ಹಾಸನ: ಹಾಸನ ಜಿಲ್ಲೆ ಬೇಲೂರು ತಾಲೂಕಿನ ಗಿರಿಗದ್ದೆ ಗ್ರಾಮದಲ್ಲಿ ತಾ.ಲಕ್ಕುಂದಲ್ಲಿ ಮೀಟರ್ ಬಡ್ಡಿದಾರರ ಕಿರುಕುಳಕ್ಕೆ ಸರ್ಕಾರಿ ನೌಕರ ಬಲಿ ಆದ ಆರೋಪ ಕೇಳಿ ಬಂದಿದೆ.
ಗ್ರಾಮ ಪಂಚಾಯತ್ ಕಾರ್ಯದರ್ಶಿ ದೇವರಾಜ್(52) ಎಂಬುವವರು ಮೀಟರ್ ಬಡ್ಡಿದಾರರ ಕಿರುಕುಳಕ್ಕೆ ಬಲಿಯಾಗಿದ್ದಾರೆ.
ಐವತ್ತು ಸಾವಿರ ಸಾಲ ಕೊಟ್ಟು ಲಕ್ಷ ಲಕ್ಷ ವಸೂಲಿ ಮಾಡಿ ಕಿರುಕುಳ ನೀಡಲಾಗಿದೆ ಎನ್ನಲಾಗುತ್ತಿದೆ. ಕಿರುಕುಳ ನೀಡಿದ ಆರೋಪದಲ್ಲಿ ಇಬ್ಬರ ವಿರುದ್ದ ಕೊಲೆ ಕೇಸ್ ದಾಖಲಾಗಿದೆ.
ಪರಿಚಿತರಾದ ಭಾಸ್ಕರ್ ಹಾಗೂ ಖುಷಿ ಎಂಬುವವರಿಂದ ದೇವರಾಜ್ ತಲಾ ಐವತ್ತು ಸಾವಿರ ಹಣ ಸಾಲ ಪಡೆದಿದ್ದರು. ಆರೋಪಿಗಳು 2021ರಲ್ಲಿ ವಾರದ ಲೆಕ್ಕದಲ್ಲಿ ಹತ್ತು ಪರ್ಸೆಂಟ್ ಬಡ್ಡಿಗಾಗಿ ಹಣ ನೀಡಿದ್ದರು. ಐವತ್ತು ಸಾವಿರ ಸಾಲಕ್ಕೆ ಈಗಾಗಲೆ ತಲಾ ಎರಡು ಲಕ್ಷ ಹಣ ನೀಡಿದ್ದರೂ ಮತ್ತೆ ಅಸಲು ಹಾಗು ಬಡ್ಡಿಗಾಗಿ ಕಿರುಕುಳ ನೀಡುತ್ತಿದ್ದರು.
ಹಣ ನೀಡುವಂತೆ ಒತ್ತಾಯಿಸಿ ಜನವರಿ 7 ರಂದು ಇಬ್ಬರು ಆರೋಪಿಗಳೂ ದೇವರಾಜ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹಲ್ಲೆಯಿಂದ ತಲೆಗೆ ಪೆಟ್ಟಾಗಿ ಕೋಮಾ ಸ್ಥಿತಿಗೆ ತಲುಪಿದ್ದ ದೇವರಾಜ್ ಸತತ 20 ದಿನಗಳ ಚಿಕಿತ್ಸೆ ನಂತರ ಚಿಕಿತ್ಸೆ ಫಲಿಸದೆ ನಿನ್ನೆ ರಾತ್ರಿ ಪ್ರಾಣ ಬಿಟ್ಟಿದ್ದಾರೆ.
ಆರೋಪಿಗಳ ವಿರುದ್ದ ಅರೆಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದೆ. ಅರೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.