ಮೈಸೂರು: ಲಿಂಗಾಯತ ಧರ್ಮಕ್ಕೆ ಸಂವಿಧಾನ ಮಾನ್ಯತೆ ದೊರೆಯಬೇಕು ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ.
ಜಿಲ್ಲಾ ಪತ್ರಕರ್ತರ ಭವನದ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮ ಪದವನ್ನು ನಾನು ಉಚ್ಚಾರಣೆ ಮಾಡುವುದಿಲ್ಲ. ಆದರೆ, ಲಿಂಗಾಯತ ಧರ್ಮಕ್ಕೆ ಸಿಖ್, ಬೌದ್ಧ ಧರ್ಮಗಳಿರುವಂತೆಯೇ ಸಂವಿಧಾನ ಮಾನ್ಯತೆ ಸಿಗಬೇಕು. 12ನೇ ಶತಮಾನದಲ್ಲಿ ಬಸವಣ್ಣ ಲಿಂಗಾಯತ ಧರ್ಮವನ್ನು ಸ್ಥಾಪಿಸಿದ್ದಾರೆ. ಸಂವಿಧಾನ ಮಾನ್ಯತೆ ದೊರೆಯಬೇಕೆಂದು ಹಲವು ವರ್ಷಗಳಿಂದ ಒತ್ತಾಯ ಇದೆ. ಭೌಗೋಳಿಕವಾಗಿ ನಾವೆಲ್ಲ ಹಿಂದೂಸ್ಥಾನದಲ್ಲಿದ್ದೇವೆ. ಪ್ರತ್ಯೇಕ ಧರ್ಮ ಮಾಡಲು ಬರುವುದಿಲ್ಲ. ಮಾನ್ಯತೆ ಕೊಡಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪಂಚಮಸಾಲಿ ಲಿಂಗಾಯತ ಗೌಡ ಒಳಗೊಂಡಂತೆ ಎಲ್ಲ ಲಿಂಗಾಯತ ಒಳಪಂಡಗಳನ್ನು ಕೇಂದ್ರದ ಒಬಿಸಿ ಮೀಸಲಾತಿಗೆ ಶಿಫಾರಸ್ಸು ಮಾಡುವಂತೆ ರಾಜ್ಯ ಸರ್ಕಾರವನ್ನು ಸ್ವಾಮೀಜಿ ಒತ್ತಾಯಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿವೇಶನ ಮುಗಿದ ಕೂಡಲೇ ಕಾನೂನು ಹಾಗೂ ಸಂವಿಧಾನ ತಜ್ಞರ ಸಭೆ ಕರೆದು ಸರ್ಕಾರದ ನಿಲುವನ್ನು ವ್ಯಕ್ತಪಡಿಸುವುದಾಗಿ ಭರವಸೆ ನೀಡಿದ್ದಾರೆ. ಸರ್ಕಾರ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನಿನ ಅಡೆತಡೆ ನಿವಾರಿಸಿ ಪಂಚಮಸಾಲಿ ಸಮಾಜಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ತಿಳಿಸಿದರು.
ಸರ್ಕಾರದ ಅಭಿಪ್ರಾಯದ ನಂತರ ಹೋರಾಟಗಾರರು, ಸಮಾಜದ ಪ್ರತಿನಿಧಿಗಳ ಸಭೆ ಕರೆದು ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು. 2024ರೊಳಗೆ ನಮ ಬೇಡಿಕೆ ಈಡೇರಿಸಬೇಕು ಎಂದು ಹೇಳಿದರು.
ಮೀಸಲಾತಿ ವಿಚಾರವಾಗಿ ಬಿಜೆಪಿ ಸರ್ಕಾರ ವಿಳಂಬ ಮಾಡಿರಲಿಲ್ಲ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರು ವರದಿ ಸಲ್ಲಿಸಲು ವಿಳಂಬ ಮಾಡಿದರು. ಇದರಿಂದಾಗಿ ಎಲ್ಲ ಪ್ರಕ್ರಿಯೆ ತಡವಾಯಿತು. ಸಮುದಾಯದ ಜನರು ಬೇಸರಿಸಿಕೊಂಡರು. ಈಗ ಕಾಂಗ್ರೆಸ್ ಸರ್ಕಾರ ಮೀಸಲಾತಿ ಹೆಚ್ಚಳದ ಕುರಿತು ಪ್ರಣಾಳಿಕೆಯಲ್ಲಿ ಘೋಷಿಸಿದೆ. ಅದರಂತೆ ನಡೆದುಕೊಳ್ಳಬೇಕು. ಪಂಚಮಸಾಲಿ ಸೇರಿದಂತೆ ಎಲ್ಲ ಲಿಂಗಾಯತ ಒಳಪಂಗಡಗಳಿಗೆ ಸಾಮಾಜಿಕ ನ್ಯಾಯ ಕೊಡಬೇಕು ಎಂದು ಪ್ರತಿಕ್ರಿಯಿಸಿದರು.