ಹಾಸನ: ವಿವಿಧ ಹಕ್ಕೋತ್ತಾಯವನ್ನೊಳಗೊಂಡ ರಾಜ್ಯ ಮಟ್ಟದ ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆಯನ್ನು ಮೇ.17ರ ಮಂಗಳವಾರದಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಎಐಯುಟಿಯುಸಿ ಡಿ.ನಾಗಲಕ್ಷ್ಮಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಕಳೆದ 15 ವರ್ಷಗಳಿಂದ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರು ತಾಯಿ ಮತ್ತು ಮಗುವಿನ ಆರೋಗ್ಯ ಸೇವೆಗಳೂ ಸೇರಿದಂತೆ ಸುಗಮ ಹೆರಿಗೆ, ಸ್ವಸ್ಥ ಮಗುವಿನ ಜನನ, ತಾಯಿ – ಶಿಶು ಆರೈಕೆಗಳ ಕುರಿತ ಸೇವೆಗಳು, ಗ್ರಾಮ ನೈರ್ಮಲ್ಯ ಸೇರಿದಂತೆ ವಿವಿಧ ಆರೋಗ್ಯ ಚಟುವಟಿಕೆಗಳು ಮತ್ತು ಹಲವಾರು ಸಮೀಕ್ಷೆಗಳನ್ನು ನಿರಂತರವಾಗಿ ಮಾಡಲಾಗುತ್ತಿದೆ.
ರಾಜ್ಯದ ಬಡಜನರಿಗೆ ಆಶಾ ನೀಡುತ್ತಿರುವ ವಿವಿಧ ಆರೋಗ್ಯ ಸೇವೆಗಳನ್ನು ನೀಡುತ್ತಾ ಆರೋಗ್ಯ ಇಲಾಖೆಯ ಖಾಯಂ ನೌಕರರೇ ಆಗಿ ಹೋಗಿದ್ದಾರೆ. ಇಲಾಖೆಯ ಎಲ್ಲಾ ಸಾರ್ವಜನಿಕ ಆರೋಗ್ಯ ಸೇವೆಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.
ರಾಜ್ಯದಲ್ಲಿ ಕೊರೋನಾ ಸಾಂಕ್ರಾಮಿಕದ ಹರಡುವಿಕೆಯನ್ನು ತಡೆಗಟ್ಟುವಲ್ಲಿ, ಜನರಿಗೆ ಲಸಿಕೆ ಹಾಕಿಸುವಲ್ಲಿ ಇವರು ಕೊರೋನಾ ವಾರಿಯರ್ಸ್ ಆಗಿ ಪ್ರಮುಖ ಪಾತ್ರವಹಿಸಿದ್ದು, ತಮ್ಮ ಜೀವ ಪಣಕ್ಕಿಟ್ಟು ಕೊರೊನಾ ತಡೆಗೆ ನಡೆಸಿದ ಹೋರಾಟ ನಿಜಕ್ಕೂ ಶ್ಲಾಘನೀಯ ಎಂದರು. ಕೇಂದ್ರ ಸರ್ಕಾರ ರಾಜ್ಯದ ಆಶಾ ಕಾರ್ಯಕರ್ತೆಯರ ಸೇವೆಗೆ ಮೆಚ್ಚಿ ದೇಶದಲ್ಲಿಯೇ ಅತ್ಯುತ್ತಮ ಸೇವೆ ಸಲ್ಲಿಸಿರುವರೆಂದು ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದೆ. ಇಲಾಖೆ ವಹಿಸಿದ ವಿವಿಧ ಕೆಲಸಗಳನ್ನು ಹಗಲಿರುಳು ಮಾಡಿದರೂ ದುಡಿದಷ್ಟು ಕೈಗೆ ತಲುಪದಿರುವುದು ಅತ್ಯಂತ ಖೇದದ ವಿಷಯವಾಗಿದೆ.
ಆರ್.ಸಿ.ಹೆಚ್. ಪೋರ್ಟಲ್ ಮೂಲಕ ನೀಡುವ ಕೇಂದ್ರದ ಪ್ರೋತ್ಸಾಹಧನ ಹಲವಾರು ವರ್ಷಗಳಿಂದ ಸರಿಯಾಗಿ ಪಡೆಯಲು ಆಗದಿರುವ ಬಗ್ಗೆ ಇಲಾಖೆಯ ಗಮನಕ್ಕೆ ತರಲಾಗಿದ್ದರೂ ಇಂದಿಗೂ ಸಮಸ್ಯೆ ಬಗೆಹರಿದಿರುವುದಿಲ್ಲ. ಹಲವಾರು ವರ್ಷದಿಂದ ಸಹಸ್ರಾರು ರೂಪಾಯಿಗಳಿಂದ ವಂಚಿತರಾಗಿದ್ದಾರೆ. ಇವರು ಒಬ್ಬ ಕಾರ್ಯಕರ್ತೆ ಪ್ರತೀ ತಿಂಗಳು ಐದಾರು ಸಾವಿರ ರೂಪಾಯಿಗಳ ಬೆಲೆಯ ಚಟುವಟಿಕೆಗಳನ್ನು ಮಾಡಿ, ಪ್ರತಿಫಲವಾಗಿ ಕೇವಲ ಒಂದು ಸಾವಿರದಿಂದ ಮೂರು ಸಾವಿರವರೆಗೆ ಮಾತ್ರ ಪ್ರೋತ್ಸಾಹಧನ ಪಡೆಯುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದ ೩೦ ಜಿಲ್ಲೆಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಈ ಸಮಸ್ಯೆಗಳಿದ್ದು, ಹಲವಾರು ವರ್ಷಗಳಿಂದ ಪರಿಹಾರ ಕಾಣದೇ ಉಳಿದಿದೆ. ಈ ಬಗ್ಗೆ ಆಯಾ ಜಿಲ್ಲಾ ಆರೋಗ್ಯ ಅಧಿಕಾರಿಗಳ ಗಮನಕ್ಕೆ ತರಲಾಗಿ ಆಯಾ ಜಿಲ್ಲೆಗಳಿಂದ ಅಧಿಕೃತ ಜ್ಞಾಪನಾ ಪತ್ರ ಹೊರಡಿಸಿದರೂ ಸಮಸ್ಯೆ ಬಗೆಹರಿದಿಲ್ಲ. ಬಹುತೇಕ ಕಡೆಗಳಲ್ಲಿ ಬಾಕಿ ದಾಖಲು ಆಗಿರುವುದಿಲ್ಲ. ಕೆಲವೊಂದು ಬಾರಿ ತಾಂತ್ರಿಕ ಸಮಸ್ಯೆಗಳು, ಆರ್.ಸಿ.ಹೆಚ್. ಪೋರ್ಟಲ್ನಲ್ಲಿ ದಾಖಲಾಗಿದ್ದರೂ ವೆರಿಫಿಕೇಶನ್ ಬರುವುದಿಲ್ಲ. ಕೆಲ ಬಾರಿ ವೆರಿಫಿಕೇಶನ್ ಬಂದಿರುವುದು. ವೆರಿಫಿಕೇಶನ್ ಮಾಡುವ ಮುಂಚೆಯೇ ಪೋರ್ಟಲ್ ನಿಂದಲೇ ದಾಖಲೆ ಮಾಯ ಆಗಿರುತ್ತದೆ ಎಂದು ಆರೋಪಿಸಿದರು.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈ ಪ್ರೋತ್ಸಾಹಧನ ನೀಡಿಲ್ಲ. ಪ್ರತೀ ವರ್ಷ ನೀಡಬೇಕಾದ ಡೈರಿ, ಸಮವಸ್ತ್ರ ನೀಡುತ್ತಿಲ್ಲ. ಆದ್ದರಿಂದ ರಾಜ್ಯದ ಎಲ್ಲಾ ಆಶಾ ಕಾರ್ಯಕರ್ತೆಯರು ಎದುರಿಸುತ್ತಿರುವ ಹಲವಾರು ಜ್ವಲಂತ ಸಮಸ್ಯೆಗಳನ್ನು ಪರಿಹರಿಸಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿ ಎಐಯುಟಿಯುಸಿ ಗೆ ಸಂಯೋಜಿತವಾದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಮೇ 17 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಜ್ಯ ಮಟ್ಟದ ಬೃಹತ್ ಪ್ರತಿಭಟನಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಹಾಸನ ಜಿಲ್ಲಾ ಉಸ್ತುವಾರಿ ಜಿ. ಹನುಮೇಶ್, ಜಿಲ್ಲಾಧ್ಯಕ್ಷೆ ಮಮತ, ಜಿಲ್ಲಾ ಕಾರ್ಯದರ್ಶಿ ಪುಷ್ಪಲತಾ, ಗೌರಮ್ಮ, ಪುಷ್ಪಾವತಿ, ಲಕ್ಷ್ಮೀ, ಲತಾ ಇತರರು ಉಪಸ್ಥಿತರಿದ್ದರು.