ನಂಜನಗೂಡು: ಏಕೀಕರಣದ ಹಾದಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜ.23ರಂದು ಸ್ಥಳೀಯ ಶಾಸಕರು ಮತ್ತು ಸಂಸದರ ಜೊತೆ ರೈತ ಮುಖಂಡರ ಮುಖಾಮುಖಿ ರೈತರ ಸ್ನೇಹಿ ಚರ್ಚಾ ಕಾರ್ಯಕ್ರಮವನ್ನು ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಂಡವಪುರ ಗ್ರಾಮದ ಮಾರಮ್ಮನ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಏಕೀಕರಣದ ರಾಜ್ಯ ರೈತನಾಯಕ ಪಚ್ಚೆ ನಂಜುಂಡಸ್ವಾಮಿ ಹಾಗೂ ಜಿಲ್ಲಾ ರೈತ ಸಂಘದ ಅಧ್ಯಕ್ಷ ವಿದ್ಯಾಸಾಗರ್ ತಿಳಿಸಿದರು.

ನಂಜನಗೂಡು ತಾಲ್ಲೂಕು ಪತ್ರಕರ್ತರ ಭವನದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ರಾಜ್ಯದಲ್ಲಿ ರೈತರ ಸಮಸ್ಯೆಗಳು ಹಾಗೂ ಆತ್ಮಹತ್ಯೆಗಳಿಂದಾಗಿ ಹೋರಾಟ ಮಾಡುವುದು ಸಾಮಾನ್ಯವಾಗಿದೆ. ಅಲ್ಲದೆ ರೈತರ ಭೂಮಿ ಮೇಲೆ ಬಂಡವಾಳ ಶಾಹಿಗಳ ಕಣ್ಣು ಬಿದ್ದು ದೊಡ್ಡ ದೊಡ್ಡ ಕುಳಗಳು ಬಂದು ಕುಳಿತುಕೊಳ್ಳುತ್ತಿದ್ದಾರೆ.

ಹಾಗಾಗಿ ನಮ್ಮನ್ನಾಳುವ ಪ್ರಜಾಪ್ರಭುತ್ವದ ಶಾಸಕಾಂಗ ವ್ಯವಸ್ಥೆಗೆ ನಮ್ಮ ಸಮಸ್ಯೆಗಳನ್ನು ನೇರವಾಗಿ ರೈತ ಸ್ನೇಹಿಯಾಗಿ ಅವರಿಗೆ ಮುಟ್ಟಿಸಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ನಮ್ಮ ರೈತ ನಾಯಕರೂ ಶಾಸಕರು ಆದ ದರ್ಶನ್ ಪುಟ್ಟಣ್ಣಯ್ಯ ಅವರ ಜೊತೆ ಎಲ್ಲಾ ಶಾಸಕರು ಕೈಜೋಡಿಸಿ ರೈತರ ಸಮಸ್ಯೆಗಳಿಗೆ ಸ್ಪಂದಿಸುವಂತಾಗಲಿ ಎಂಬುದೇ ಈ ರೈತ ಸ್ನೇಹಿ ಚರ್ಚಾ ಕಾರ್ಯಕ್ರಮವಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರುಗಳು ಹಾಗೂ ಶಾಸಕರುಗಳು ಮತ್ತು ಸಂಸದರು ಭಾಗವಹಿಸಲಿದ್ದಾರೆ‌. ಸಭೆಯಲ್ಲಿ ಟನ್ ಕಬ್ಬಿಗೆ 5500 ರೂಪಾಯಿ ಬೆಲೆ ನಿಗದಿಪಡಿಸಬೇಕು. ಕಾರ್ಖಾನೆಗಳ ಲಾಭಾಂಶದಲ್ಲಿ ಹಾಗೂ ಕಬ್ಬಿನ ಉಪ ಉತ್ಪನ್ನದಿಂದ ಬರುವ ಸರ್ಕಾರಿ ತೆರಿಗೆಯಿಂದ ರೈತರಿಗೆ ಕನಿಷ್ಠ ಪ್ರತಿ ಟನ್ ಗೆ ಹೆಚ್ಚುವರಿ 2000ಗಳನ್ನು ನೇರ ಖಾತೆಗೆ ಜಮಾ ಮಾಡಬೇಕು, ಭತ್ತಕ್ಕೆ 3500 ಬೆಲೆ ನಿಗದಿ ಮಾಡಿ ಖರೀದಿ ಕೇಂದ್ರದಿಂದಲೇ ಖರೀದಿಸಬೇಕು‌‌.

ಕೃಷಿ ಪಂಪ್ ಷಟ್ಟುಗಳಿಗೆ ಅಕ್ರಮ ಸಕ್ರಮ ವಿದ್ಯುತ್ ಸಂಪರ್ಕ ನೀತಿ ಮರು ಜಾರಿಯಾಗಬೇಕು. ರೈತರ ಎಲ್ಲಾ ಕ್ರಯಬೀಳು, ಸರ್ಕಾರಿ ಬೀಳು ಎಂಬುದನ್ನು ಕೈ ಬಿಟ್ಟು ಅನುಭವದಲ್ಲರುವ ರೈತರ ಹೆಸರನ್ನು ಪಹಣಿಯಲ್ಲಿ ಸೇರಿಸಬೇಕು ಮತ್ತು ಬಡವರ ಹಾಗೂ ಹಿಂದುಳಿದ ವರ್ಗದವರಿಗೆ ಕಂಠಕಪ್ರಾಯವಾಗಿರುವ ಮೈಕ್ರೋ ಫೈನಾನ್ಸ್ ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಸೇರಿದಂತೆ ತಮ್ಮ 10 ಹಲವು ಹಕ್ಕೋತ್ತಾಯಗಳನ್ನು ಜನ ಪ್ರತಿನಿಧಿಗಳ ಮುಂದೆ ಮಂಡಿಸಿ ಸರ್ಕಾರದ ಮೇಲೆ ಒತ್ತಡ ತಂದು ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಚರ್ಚಿಸಲಾಗುವುದು ಎಂದು ಹೇಳಿದರು.

ಅಂದಿನ ಕಾರ್ಯಕ್ರಮಕ್ಕೆ ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ರೈತ ಬಾಂಧವರು ಹಾಗೂ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರೈತ ಸಂಘದ ಕೈ ಬಲಪಡಿಸಬೇಕು ಎಂದು ಮನವಿ ಮಾಡಿಕೊಂಡರು.

ಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಿಮ್ಮಾವು ರಘು, ತಾಲ್ಲೂಕು ಅಧ್ಯಕ್ಷ ಸತೀಶ್ ರಾವ್ ಮುಖಂಡರುಗಳಾದ ಸವಿತಾ, ಶ್ವೇತಾ, ಮಂಜುನಾಥ್, ಶಿವಣ್ಣ, ರಾಜು, ಮಹದೇವ ನಾಯಕ, ಶಂಕರ್ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.