ಆಲೂರು: ಕಷ್ಟಪಟ್ಟು ಬೆಳೆದಿದ್ದ ಮುಸುಕಿನ ಜೋಳ ಅಪಾರ ಲಾಭ ತಂದುಕೊಡುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತನಿಗೆ ಆಘಾತ ಎದುರಾಗಿದ್ದು, ಲಕ್ಷಾಂತರ ಮೌಲ್ಯದ ನೂರಾರು ಕ್ವಿಂಟಾಲ್ ಜೋಳವನ್ನು ದುಷ್ಕರ್ಮಿಗಳು ಶುಕ್ರವಾರ ರಾತ್ರಿ ಸುಟ್ಟು ಹಾಕಿದ್ದಾರೆ.
ತಾಲೂಕಿನ ಅಂಜಳ್ಳಿ ಗ್ರಾಮದ ಯೋಗೇಶ್ ಎಂಬ ರೈತನ ಜೋಳದ ರಾಶಿ ಬೆಂಕಿಗಾಹುತಿಯಾಗಿದ್ದು ಆತನ ರೋದನೆ ಮುಗಿಲು ಮುಟ್ಟಿದೆ. ಊರಿನಲ್ಲಿ ಯಾರಿಗೂ ಕೇಡು ಬಯಸದ ತಾನಾಯಿತು ತಮ್ಮ ಕೆಲಸವಾಯಿತು ಎಂಬಂತಿರುವ ರೈತನ ಬೆಳೆಯನ್ನು ಸುಟ್ಟು ಹಾಕಲು ಕಾರಣವೇನೆಂಬುದು ತಿಳಿದುಬಂದಿಲ್ಲ.
ಸಮೃದ್ಧವಾಗಿ ಬೆಳೆದ ಜೋಳವನ್ನ ಮನೆಯ ಪಕ್ಕ ಕಣ ಮಾಡಿ ರಾಶಿ ಹಾಕಿದ್ದರು.ಯಾರೋ ಕಿಡಿಗೇಡಿಗಳು ಇದೀಗ ರಾಶಗೆ ಬೆಂಕಿ ಹಾಕದ್ದಾರೆ. ಬೆಂಕಿ ಕಾಣಿಸಿಕೊಂಡಾಗ ಸ್ಥಳೀಯರು ಮಾಹಿತಿ ನೀಡಿದ್ದು ಗ್ರಾಮಸ್ಥರೊಂದಿಗೆ ಬೆಂಕಿ ನಂದಿಸುವ ಪ್ರಯತ್ನ ಮಾಡಲಾಯಿತಾದರೂ ಅಷ್ಟರಲ್ಲಿ ಬಹುತೇಕ ಸುಟ್ಟು ಕರಕಲಾಗಿತ್ತು.
ರಾಶಿಗೆ ಏಕಾಏಕಿ ಬೆಂಕಿ ಆವರಿಸಿದ್ದರಿಂದ ಜೋಳ ಸಂಪೂರ್ಣ ನಾಶವಾಗಿದೆ ಎಂದು ಯೋಗೇಶ್ ನೋವು ತೋಡಿಕೊಂಡಿದ್ದಾರೆ.