ಬೇಲೂರು: ಕರ್ನಾಟಕ ಸರ್ಕಾರದ ಪರಿಸರ ರಾಯಭಾರಿ ಹಾಗೂ ಕೇಂದ್ರ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರದ ಸಾಲುಮರದ ತಿಮ್ಮನವರ ೧೧೨ ನೇ ಜನ್ಮ ದಿನದ ಅಂಗವಾಗಿ ವಿಶ್ವ ಪ್ರಸಿದ್ದ ಬೇಲೂರಿನ ಯಗಚಿ ಸಸ್ಯಕಾಶಿ ಯಲ್ಲಿ ಗಿಡ ನೆಟ್ಟ ಅಭಿಮಾನಿಗಳು ಜನ್ಮ ದಿನಾಚರಣೆಯನ್ನು ನಡೆಸಿದರು.
ಸಾಲುಮರದ ತಿಮ್ಮಕ್ಕ ಕನ್ನಡ ನಾಡಿನಲ್ಲಿ ವೃಕ್ಷಮಾತೆ ಎಂದೇ ಖ್ಯಾತಿಯನ್ನು ಹೊಂದಿದ್ದಾರೆ. ಅವರು ಸದ್ಯ ತಮ್ಮ ದತ್ತು ಪುತ್ರ ಪರಿಸರ ಪ್ರೇಮಿ ಬಳ್ಳೂರು ಉಮೇಶ್ ರವರ ಸ್ವಗ್ರಾಮ ಬೇಲೂರು ತಾಲ್ಲೂಕಿನ ಬಳ್ಳೂರು ಗ್ರಾಮದಲ್ಲಿ ವಾಸವಾಗಿದ್ದು, ಇಂದು ಅವರು ೧೧೨ ನೇ ಜನ್ಮ ದಿನಾಚರಣೆಯನ್ನು ಬೇಲೂರಿನ ಯಗಚಿ ಜಲಾಶಯದ ಮುಂದಿನ ಸುಂದರ ಅವರಣದಲ್ಲಿ ಸಸಿ ನೆಟ್ಟು ಸಾಲುಮರದ ತಿಮ್ಮಕ್ಕನವರ ಜನ್ಮ ದಿನಾಚರಣೆಯನ್ನು ನಡೆಸಲಾಯಿತು.
ಈ ಕಾರ್ಯಕ್ಕೆ ಬೇಲೂರಿನ ತಹಸೀಲ್ದಾರ್ ಎಂ.ಮಮತ, ಪುರಸಭಾಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್, ತಿಮ್ಮಕ್ಕ ಇಂಟರ್ ನ್ಯಾಷನಲ್ ಪೌಂಡೇಷನ್ ಅಧ್ಯಕ್ಷ ಬಳ್ಳೂರು ಉಮೇಶ್, ಯುವ ಉದ್ಯಮಿ ಬಿ.ಎಂ.ಸಂತೋಷ್, ಡಾ. ರಾಜಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ತೀರ್ಥಂಕರ್ ಸೇರಿದಂತೆ ಇನ್ನು ಮುಂತಾದವರು ವೃಕ್ಷ ಮಾತೆ ಜನ್ಮ ದಿನಕ್ಕೆ ಸಾಕ್ಷಿಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ್ ಎಂ.ಮಮತ, ತನಗೆ ಮಕ್ಕಳಿಲ್ಲ ಎಂಬ ನಿಟ್ಟಿನಲ್ಲಿ ತಿಮ್ಮಕ್ಕನವರು ಸಾಲುಮರಗಳನ್ನು ನೆಟ್ಟು ಮಕ್ಕಳಂತೆ ಪೋಷಣೆ ಮಾಡುವ ಮೂಲಕ ಜಗತ್ತಿಗೆ ಪರಿಸರದ ರಾಯಭಾರಿಯಾಗಿದ್ದಾರೆ. ಇವರು ಇನ್ನು ಹೆಚ್ಚಿನ ದಿನಗಳ ಕಾಲ ಬದುಕುವ ಮೂಲಕ ಯುವ ಜನಾಂಗಕ್ಕೆ ಮಾದರಿಯಾಗ ಬೇಕಿದೆ. ಈಗಾಗಲೇ ಸರ್ಕಾರ ಸಾಲುಮರದ ತಿಮ್ಮಕ್ಕನವರ ಬಗ್ಗೆ ಪಠ್ಯ ವಿಷಯವನ್ನು ನೀಡಿದ್ದು, ವಿದ್ಯಾರ್ಥಿಗಳು ಪರಿಸರದ ಬಗ್ಗೆ ಜಾಗೃತಿಯನ್ನು ಸಾಲುಮರದ ತಿಮ್ಮಕ್ಕನವರಿಂದ ಪಡೆಯಬೇಕಿದೆ. ಸರ್ಕಾರ ಕೂಡ ಸಾಲು ಮರದ ತಿಮ್ಮಕ್ಕನವ ಹತ್ತಾರು ಯೋಜ ನೆಗಳನ್ನು ರೂಪಿಸಿ ಘನ ಸರ್ಕಾರದ ರಾಯಭಾರಿಯಾಗಿ ಕೂಡ ನೇಮಿಸಿ ಗೌರವ ನೀಡಿದೆ. ಮುಂದಿನ ದಿನದಲ್ಲಿ ಅವರಿಗೆ ದೇವರು ಆಯುಸ್ಸು ಮತ್ತು ಆರೋಗ್ಯ ನೀಡಲಿ ಎಂದು ಹಾರೈಸಿದರು.
ಬೇಲೂರು ಪುರಸಭಾ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಮಾತನಾಡಿ, ಸಾಲುಮರದ ತಿಮ್ಮಕ್ಕ ನವರು ನಡೆಸಿದ ನಿಸ್ವಾರ್ಥದ ಪರಿ ಸರ ಸೇವೆ ನಿಜಕ್ಕೂ ಅಗಮ್ಯ ವಾಗಿದೆ. ಅಕ್ಷರ ಜ್ಞಾನವೇ ಇಲ್ಲದ ಸಾಲುಮರದ ತಿಮ್ಮಕ್ಕನವರು ಜಗತ್ತಿಗೆ ನೀಡಿದ ಕೊಡುಗೆಯನ್ನು ವಿದ್ಯಾವಂತರು ನೆನಪು ಮಾಡಿಕೊಳ್ಳಬೇಕಿದೆ. ಅವರ ಆದರ್ಶದ ಬದುಕು ಮತ್ತು ಸಮಾಜಕ್ಕೆ ನೀಡಿದ ಕೊಡುಗೆ ನಮಗೆ ಎಂದಿಗೂ ದಾರಿದೀಪವಾದ ನಿಟ್ಟಿನಲ್ಲಿ ನಾವುಗಳು ಹಸಿರು ಭೂಮಿ ಪ್ರತಿಷ್ಠಾನ ಮತ್ತು ಭಾರತ್ ಜ್ಞಾನ ವಿಜ್ಞಾನ ಸಂಸ್ಥೆಯಲ್ಲಿ ಪರಿಸರ ಜಾಗೃತಿ ಅಭಿಮಾನಗಳನ್ನು ನಡೆಸಲು ಪೂರಕವಾಗಿದೆ. ಸಾಲುಮರದ ತಿಮ್ಮಕ್ಕನವರ ಆಶೋತ್ತರಗಳಲ್ಲಿ ನಡೆಯುತ್ತಿರುವ ಇವರ ದತ್ತು ಪುತ್ರ ಬಳ್ಳೂರು ಉಮೇಶ್ ರವರು ಕೂಡ ಪರಿಸರಕ್ಕೆ ಅನನ್ಯ ಕಾಣಿಕೆ ನೀಡುತ್ತಾ, ಶಾಲಾ-ಕಾಲೇಜುಗಳಲ್ಲಿ ಯುವ ಜನಾಂಗಕ್ಕೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.