ಬೇಲೂರು: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿಯನ್ನು ಕಿತ್ತೊಗೆದು ತೆನೆ ಹೊತ್ತ ಮಹಿಳೆಯ ಕೈ ಹಿಡಿಯಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ಕಾರ್ಯಕರ್ತರಿಗೆ ಹುರಿದುಂಬಿಸಿದರು.
ಬೇಲೂರು ತಾಲೂಕಿನ ಗಬ್ಬಲಗೂಡು ಗ್ರಾಮದಲ್ಲಿ ವಿವಿಧ ಕಾಮಗಾರಿಯ ಶಂಕು ಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾಗೇನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಯ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಯೋಚಿಸಬೇಕಿದೆ. ಕಳೆದ ನಾಲ್ಕೂವರೆ ವರ್ಷದ ಅವಧಿಯಲ್ಲಿ ನಾಗೇನಹಳ್ಳಿ ಜಿಲ್ಲಾ ಪಂಚಾಯತಿ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 65 ಕೋಟಿಗೊ ಅಧಿಕ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅದೇ ರೀತಿ 2.40 ಲಕ್ಷದ ವೆಚ್ಚದಲ್ಲಿ ಅಗಸನಹಳ್ಳಿ ಸೇತುವೆ ನಿರ್ಮಾಣಗೊಂಡಿದ್ದು ಉದ್ಘಾಟಿಸಲಾಗಿದೆ ಎಂದರು.
ಶಾಸಕ ಕೆ. ಎಸ್. ಲಿಂಗೇಶ್ ಮಾತನಾಡಿ ನನ್ನ ವಿರೋಧಿಗಳು ನನ್ನ ವಿರುದ್ಧ ಇಲ್ಲಸಲ್ಲದ ಜಾತಿ ಎಂಬ ವಿಷ ಬೀಜ ಬಣ್ಣಗಳನ್ನು ಕಟ್ಟಿ ಚರ್ಚೆ ಮಾಡುತ್ತಿದ್ದಾರೆ. ಅದು ಸತ್ಯಕ್ಕೆ ದೂರವಾಗಿದ್ದು ನಾನು ಶಾಸಕನಾದ ಸಂದರ್ಭದಲ್ಲಿ ಎಚ್. ಡಿ. ದೇವೇಗೌಡರು ಮತ್ತು ಎಚ್.ಡಿ. ಕುಮಾರಣ್ಣ ಹಾಗೂ ರೇವಣ್ಣನವರ ಆಶೀರ್ವಾದದಿಂದ ಸುಮಾರು 680 ಕೋಟಿ ಅನುದಾನ ತರಲಾಗಿತ್ತು. ತದನಂತರ ಬಂದಂತ ಸರ್ಕಾರ 1 ರೂ ಬಿಡದಂತೆ ವಾಪಸ್ ಪಡೆಯಿತು. ಆದರೂ ನಾನು ಯಾವುದಕ್ಕೂ ಕುಗ್ಗದೆ ಶಾಸಕನಾದ ದಿನದಿಂದ ನಿತ್ಯ ಸದನದಲ್ಲಿ ತಾಲೂಕಿನ ಸಮಸ್ಯೆಗಳ ಬಗ್ಗೆ ಪ್ರತಿನಿಧಿಸಿದ್ದೇನೆ.
ಬಿಜೆಪಿ ಸರ್ಕಾರದ ಮಂತ್ರಿಯಾಗಿದ್ದ ಈಶ್ವರಪ್ಪನವರ ಬಳಿ ತಾಲೂಕಿನ ಅರಣ್ಯ ಸಮಸ್ಯೆಗಳ ಬಗ್ಗೆ ಅಂಗಲಾಚಿ ಕೇಳಿಕೊಂಡ ಸಂದರ್ಭ ನನ್ನ ಮೇಲೆ ಟೀಕಾ ಪ್ರಹಾರ ನಡೆಯಿತು. ಆದರೆ ಅದೇ ಈಶ್ವರಪ್ಪನವರು ಈಗ ಎಲ್ಲಿದ್ದಾರೆ. ನನ್ನ ಅವಧಿಯಲ್ಲಿ ಇಲ್ಲಿಯವರೆಗೂ ತಾಲೂಕಿನಾದ್ಯಂತ ವಿವಿಧ ಕಾಮಗಾರಿಗಳಿಗೆ 1800 ಕೋಟಿ ಅನುದಾನ ತರವಲ್ಲಿ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಅದೇ ರೀತಿ ನಮ್ಮ ಪಕ್ಷದ ನಾಯಕರ ಆಶೀರ್ವಾದ ಒಳಗೊಂಡಂತೆ ಈ ಭಾಗದ ರಸ್ತೆ. ಚರಂಡಿ. ಸೇತುವೆ. ಹಾಗೂ ಸಮುದಾಯ ಭವನ ಗಳು ಸೇರಿದಂತೆ ಕುಡಿಯುವ ನೀರಿಗೆ ಸುಮಾರು 65 ಕೋಟಿಗೂ ಅಧಿಕ ಅನುದಾನ ನೀಡಲಾಗಿದೆ.
ಕೆಲ ನಮ್ಮ ವಿರೋಧಿಗಳು ಶಾಸಕರು ಸುಮ್ಮನೆ ಗುದ್ದಲಿ ಪೂಜೆ ಮಾಡಿ ಹೋಗುತ್ತಿದ್ದಾರೆ ಎನ್ನುತ್ತಿದ್ದಾರೆ ಅಂತಹವರು ಇನ್ನ 15 ದಿನಗಳಲ್ಲಿ ಮತ್ತೊಮ್ಮೆ ಕಾದು ನೋಡಲಿ ತಾಲೂಕಿಗೆ 10 ಕೋಟಿ ಅನುದಾನ ತರುವ ಮೂಲಕ ವಿವಿಧ ಕಾಮಗಾರಿಗಳು ಗುದ್ದಲಿ ಪೂಜೆ ನೆರವೇರಿಸುತ್ತೇನೆ. ಎಂದಿಗೂ ನಾನು ಜಾತಿ ಬೇದ ಮಾಡದೆ ಸಮಾಜದ ಸರ್ವ ಜನಾಂಗಕ್ಕೂ ತಾಲೂಕಿನ ಎಲ್ಲಾ ಭಾಗದ ಜಿಲ್ಲಾ ಪಂಚಾಯತಿ ಕ್ಷೇತ್ರಗಳಿಗೂ ಸಮನಾಗಿ ಅನುದಾನ ನೀಡಲು ಮುಂದಾಗಿದ್ದೇನೆ ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ನನಗೆ ಅವಕಾಶ ಕಲ್ಪಿಸಿಕೊಟ್ಟು ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕಾಗಿದೆ ಎಂದು ಮನವಿ ಮಾಡಿದರು.
ಇದೇ ಸಂದರ್ಭ ಜಿಲ್ಲಾ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಂ.ಎ. ನಾಗರಾಜ್. ಜೆಡಿಎಸ್ ತಾಲೂಕು ಅಧ್ಯಕ್ಷ ತೋ.ಚ. ಅನಂತ ಸುಬ್ಬರಾಯ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಟಿ. ಇಂದಿರಾ. ಮಾಜಿ ಸದಸ್ಯ ಲತಾ ಮಂಜೇಶ್ವರಿ. ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಸುಭಾನ್. ಜೆಡಿಎಸ್ ತಾಲೂಕು ಪ್ರಧಾನ ಕಾರ್ಯದರ್ಶಿ, ಚಿನ್ನೇನಹಳ್ಳಿ ಮಹೇಶ್. ಜೆಡಿಎಸ್ ಯುವ ಘಟಕದ ಅಧ್ಯಕ್ಷ ಬಿಟ್ರವಳ್ಳಿ ಉಮೇಶ್. ಮುಖಂಡರಾದ ಹಿರಿಯಣ್ಣ ಗೌಡ. ಸೋಮನಹಳ್ಳಿ ನಾಗೇಶ್. ಎಸ್ ಕೆ ನಾಗೇಶ್ ಯಾದವ್. ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.