಟೇಬಲ್ ನಲ್ಲಿ ಕುಳಿತು ಟಿಕೆಟ್ ಕೊಡುವ ಪಕ್ಷ ನಮ್ಮದಲ್ಲ ಎಂಬ ಪ್ರೀತಮ್ ಗೌಡ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಮೊದಲು ಅವರ ಸ್ಥಾನವನ್ನು ನೋಡಿಕೊಳ್ಳಲಿ ನಾನು ಅದರ ಬಗ್ಗೆ ಏನನ್ನು ಮಾತನಾಡುವುದಿಲ್ಲ ಎಂದರು.

ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಪಕ್ಷದ ಕೆಲವರ ಮೇಲೆ ೧೦೭ ರಡಿ ಕೇಸು ದಾಖಲಿಸಿದ್ದಾರೆ ನಮ್ಮ ಪಕ್ಷದ ಕೆಲವರನ್ನು ಜೈಲಿಗೆ ಕಳುಹಿಸಿ ಎಲೆಕ್ಷನ್ ಮಾಡಲು ಹುನ್ನಾರ ನಡೆಸಿದ್ದು ಇದಕ್ಕಾಗಿಯೇ ಕೆಲ ಪೊಲೀಸರು ಇದ್ದಾರೆ ಎಂದು ರೇವಣ್ಣ ಹೇಳಿದರು.

ಸಿಂಗಾರಗೊಂಡಿದ್ದ ಸಂಸದರ ನಿವಾಸ :
ಅತ್ತ ಹೊಳೆನರಸೀಪುರದಲ್ಲಿ ದೇವಸ್ಥಾನಗಳಿಗೆ ತೆರಳಿ ಪೂಜೆ ನೆರವೇರಿಸಿದ ರೇವಣ್ಣ ಕುಟುಂಬ ಇತ್ತ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ನಿವಾಸವನ್ನು ಬಾಳೆಕಂದು, ಮಾವಿನ ಎಲೆ, ಹೂವಿನಿಂದ ಸಿಂಗಾರ ಮಾಡಲಾಗಿತ್ತು,
ಹಾಸನ ವಿಧಾನಸಭಾ ಕ್ಷೇತ್ರದ ನಾನಾ ಪಂಚಾಯಿತಿಗಳಿಗೆ ತೆರಳಿ ಜನರ ಸಮಸ್ಯೆ ಆಲಿಸುವುದರೊಂದಿಗೆ ಅಧಿಕೃತವಾಗಿ ಚುನಾವಣಾ ಪ್ರಚಾರ ಆರಂಭಿಸಿರುವ ಈ ಬೆಳವಣಿಗೆಯು ಅಚ್ಚರಿಯೊಂದಿಗೆ ಕುಟುಂಬದ ಸದಸ್ಯರೇ ಚುನಾವಣಾ ಕಣಕ್ಕೆ ಇಳಿಯುವ ಸುದ್ದಿಗೆ ಪುಷ್ಟಿ ನೀಡಿದೆ.

ಟಿಕೆಟ್ ಗೊಂದಲ ನಡುವೆ ಟೆಂಪಲ್ ರನ್
ಹಾಸನ : ಜೆಡಿಎಸ್ ಟಿಕೆಟ್ ಹಂಚಿಕೆ ಗೊಂದಲದ ನಡುವೆ ಮಾಜಿ ಸಚಿವ ಎಚ್ ಡಿ ರೇವಣ್ಣ ದಂಪತಿ ಟೆಂಪಲ್ ರನ್ ನಲ್ಲಿ ತೊಡಗಿದ್ದು ಜಿಲ್ಲೆಯ ಹಲವು ದೇವಾಲಯಕ್ಕೆ ಇಂದು ಭೇಟಿ ನೀಡಿದ್ದಾರೆ. ಹರದನಹಳ್ಳಿಯ ದೇವೇಶ್ವರ ದೇವಾಲಯಕ್ಕೆ ಭೇಟಿ ನೀಡಿರುವ ರೇವಣ್ಣ ಕುಟುಂಬ ವಿಶೇಷ ಪೂಜೆ ಸಲ್ಲಿಸಿದ್ದಾರೆ . ನಂತರ ಮಧ್ಯಾಹ್ನ ೩:೩೦ ರಿಂದ ಹಾಸನ ವಿಧಾನಸಭಾ ಕ್ಷೇತ್ರದ ನಾನಾ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸುವುದಾಗಿ ರೇವಣ್ಣ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ .

ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಗೊಂದಲದ ನಡುವೆಯೇ ಇಂದಿನಿಂದ ಭವಾನಿ ರೇವಣ್ಣ ಅವರು ಅಧಿಕೃತವಾಗಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ . ಹಾಸನ ಹೊರವಲಯದ ದೊಡ್ಡಪುರ ರಾಮೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿರುವ ಭವಾನಿ ರೇವಣ್ಣ ಬೆಳಿಗ್ಗೆಯಿಂದಲೇ ಪೂಜೆಯಲ್ಲಿ ಭಾಗಿಯಾಗಿದ್ದಾರೆ .

ಇವರೊಂದಿಗೆ ಪಕ್ಷದ ಪ್ರಮುಖರು ಹಾಗೂ ಮುಖಂಡರು ಸಂಜೆವರೆಗೂ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಭವಾನಿ ರೇವಣ್ಣ ಅವರೊಂದಿಗೆ ಪತಿ ಹೆಚ್ ಡಿ ರೇವಣ್ಣ, ಪುತ್ರ ಸಂಸದ ಪ್ರಜ್ವಲ್ ರೇವಣ್ಣ ಭಾಗಿಯಾಗಲಿದ್ದು ಇಂದಿನಿಂದ ಮೂರು ದಿನಗಳ ಕಾಲ ಹಾಸನ ವಿಧಾನಸಭಾ ಕ್ಷೇತ್ರದ ೧೨ ಪಂಚಾಯಿತಿಗಳಲ್ಲಿ ಪ್ರಚಾರ ನಡೆಸಲಿದ್ದಾರೆ.

ಹಾಸನದ ಟಿಕೆಟ್ ಎಚ್‌ಪಿ ಸ್ವರೂಪ್, ಭವಾನಿ ರೇವಣ್ಣ ಅಥವಾ ಎಚ್ ಡಿ ರೇವಣ್ಣ ಅವರಿಗೆ ಪ್ರಕಟವಾಗಲಿದೆಯೇ ಎಂಬ ಗೊಂದಲದ ನಡುವೆ ಭವಾನಿ ರೇವಣ್ಣ ಅವರ ಇಂದಿನ ನಡೆ ಅಚ್ಚರಿ ಮೂಡಿಸಿದೆ.

ಈ ನಡುವೆ ಶಿವಮೊಗ್ಗದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ಎಚ್ ಡಿ ರೇವಣ್ಣ ಕುಟುಂಬ ಜೆಡಿಎಸ್ ಪರ ಪ್ರಚಾರದಲ್ಲಿ ಇದ್ದು ಅಭ್ಯರ್ಥಿಗಳ ಆಯ್ಕೆ ಗೊಂದಲವನ್ನು ಇನ್ನು ಕೆಲವೇ ದಿನಗಳಲ್ಲಿ ಬಗೆಹರಿಸಲಾಗುವುದು ಯಾರೇ ಅಭ್ಯರ್ಥಿಯಾದರು, ಜೆಡಿಎಸ್ ಗೆಲುವು ಸಾಧಿಸಲಿದೆ ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು