ಹಾಸನ: ಸಾಮಾನ್ಯ ಕುಟುಂಬದಿಂದ ಬಂದು ಶಾಸಕನಾಗಿರುವ ನನ್ನ ವಿರುದ್ಧ ಜಿಲ್ಲೆಯ ಹಾಗೂ ರಾಜ್ಯದ ದೈತ್ಯ ರಾಜಕೀಯ ಶಕ್ತಿ ಮುಗಿಬಿದ್ದಿರುವ ಕಾರಣ ರಾಜ್ಯದ ಜನರ ಗಮನ ಹಾಸನ ವಿಧಾನ ಸಭಾ ಕ್ಷೇತ್ರದ ಮೇಲೆ ಬಿದ್ದಿದೆ ಎಂದು ಶಾಸಕ ಪ್ರೀತಂ ಜೆ. ಗೌಡ ತಿಳಿಸಿದರು.
ನಗರದ ಸುದ್ದಿಗಾರರೊಂದಿಗೆ ಮಾತನಾಡಿದರು ನಮ್ಮ ಕುಟುಂಬದಿಂದ ನಾನೊಬ್ಬನೇ ಅಧಿಕಾರ ದಲ್ಲಿದ್ದು ಗ್ರಾಮ ಪಂಚಾಯತಿ ಯಲ್ಲೂ ಸಹ ನಮ್ಮ ಕುಟುಂಬದ ಯಾವೊಬ್ಬ ಸದಸ್ಯರು ಇಲ್ಲ ಆದರೆ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಕುಟುಂಬದಲ್ಲಿ ನಾಲ್ಕು ಬಾರಿ ಸಚಿವರಾಗಿರುವ ಎಚ್. ಡಿ. ರೇವಣ್ಣ ಅವರ ಪುತ್ರರಾದ ಲೋಕ ಸಭಾ ಸದಸ್ಯ ಹಾಗೂ ವಿಧಾನ ಪರಿಷತ್ ಸದಸ್ಯ , ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಎಲ್ಲರೂ ನನ್ನ ವಿರುದ್ಧ ರಾಜಕೀಯ ಮಾಡುತ್ತಿರುವುದು ಜನರ ಗಮನ ಸೆಳೆಯಲು ಕಾರಣವಾಗಿದೆ.
“ಅಪ್ಪ ಹಾಕಿದ ಆಲದ ಮರ”: ರಾಜಕೀಯ ನಡೆಯೊಲ್ಲ
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ವಿರೋಧಿಗಳು ಯಾರೇ ಇದ್ದರೂ ನನ್ನ ಹೆಜ್ಜೆ ಸಕಾರಾತ್ಮಕವಾಗಿ ಇರಲಿದೆ ಎಂದ ಅವರು “ಅಪ್ಪ ಹಾಕಿದ ಆಲದ ಮರ” ಎಂಬಂತೆ ಹಳೆ ಕಾಲದ ರಾಜಕೀಯ ಹಾಸನ ಜಿಲ್ಲೆಯಲ್ಲಿ ಇನ್ನು ಮುಂದೆ ನಡೆಯುವುದಿಲ್ಲ. ಹಾಸನ ವಿಧಾನಸಭಾ ಕ್ಷೇತ್ರದ ಮಟ್ಟಿಗೆ ೨೦೧೮ರಲ್ಲಿಯೇ ಹಳೆ ಕಾಲದ ರಾಜಕೀಯ ನಡೆಯೊಲ್ಲ ಎಂದು ರುಜುವಾತು ಮಾಡಲಾಗಿದ್ದು ೨೦೨೪ ಸೆಮಿ ಫೈನಲ್ ಹಾಗೂ ೨೦೨೫ ಫೈನಲ್ ಜಿಲ್ಲಾ ರಾಜಕೀಯದ ಆಟ ನೋಡಲಿದ್ದೀರಿ ಎಂದು ಹೇಳಿದರು.
ಉಗನೆ ಪಂಚಾಯಿತಿ ಬಿಜೆಪಿ ತೆಕ್ಕೆಗೆ :
ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಉಗನೇ ಗ್ರಾಮ ಪಂಚಾಯಿತಿಯಲ್ಲಿ ಇಂದು ಚುನಾವಣೆ ನಡೆದು ಬಿಜೆಪಿ ಪಕ್ಷದ ಅಭ್ಯರ್ಥಿ ಅಧಿಕಾರ ಹಿಡಿದಿದ್ದು ಚುನಾವಣೆಯಲ್ಲಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಪ್ರೀತಮ್ ಗೌಡ ಹೇಳಿದರು . ಚುನಾವಣೆ ಶಾಂತಿಯುತವಾಗಿ ಮುಗಿದಿದ್ದು ಬಿಜೆಪಿಯ ಸದಸ್ಯರು ಅಧಿಕಾರ ಹಿಡಿದಿರುವುದು ಸಂತಸ ತಂದಿದೆ ಎಂದು ಪ್ರೀತಂ ತಿಳಿಸಿದರು.
ಪಂಥಾಹ್ವಾನ ಕ್ಕೆ ಇಂದಿಗೂ ಬದ್ಧ:
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ವಿರುದ್ಧ ರೇವಣ್ಣ ಅವರ ಸ್ಪರ್ಧೆ ಮಾಡಿದರೆ ೫೦,೦೦೦ ಮತಗಳಿಂದ ಗೆಲುವು ಸಾಧಿಸುತ್ತೇನೆ ಎಂಬ ಮಾತಿಗೆ ಇಂದಿಗೂ ಬದ್ಧನಾಗಿದ್ದೇನೆ. ಈ ಒಂದು ಪಂಥಾಹ್ವಾನ ನೀಡಿ ೧೮ ತಿಂಗಳಾದ ಮೇಲೆ ರೇವಣ್ಣ ಅವರು ಉತ್ತರಿಸಿದ್ದಾರೆ ಎಂದರೆ ಅವರ ಬದ್ಧತೆಯನ್ನು ಪ್ರಶ್ನಿಸಬೇಕಾಗುತ್ತದೆ. ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಳಿಕ ನನ್ನ ವಿರೋಧಿ ಯಾರು ಎಂಬುದನ್ನು ಗಮನಿಸಿ ಪ್ರತಿಕ್ರಿಯೆ ನೀಡಿದರೆ ಸೂಕ್ತ ಎಂದರು.
ಅಭ್ಯರ್ಥಿ ಹಾಕಲು ತಿಣುಕಾಟ
ಜೆಡಿಎಸ್ ಪಕ್ಷದಲ್ಲಿ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಹಾಕಲು ತಿಣುಕಾಡುತ್ತಿದ್ದಾರೆ ಹೊರತು ಕ್ಷೇತ್ರದ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ ಹಾಗೇನಾದರೂ ಅವರು ತಿಳಿದಿದ್ದರೆ ಇಂದು ಜನರ ಮಧ್ಯೆ ಇರುತ್ತಿದ್ದರು ಹಾಗೂ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದರು ಎಂದು ಟೀಕಿಸಿದರು.
“ರೇವಣ್ಣ” ಸಾಮಾನ್ಯ ಕಾರ್ಯಕರ್ತರೆ!?
ಕುಮಾರಸ್ವಾಮಿಯವರು ಕೇವಲ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಪಡೆಯುವುದಾಗಿ ಹೇಳಿದ್ದರು ಆದರೆ ಇದೀಗ ಹೆಚ್. ಡಿ. ರೇವಣ್ಣ ಅವರು ಸ್ಪರ್ಧೆ ಮಾಡುವ ಬಗ್ಗೆ ಮಾತನಾಡಿರುವುದು ಸಾಮಾನ್ಯ ಕಾರ್ಯಕರ್ತ ಯಾರು!? ಎಂಬುದು ಜನರಿಗೆ ತಿಳಿದಂತಾಗಿದೆ.
ದೇವೇಗೌಡರ ಕುಟುಂಬದಲ್ಲಿ ಅವರ ಮನೆಯವರೇ ಸಿಎಂ, ಡಿಸಿಎಂ ಆಗಬೇಕು ಎಂಬುದು ಹೊಸ ವಿಷಯವಲ್ಲ ಇದರಿಂದ ಕಾರ್ಯಕರ್ತರು ಸಹ ಭ್ರಮನಿರಸನಗೊಂಡಿದ್ದಾರೆ ಎಂದು ಟೀಕಿಸಿದರು. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜನರ ಮಧ್ಯೆ ಕೆಲಸ ಮಾಡಿದ್ದು ಕೋವಿಡ್ ಹಾವಳಿ ಸಂದರ್ಭದಲ್ಲಿ ಜನರ ಕಷ್ಟಕ್ಕೆ ಸ್ಪಂದಿಸಿದ್ದೇನೆ ಆದರೆ ಜೆಡಿಎಸ್ ನವರು ಅಂದು ಹೇಗೆ ಸ್ಪಂದಿಸಿದ್ದಾರೆ ಎಂದು ಇಲ್ಲಿನ ಜನರಿಗೆ ತಿಳಿದಿದೆ. ನನ್ನನ್ನು ಮನೆಯ ಮಗನಂತೆ ಕ್ಷೇತ್ರದ ಜನರು ಆಶೀರ್ವದಿಸುತ್ತಿದ್ದು ಮುಂದಿನ ಚುನಾವಣೆಯಲ್ಲಿ ಸ್ಪಷ್ಟವಾಗಲಿದೆ ಎಂದರು.