ಮೈಸೂರು: ಸಲದ ಹಣ ವಸೂಲಿಗಾಗಿ ಸಹದ್ಯೋಗಿ ನೀಡಿದ ಕಿರುಕುಳಕ್ಕೆ ಬೇಸತ್ತ ಕೆ.ಎಸ್.ಆರ್.ಟಿ.ಸಿ.ಬಸ್ ಕಂಡಕ್ಟರ್ ಮನೆ ಬಿಟ್ಟ ಹತ್ತು ದಿನಗಳ ನಂತರ ವರುಣಾ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಬಸ್ ಕಂಡಕ್ಟರ್ ಸಾವಿನ ಸುತ್ತ ಅನುಮಾನದ ಹುತ್ತ ನಿರ್ಮಾಣವಾಗಿದೆ. ಸಾವು ಆತ್ಮಹತ್ಯೆಯೋ..? ಕೊಲೆಯೋ…? ಪೊಲೀಸರ ತನಿಖೆಯಲ್ಲಿ ಖಚಿತವಾಗಬೇಕಿದೆ.
ಕುವೆಂಪುನಗರ ಬಸ್ ಡಿಪೋದಲ್ಲಿ ಕಂಡಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಕಾಂತ ಯಲ್ಲಪ್ಪ ಅನುಮಾನಾಸ್ಪದವಾಗಿ ಮೃತಪಟ್ಟವರು.ಸದ್ಯ ಈತನ ಸಾವಿಗೆ ಕಾರಣವಾಗಿರುವ ಸಹದ್ಯೋಗಿ ಗುರುರಾಜ ಉಪಾಸ ಹಾಗೂ ಇವರ ಸ್ನೇಹಿತ ಸುಭಾಷ್ ವಿರುದ್ದ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀಕಾಂತ್ ಯಲ್ಲಪ್ಪ ರವರು ತಮ್ಮ ವಿಕಲಚೇತನ ಮಗನ ಚಿಕಿತ್ಸೆಗಾಗಿ ಸಹದ್ಯೋಗಿ ಗುರುರಾಜ್ ಉಪಾಸ ಬಳಿ 3 ಲಕ್ಷ ಸಾಲ ಪಡೆದಿದ್ದರು.ಶೇ 5 % ಬಡ್ಡಿ ಹಣ ಕಟ್ಟುತ್ತಿದ್ದರು.ಸುಮಾರು ತಿಂಗಳು ಬಡ್ಡಿ ಹಣ ಕಟ್ಟಿದ್ದಾರೆ. ಈ ಮಧ್ಯೆ ಅಸಲು ಹಣ ತೀರಿಸುವಂತೆ ಗುರುರಾಜ್ ಉಪಾಸ ಪಟ್ಟು ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಹಣ ತೀರಿಸದಿದ್ದರೆ ನೀನು ಸಾಯುವುದೇ ಮೇಲು ಎಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಈ ವೇಳೆ ಸಂಭಂಧಿಕರೊಬ್ಬರು 2 ಲಕ್ಷ ಪಾವತಿಸಿ ಉಳಿದ ಹಣಕ್ಕೆ ಸಮಯ ಪಡೆದಿದ್ದರು. ಮತ್ತೆ 5 ಲಕ್ಷ ಹಣ ನೀಡುವಂತೆ ಪೀಡಿಸಿದ್ದಾರೆ. ಆಗಾಗ ಮನೆಗೆ ಬರುತ್ತಿದ್ದ ಗುರುರಾಜ್ ಉಪಾಸ ಹಣಕ್ಕಾಗಿ ಮಾನಸಿಕವಾಗಿ ಹಿಂಸಿಸಿ ನಿಂದಿಸಿದ್ದಾರೆ.

ಇದರಿಂದ ಬೇಸತ್ತ ಶ್ರೀಕಾಂತ್ ಯಲ್ಲಪ್ಪ ಮನೆ ಬಿಟ್ಟವರು ಕೆಲಸಕ್ಕೂ ಹೋಗಿಲ್ಲ. ಮನೆಗೂ ಹಿಂದಿರುಗಿಲ್ಲ. 10 ದಿನಗಳ ನಂತರ ಶ್ರೀಕಾಂತ್ ಯಲ್ಲಪ್ಪ ರವರ ಮೃತದೇಹ ಕಿರಾಳು ಗ್ರಾಮದ ವರುಣಾ ಉಪನಾಲೆಯಲ್ಲಿ ದೊರೆತಿದೆ. ಗುರುರಾಜ ಉಪಾಸ ರವರ ಕಿರುಕುಳಕ್ಕೆ ಬೆಸತ್ತು ಮನೆ ಬಿಟ್ಟ ಶ್ರೀಕಾಂತ ಯಲ್ಲಪ್ಪ ಸಾವಿನ ಹಿಂದೆ ಅನುಮಾನದ ಹುತ್ತ ಎದ್ದಿದೆ.
ಮನೆ ಬಿಡುವ ಮುನ್ನ ಶ್ರೀಕಾಂತ ಯಲ್ಲಪ್ಪ ಡೆತ್ ನೋಟ್ ಬರೆದು ಹೊರಟಿದ್ದಾರೆ. ಮೃತಪಟ್ಟ ಕೆಲವು ದಿನಗಳ ನಂತರ ಡೆತ್ ನೋಟ್ ಮನೆಯವರಿಗೆ ದೊರೆತಿದೆ. ಇದರಲ್ಲಿ ಗುರುರಾಜ್ ಉಪಾಸ ಹೆಸರು ಉಲ್ಲೇಖಿಸಿದ್ದಾರೆ. ನಾನು ಹೆಚ್ಚುಕಮ್ಮಿ ಮಾಡಿಕೊಂಡರೆ ಗುರುರಾಜ್ ಉಪಾಸ ಕಾರಣ ಎಂದು ಬರೆದಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲಿ ಮಧ್ಯಪಾನದ ಜೊತೆಗೆ ವಿಷ ಬೆರೆಸಲಾಗಿರುವುದು ಪತ್ತೆಯಾಗಿದೆ.ವಿಷ ಬೆರೆಸಿ ಕುಡಿದಿದ್ದರೆ ನೀರಿನಲ್ಲಿ ಮೃತದೇಹ ಪತ್ತೆಯಾಗಿದ್ದು ಹೇಗೆ..? ಆತ್ಮಹತ್ಯೆ ಮಾಡಿಕೊಳ್ಳುವಂತಿದ್ದರೆ ವಿಷ ಸೇವಿಸಿ ಮನೆಯಲ್ಲೇ ಮಾಡಿಕೊಳ್ಳಬಹುದಿತ್ತು ಎಂಬುದು ಮನೆಯವರ ವಾದ.ಶ್ರೀಕಾಂತ ಯಲ್ಲಪ್ಪ ರವರ ಸಾವು ಅನುಮಾನ ಮೂಡಿಸುತ್ತಿದೆ.
ವರುಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ನ್ಯಾಯಾಲಯದ ಆದೇಶದಂತೆ ಉದಯಗಿರಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.ಹಣಕ್ಕಾಗಿ ಪೀಡಿಸಿದ ಗುರುರಾಜ ಉಪಾಸ ರನ್ನ ಪೊಲೀಸರು ತೀವ್ರ ವಿಚಾರಣೆ ನಡೆಸಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

