ಹಾಸನ: ಚುನಾವಣೆ ನೀತಿಸಂಹಿತೆ ಘೋಷಣೆ ಆಗಿದ್ದರೂ ಸಹ ನಗರದ ಅನೇಕ ಕಡೆಗಳಲ್ಲಿ ಬಿಜೆಪಿ ಪಕ್ಷಗಳ ಪೋಸ್ಟರ್ ರಾರಾಜಿಸುತ್ತಿದೆ.
ನಗರದ ರಕ್ಷಣಾ ಪುರಂ ಹತ್ತಿರ ಶ್ರೀ ಗಂಧದ ಕೋಠಿ ಅವರಣದಲ್ಲಿರುವ ಸರಕಾರಿ ಮಹಿಳಾ ಪ್ರಧಾನ ಮತ್ತು ವಿಭಜಿತ ಶಾಲಾ-ಕಾಲೇಜು ಎದುರು ನೂತನವಾಗಿ ಹಾಕಲಾಗಿರುವ ಕಾಂಕ್ರೀಟ್ ರಸ್ತೆ ಬಳಿ ಕಾಂಪೌಂಡ್ ಮೇಲೆ ಬಿಜೆಪಿ ಕೇಂದ್ರದ ಮುಖಂಡರು ಹಾಗೂ ರಾಜ್ಯ ಮುಖಂಡರುಗಳ ಪೋಟೊ ಹಾಗೂ ಚುನಾವಣೆಯಲ್ಲಿ ಮತದಾರರ ಗಮನಸೆಳೆಯುವ ಪ್ರಣಾಳಿಕೆಯ ಬರಹ ಕಂಡು ಬಂದಿದೆ. ಮಾರ್ಚ್ ೨೯ ರಿಂದಲೇ ನೀತಿಸಂಹಿತೆ ಜಾರಿ ಬಂದು ಪಕ್ಷಗಳ ಪೋಸ್ಟರ್ ತೆರವು ಮಾಡಲು ದಿನಾಂಕ ಕೂಡ ನಿಗಧಿ ಮಾಡಲಾಗಿದೆ.
ಜಿಲ್ಲಾಧಿಕಾರಿಗಳು ಸಹ ಸಂಬಂಧಪಟ್ಟ ಅಧಿಕಾರಿಗಳಿಗೆ ಪೊಸ್ಟರ್ ತೆರವಿಗೆ ಸೂಚನೆ ನೀಡಿ ಆದೇಶ ಹೊರಡಿಸಿದ್ದಾರೆ. ಆದರೂ ಕೂಡ ಬಿಜೆಪಿಯ ಪೋಸ್ಟರ್ ಕಂಡು ಬಂದಿದ್ದು ಇನ್ನು ಅನೇಕ ಭಾಗಗಳಲ್ಲಿ ವಿವಿಧ ಪಕ್ಷಗಳ ಪೋಸ್ಟರ್ಗಳು ತೆರವು ಮಾಡದೆ ಇರುವ ಬಗ್ಗೆ ದೂರುಗಳು ಕೇಳಿ ಬರುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕಿದೆ.