ಹಾಸನ: ಲಸಿಕೆ ನೀಡುವ ಜಾಗದ ವಿಚಾರವಾಗಿ ಯತೀಂದ್ರ ಪ್ಯಾರಾ ಮೆಡಿಕಲ್ ಕಾಲೇಜ್ ಮಾಲೀಕರಿಗೂ ಮತ್ತು ನಗರಸಭೆ ಆಯುಕ್ತರ ನಡುವೆ ನಡೆದ ವಾಗ್ವಾದ ಮತ್ತು ತಳ್ಳಾಟ, ನೂಕಾಟದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಕೊವೀಡ್ ಲಸಿಕಾಕರಣಕ್ಕಾಗಿ ನಗರಸಭೆ ಸಿಬ್ಬಂದಿ ಹಾಸನ ನಗರದ ಹೇಮಾವತಿ ಬಡಾವಣೆಯಲ್ಲಿ ಯತೀಂದ್ರ ಪ್ಯಾರಾ ಮೆಡಿಕಲ್ ಕಾಲೇಜ್ ಉಪಯೋಗಿಸಿ ಕೊಂಡಿದ್ದರು. ಅಂದು ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆ ಸಮಯದ ಅವಧಿಗೆ ಲಸಿಕಾಕರಣದ ಅವಧಿ ಇದ್ದು, ಅಲ್ಲಿವರೆಗೂ ವ್ಯಾಕ್ಸಿನೇಷನ್ ಮಾಡುವುದಕ್ಕೆ ಕಾಲೇಜು ನೀಡಲು ಸಾಧ್ಯವಿಲ್ಲ ಎಂದು ನಗರಸಭೆ ಆಯುಕ್ತರಾದ ಕೃಷ್ಣಮೂರ್ತಿ ಅವರಿಗೆ ಕಾಲೇಜು ಮುಖ್ಯಸ್ಥ ಹಾಗೂ ವೈದ್ಯರಾದ ಡಾ. ಯತೀಂದ್ರರವರು ತಿಳಿಸಿದ್ದಾರೆ.
ಈ ವೇಳೆ ನಗರಸಭೆ ಆಯುಕ್ತರು ಮಾತನಾಡಿ, ಜಿಲ್ಲಾಡಳಿತದ ಆದೇಶದಂತೆ ಸಂಜೆ 4 ಗಂಟೆ ಸಮಯದವರೆಗೆ ಆದರೂ ಅವಕಾಶ ನೀಡಿ ಎಂದು ಕಾಲೇಜು ಆಡಳಿತ ಮಂಡಳಿನ್ನು ಕೋರಿದ್ದಾರೆ. ಇದನ್ನು ಧಿಕ್ಕರಿಸಿದ ಕಾಲೇಜು ಆಡಳಿತ ಮಂಡಳಿಯ ಸಿಬ್ಬಂದಿ ಸ್ಥಳದಲ್ಲಿದ್ದ ನಗರಸಭೆ ಆಯುಕ್ತರು ಮತ್ತು ಸಿಬ್ಬಂದಿಗೆ ಅವಾಚ್ಯ ಪದಗಳಿಂದ ನಿಂದನೆ ಮಾಡಿರುವುದಾಗಿ ತಿಳಿದು ಬಂದಿದೆ.
ಕಾಲೇಜು ಮಾಲೀಕರಾದ ಡಾ. ಯತೀಂದ್ರ ಮತ್ತು ಕಾಲೇಜು ಸಿಬ್ಬಂದಿ ನಡುವೆ ಹಾಗೂ ನಗರಸಭೆ ಆಯುಕ್ತರು ಮತ್ತು ಸಿಬ್ಬಂದಿ ನಡುವೆ ಈ ವೇಳೆ ಪರಸ್ಪರ ಮಾತುಕತೆ ನಡೆದು ಮಾತಿಗೆ ಮಾತು ಬೆಳೆದು ನಗರಸಭೆ ಸಿಬ್ಬಂದಿ ಮೇಲೆ ಯತೀಂದ್ರ ಮತ್ತು ಕಾಲೇಜು ಸಿಬ್ಬಂದಿ ಸೇರಿ ದೈಹಿಕ ಹಲ್ಲೆ ನಡೆಸಿದ್ದು. ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ಸಕತ್ ವೈರಲ್ ಆಗಿದೆ. ಈ ಬಗ್ಗೆ ನಗರಸಭೆ ಆಯುಕ್ತರು ಯಾವುದೇ ದೂರು ನೀಡಿರುವುದಿಲ್ಲ. ಸದ್ಯ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಹೇಳಲಾಗಿದೆ.