ಹಾಸನ: “ಅಜಾನ್ ವಿಷಯದಲ್ಲಿ ಸರ್ಕಾರ ದೃಢ ನಿಲುವಿನೊಂದಿಗೆ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯಾದ್ಯಂತ ಜೂನ್ 1ರಿಂದ ಎರಡನೇ ಸುತ್ತಿನ ಹೋರಾಟವನ್ನು ಶ್ರೀರಾಮಸೇನೆ ವತಿಯಿಂದ ಹಮ್ಮಿಕೊಳ್ಳಲಾಗುವುದು” ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಸಿದರು.
ಹಾಸನದಲ್ಲಿ ಮಾತನಾಡಿದ ಅವರು, “ಸುಪ್ರೀಂಕೋರ್ಟ್ ನಿರ್ದೇಶನದಂತೆ ಮಸೀದಿಗಳಲ್ಲಿ ಅಜಾನ್ ನಿಲ್ಲಿಸಬೇಕಾಗಿದೆ ಹಾಗೂ ನಿರ್ದಿಷ್ಟ ಪ್ರಮಾಣದ ಧ್ವನಿಯೊಂದಿಗೆ ಅಜಾನ್ ಪ್ರಸಾರ ಮಾಡುವುದಕ್ಕೆ ಸೂಚನೆ ನೀಡಲಾಗಿದ್ದರೂ ಸಹ ಬಹುತೇಕ ಮಸೀದಿಗಳಲ್ಲಿ ಇದು ಪಾಲನೆ ಆಗುತ್ತಿಲ್ಲ” ಎಂದು ದೂರಿದರು.
“ಮುಖ್ಯಮಂತ್ರಿ ಹಾಗೂ ಗೃಹಮಂತ್ರಿ ಸಹ ಈ ಬಗ್ಗೆ ದೃಢ ನಿಲುವನ್ನು ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಂಡು ಅಜಾನ್ ನಿಲ್ಲಿಸದಿದ್ದರೆ ಜೂನ್ 1ರಿಂದ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಹೇಳಿದರು.
ಪಠ್ಯದಲ್ಲಿ ಹೆಡ್ಗೆವಾರ್ ವಿಷಯ ಸೂಕ್ತ:
“ಪಠ್ಯ-ಪುಸ್ತಕಗಳಲ್ಲಿ ಆರ್ಎಸ್ಎಸ್ ಸಂಸ್ಥಾಪಕರಾದ ಹೆಗಡೆವಾರ್ ವಿಷಯಗಳನ್ನು ಅಳವಡಿಸುವುದು ಸೂಕ್ತವಾಗಿದೆ. ಅವರು ಎಂದೂ ಸಹ ದೇಶವಿರೋಧಿ ಕೆಲಸ ಮಾಡಿಲ್ಲ. ಅಂಥವರ ಬಗ್ಗೆ ಪಠ್ಯ-ಪುಸ್ತಕದಲ್ಲಿ ಪ್ರಕಟಿಸುವುದಕ್ಕೆ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳು ಯಾಕೆ ಮೀನಮೇಷ ಎಣಿಸುತ್ತಿದ್ದಾರೆ? ತಿಳಿಯುತ್ತಿಲ್ಲ. ಯಾವುದೇ ಕಾರಣಕ್ಕೂ ವಿಷಯಗಳನ್ನು ಅಳವಡಿಸುವುದಕ್ಕೆ ಹಿಂಜರಿಯಬಾರದು” ಎಂದು ಮುತಾಲಿಕ್ ಒತ್ತಾಯಿಸಿದರು.
“ಆರ್ಎಸ್ಎಸ್ ರಾಜಕೀಯೇತರ ದೇಶದ ನಂಬರ್ ಒನ್ ಸಂಘವಾಗಿದೆ. ಇದು ಭಯೋತ್ಪಾದಕರ ಸಂಘಟನೆಯಲ್ಲ. ದೇಶಭಕ್ತಿಯ ಸಂಘಟನೆಯಾಗಿದ್ದು, ಅದರ ಸಂಸ್ಥಾಪಕರಾದ ಹೆಗಡೆವಾರ್ ಅವರ ವಿಷಯವನ್ನು ಪಠ್ಯದಲ್ಲಿ ಅಳವಡಿಸುವುದು ಸೂಕ್ತವಾಗಿದೆ. ಹಲವು ದಶಕ ದೇಶವನ್ನಾಳಿದ ಕಾಂಗ್ರೆಸ್ ಸರ್ಕಾರದಲ್ಲಿ ಆಡಳಿತ ನಡೆಸಿದ ಐದು ಮಂದಿ ಮುಸ್ಲಿಂ ಕೇಂದ್ರ ಶಿಕ್ಷಣ ಸಚಿವರು, ಕೇವಲ ಔರಂಗಜೇಬ್, ಟಿಪ್ಪು, ಬಾಬರ್ರಂತಹ ದೇಶವಿರೋಧಿ ವ್ಯಕ್ತಿಗಳ ವಿಷಯಗಳನ್ನು ಪಠ್ಯದಲ್ಲಿ ಅಳವಡಿಸುವ ಮೂಲಕ ಹಿಂದೂ ರಾಷ್ಟ್ರಕ್ಕೆ ತಪ್ಪು ಸಂದೇಶವನ್ನು ಸಾರುವಂತೆ ಮಾಡಿದರು” ಎಂದು ಮುತಾಲಿಕ್ ದೂರಿದರು.
ಚರ್ಚ್ ನೆಲಸಮಕ್ಕೆ ಮನವಿ:
ಪ್ರಮೋದ್ ಮುತಾಲಿಕ್, “ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ತಲೆಯೆತ್ತಿರುವ ಅನಧಿಕೃತ ಚರ್ಚೆಗಳನ್ನು ನೆಲಸಮಮಾಡಬೇಕು ಎಂಬುದಾಗಿ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳಿಗೆ ಮನವಿ ಸಲ್ಲಿಸಿ ಈ ಬಗ್ಗೆ ಹೋರಾಟ ನಡೆಸಲಾಗುವುದು” ಎಂದು ತಿಳಿಸಿದರು.
ನಮಾಜ್ ಮಾಡಲು ಮಸೀದಿಯೇ?:
ದತ್ತಪೀಠದಲ್ಲಿ ಮುಸ್ಲಿಂ ನಮಾಜ್ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರಮೋದ್ ಮುತಾಲಿಕ್, “ನಮಾಜ್ ಮಾಡುವುದಕ್ಕೆ ಅದೇನು ಮಸೀದಿನಾ? ಎಂದು ಪ್ರಶ್ನೆ ಮಾಡಿದರು. ಚಿಕ್ಕಮಗಳೂರಿನ ಡಿಸಿ, ಎಸ್ಪಿ, ಮುಜರಾಯಿ ಇಲಾಖೆ ಏನು ಮಾಡುತ್ತಿದೆ?. ನಿಷೇಧವಿದ್ದರೂ ಮಾಂಸ ಮಾಡಿದ್ದಾರೆ, ಸಂಬಂಧಪಟ್ಟವರು ಕತ್ತೆ ಕಾಯುತ್ತಿದ್ದರಾ?” ಎಂದು ಜಿಲ್ಲಾಡಳಿತ ವಿರುದ್ಧ ಕಿಡಿಕಾರಿದರು.
“ಕೋರ್ಟ್ ಹೇಳಿದ ಮೇಲೂ ಒಂದೆಡೆ ಮುಸ್ಲಿಂಮರ ಸೊಕ್ಕಿನ ವರ್ತನೆ, ಮತ್ತೊಂದೆಡೆ ಇಲಾಖೆಯ ದೌರ್ಬಲ್ಯ, ನಿರ್ಲಕ್ಷ್ಯದಿಂದ ಹಿಂದೂಗಳಿಗೆ ತೊಂದರೆಯಾಗುತ್ತಿದೆ. ದತ್ತಪೀಠ ಹಿಂದೂಗಳ ಪೀಠ, ಹಿಂದೂ ಅರ್ಚಕರ ನೇಮಿಸಬೇಕೆಂದು ಹೈಕೋರ್ಟ್ ತೀರ್ಪು ನೀಡಿದೆ, ಹೈಕೋರ್ಟ್ ಹೇಳಿದ ಮೇಲೆ ಅದು ಪೂರ್ತಿ ಹಿಂದೂಗಳ ಪೀಠ ಆಗುತ್ತದೆ. ಧಾರ್ಮಿಕ ದತ್ತಿ ಇಲಾಖೆಗೆ ಹಿಂದೂಗಳ ದೇವಸ್ಥಾನ, ಮಠಗಳಿಗೆ ಸಂಬಂಧಪಟ್ಟದ್ದು. ವಕ್ಫ್ ಬೋರ್ಡ್ ಮುಸ್ಲಿಂಮರ ಮಸೀದಿ, ದರ್ಗಾ, ಸ್ಮಶಾನಕ್ಕೆ ಸಂಬಂಧಿಸಿದ್ದು” ಎಂದರು.