ಹಾಸನ: ಕಾಂಗ್ರೆಸ್ ಪಕ್ಷ ಎಂದಿಗೂ ಸಹ ಶ್ರೀಮಂತರು, ವ್ಯಾಪಾರಸ್ಥರ ಪರವಾಗಿರದೆ, ಬಡವರು,ದೀನ ದಲಿತರು, ರೈತಾಪಿ ವರ್ಗಗಳಿಗೆ ಧ್ವನಿಯಾಗಿ ಕೆಲಸ ಮಾಡಿದೆ ಎಂದು ಸಂಸದ ಹಾಗೂ ಡಿ.ಕೆ ಸುರೇಶ್ ತಿಳಿಸಿದರು.
ನಗರದ ಸ್ವಾಭಿಮಾನ ಭವನದ ಎದುರು ಆಯೋಜಿಸಲಾಗಿದ್ದ ಜಿಲ್ಲಾ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಐಕ್ಯತಾ ಸಮಾವೇಶ ಮತ್ತು ಧ್ರುವನಾರಾಯಣ್ ಸ್ಮರಣಾರ್ಥ ಆಯೋಜಿಸಲಾಗಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಂತ ಸಂದರ್ಭದಲ್ಲಿ ಶ್ರಮಿಕರು ಬಡವರು ಪರವಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ ಹಾಗೂ ಶೋಷಣೆಗೆ ಒಳಗಾದವರ ಪರ ಹೋರಾಟವನ್ನು ಮಾಡಿದೆ ಎಂದರು. ಎಸ್ ಸಿ- ಎಸ್ ಟಿ ಘಟಕವು ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ತಳಹದಿಯಾಗಿದ್ದು ಈ ಮೂಲಕ ಪಕ್ಷವನ್ನು ಕಟ್ಟಿ ಬೆಳೆಸಿ ಮುನ್ನಡೆಸುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಧ್ರುವನಾರಾಯಣ್ ಅವರು ಇಂದು ನಮ್ಮೊಂದಿಗೆ ಇಲ್ಲ ಆದರೆ ಅವರ ಆದರ್ಶಗಳು ಮಾದರಿಯಾಗಿದ್ದು ಅದನ್ನು ಮೈಗೂಡಿಸಿಕೊಂಡು ಪಕ್ಷವನ್ನು ಬಲವರ್ಧನೆ ಮಾಡಬೇಕಿದೆ. ಪಕ್ಷ ಸಂಘಟನೆಯಲ್ಲಿ ಎಲ್ಲರನ್ನೂ ಒಗ್ಗಟ್ಟಿನಿಂದ ತೆಗೆದುಕೊಂಡು ಹೋಗುತ್ತಿದ್ದ ಅವರ ಕಾರ್ಯ ಇಂದಿಗೂ ಸ್ಮರಣೀಯವಾದದ್ದು ಎಂದು ಸ್ಮರಿಸಿದರು.
ಪ್ರತಿ ಹಂತದಲ್ಲೂ ಪಕ್ಷದ ಬಲವರ್ಧನೆಗೆ ಶ್ರಮಿಸುತ್ತಿದ್ದ ಅವರು ಕಾರ್ಯಧ್ಯಕ್ಷರಾಗಿ ನೇಮಕಗೊಂಡ ನಂತರ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದರು ಹಾಸನ, ಚಿಕ್ಕಮಗಳೂರು ,ಶಿವಮೊಗ್ಗ, ಮಂಗಳೂರು, ಮಂಡ್ಯ ಜಿಲ್ಲೆಗಳ ಉಸ್ತುವಾರಿ ವಹಿಸಿಕೊಂಡು ಸಕ್ರಿಯವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅವರ ಅಗಲಿಕೆ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಮೋಟಮ್ಮ, ಎಸ್ ಸಿ ಎಸ್ ಟಿ ಘಟಕದ ರಾಜ್ಯ ಅಧ್ಯಕ್ಷ ಧರ್ಮ ಸೇನಾ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣ್ ,ರಾಜ್ಯಸಭೆಯ ಮಾಜಿ ಸದಸ್ಯ ಎಚ್ ಕೆ ಜವರೇಗೌಡ, ಎಸ್ ಸಿ ಎಸ್ ಟಿ ಘಟಕದ ಜಿಲ್ಲಾ ಅಧ್ಯಕ್ಷ ದೇವಪ್ಪ ಮಲ್ಲಿಗೆವಾಳು, ಗಣೇಶ್ ನಾಯಕ್, ಮುನಿಸ್ವಾಮಿ, ಕಾಂಗ್ರೆಸ್ ವಕ್ತಾರ ದೇವರಾಜೇಗೌಡ ಉಪಸ್ಥಿತರಿದ್ದರು.