ಹಾಸನ: ಹಾಸನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ಸೋಲಿಸುವಂತೆ ಸಿಐಟಿಯು ಕರೆ ನೀಡುತ್ತದೆ ಎಂದು ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ಕಾರ್ಮಿಕ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಈ ರೀತಿಯ ಆಡಳಿತ ದೇಶವಿರೋಧಿಯಾಗಿದ್ದು ಮುಂದಿನ ದಿನಗಳಲ್ಲಿ ಯಾವುದೇ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ. ಆದ್ದರಿಂದ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಮತ ಹಾಕದೆ ಇಂಡಿಯಾ ಮೈತ್ರಿಕೂಟದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ಗೆಲ್ಲಿಸುವ ಮೂಲಕ ಬೆಂಬಲಿಸುವಂತೆ ಕಾರ್ಮಿಕರು ನೌಕರರ ದುಡಿಯುವ ಜನರಿಗೆ ಮನವಿ ಮಾಡುತ್ತಿದ್ದೇವೆ ಎಂದರು.
ಈ ಲೋಕಸಭೆ ಚುನಾವಣೆಯು ದುಡಿಯುವ ವರ್ಗಕ್ಕೆ ’ಮಾಡು ಇಲ್ಲವೇ ಮಡಿ’ ಹೋರಾಟದಂತಿದೆ. ಬಿಜೆಪಿ ತನ್ನ ಸುಳ್ಳು ಭರವಸೆಗಳು ಹಾಗು ಸುಳ್ಳು ಸಾಧನೆಗಳ ಘೋಷಣೆಗಳ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದೆ ಎಂದು ಆರೋಪಿಸಿದರು .
ಕೇಂದ್ರ ಸರ್ಕಾರದ ಹಲವು ನೀತಿಗಳು ಕಾರ್ಮಿಕ ವಿರೋಧಿಯಾಗಿದೆ. ಸಮಾನ ಕನಿಷ್ಠ ವೇತನ ಜಾರಿಗೊಳಿಸುವ ಬದಲಿಗೆ ೧೭೮ ನೆಲಮಟ್ಟದ ಕೂಲಿ ನಿಗದಿ ಮಾಡಿದ್ದು ೪೦ ಕೋಟಿ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯ ಮೂರು ಲಕ್ಷ ಕೋಟಿ ಹಣ ಕೊಡದೆ ನಿವೃತ್ತಿಯ ನಂತರ ಅಸಹಾಯಕ ಬದುಕಿಗೆ ಬಲವಂತವಾಗಿ ನೂಕಲಾಗುತ್ತಿದೆ .
ಮೋದಿ ಸರ್ಕಾರಕ್ಕೆ ಅಧಿಕಾರ ನಡೆಸಲು ಅವಕಾಶ ನೀಡಿದ ಮತದಾರರಿಗೆ ತೆರಿಗೆ ಹೆಚ್ಚಳ, ಪೆಟ್ರೋಲ್, ಡೀಸೆಲ್ , ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ದುಬಾರಿ ಹೊರೆ ಹಾಗೂ ಕಾಯಂ ಕೆಲಸಗಳನ್ನು ಜಾರಿ ಮಾಡದೆ ಗುತ್ತಿಗೆ-ಹೊರಗುತ್ತಿಗೆ ಶಾಶ್ವತಗೊಳಿಸಿದ್ದು ಕಾರ್ಮಿಕ ವಿರೋಧಿಯಾಗಿದೆ ಎಂದು ಆರೋಪಿಸಿದರು.
ಅಂಗನವಾಡಿ ಬಿಸಿ ಊಟ, ಆಶಾ ನೌಕರರಿಗೆ ೫ ರಿಂದ ೧೦ ವರ್ಷಗಳಾದರೂ ಸಂಬಳವನ್ನು ಹೆಚ್ಚಳ ಮಾಡಲಿಲ್ಲ. ಭಾರತದ ಸಂವಿಧಾನದಡಿ ರಚಿತವಾದ ರಾಜ್ಯಗಳ ಒಕ್ಕೂಟ ವ್ಯವಸ್ಥೆಯನ್ನು ಕಡೆಗಣಿಸಲಾಗಿದೆ. ರಾಜ್ಯಗಳಿಗೆ ನೀಡಬೇಕಾದ ತೆರಿಗೆ ಪಾಲನ್ನು ನೀಡದೆ ವಂಚಿಸಿದೆ. ಇದರಿಂದ ಸರ್ಕಾರ ಹಾಗೂ ಸಂಘ-ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರಿಗೆ ಸಮಯಕ್ಕೆ ಸರಿಯಾಗಿ ವೇತನವಿಲ್ಲದೆ ಪರಿತಪಿಸುವಂತಾಗಿದೆ ಎಂದು ದೂರಿದರು.
ರಾಜ್ಯದಲ್ಲಿ ಸುಸ್ಥಿರವಾಗಿ ನಡೆಯುತ್ತಿರುವ ಸಾರಿಗೆ ಇಲಾಖೆಯನ್ನು ಸಹ ಖಾಸಗಿಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನೀತಿ ಕಾರ್ಮಿಕ ವಿರೋಧಿಯಾಗಿದ್ದು, ಈಗಾಗಲೇ ಕೆ ಎಸ್ ಆರ್ ಟಿಸಿ ನಿಗಮವನ್ನು ಖಾಸಗಿಯವರಿಗೆ ವಹಿಸಲು ಕೇಂದ್ರ ಸರ್ಕಾರ ಮುಂದಾಗಿರುವುದು ಖಂಡನೀಯ ಎಂದರು.
ಆದ್ದರಿಂದ ಬಡಜನರ ಕಾರ್ಮಿಕರ ವಿರೋಧಿ ಎನ್ ಡಿ ಎ ನೇತ್ರತ್ವದ ಕೇಂದ್ರ ಸರ್ಕಾರವನ್ನು ವಿರೋಧಿಸಿ ಇಂಡಿಯಾ ಮೈತ್ರಿಕೂಟದ ಕಾಂಗ್ರೆಸ್ ಪಕ್ಷದ ಶ್ರೇಯಸ್ ಪಟೇಲ್ ಅವರನ್ನು ಹೆಚ್ಚಿನ ಮತಗಳಲ್ಲಿ ಗೆಲ್ಲಿಸಲು ಕಾರ್ಮಿಕರೆಲ್ಲ ಒಗ್ಗೂಡಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಘಟಕದ ಕಾರ್ಯದರ್ಶಿ ಅರವಿಂದ್, ಉಪಾಧ್ಯಕ್ಷ ಎಚ್.ಎಸ್ ಮಂಜುನಾಥ್ , ಇಂದಿರಮ್ಮ ,ಜಿ.ಪಿ ಸತ್ಯನಾರಾಯಣ, ಸೌಮ್ಯ ಉಪಸ್ಥಿತರಿದ್ದರು.