ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದ ನಾಗಮಲೆ ಚಾರಣಕ್ಕೆ ಹೇರಲಾಗಿದ್ದ ನಿಷೇಧವನ್ನ ನಾಳೆಯಿಂದ 7 ದಿನಗಳ ಕಾಲ ತೆರವುಗೊಳಿಸಿ ಅರಣ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ. ಮಹಾಶಿವರಾತ್ರಿ ಹಬ್ಬದ ನಿಮಿತ್ತ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಉಪ ಅರಣ್ಯ ಸಂರಕ್ಷಾಣಾಧಿಕಾರಿ ತಿಳಿಸಿದ್ದಾರೆ.
ರಾಜ್ಯಾದ್ಯಂತ ಅರಣ್ಯ ಪ್ರದೇಶದಲ್ಲಿ ಅನುಮತಿಯಿಲ್ಲದೆ ಚಾರಣವನ್ನ ನಿಷೇಧಿಸಿ ಅರಣ್ಯ ಪರಿಸರ ಜೀವಿಶಾಸ್ತ್ರ ಸಚಿವ ಈಶ್ವರ್ ಬಿ.ಖಂಡ್ರೆ ಆದೇಶ ಹೊರಡಿಸಿದ್ದರು. ಅದರಂತೆ ಮಹದೇಶ್ವರ ಬೆಟ್ಟದಲ್ಲಿ ಟ್ರಕಿಂಗ್ ನಿಷೇದ ಮಾಡಲಾಗಿದ್ದು, ಚಾರಣಕ್ಕೆ ತೆರಳುವವರು ಆನ್ ಲೈನ್ ಬುಕ್ಕಿಂಗ್ ಮಾಡಿ ನಂತರ ತೆರಳಬೇಕು ಎಂಬ ನಿಯಮವಿದೆ. ಆದರೆ ಇದೇ ತಿಂಗಳ 8 ರಂದು ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಇರುವುದರಿಂದ ಸಾರ್ವಜನಿಕರಿಗೆ, ಭಕ್ತಾದಿಗಳಿಗೆ ತೊಂದರೆಯಾಗಬಹುದು ಎಂಬುದನ್ನ ಮನಗಂಡು ಮೇಲಾಧಿಕಾರಿಗಳ ಜೊತೆ ಚರ್ಚಿಸಿ ನಾಗಮಲೆಗೆ ತೆರಳುವ ಭಕ್ತರಿಗೆ ನಾಳೆಯಿಂದ ಮಾ.10ರ ತನಕ ಬೆಳೆಗ್ಗೆ 6.30 ರಿಂದ 10.30ರ ಒಳಗೆ ನಾಗಮಲೆಗೆ ಕಾಲ್ನಡಿಗೆಯಲ್ಲಿ ತೆರಳಲು ಅವಕಾಶ ಕಲ್ಪಿಸಲಾಗಿದೆ.
ಭಕ್ತಾದಿಗಳು ನಿಯಮಾನುಸಾರ ಸಂಜೆ 5.30ರ ವೇಳೆಗೆ ಕಡ್ಡಾಯವಾಗಿ ಮಹದೇಶ್ವರ ಬೆಟ್ಟಕ್ಕೆ ವಾಪಾಸ್ ಆಗಬೇಕು. ವಾಹನಗಳಲ್ಲಿ ತೆರಳುವುದನ್ನ ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಮಹದೇಶ್ವರ ಬೆಟ್ಟ ಮತ್ತು ಸುತ್ತಲ ಪ್ರದೇಶವು ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಿರುವುದರಿಂದ ಎಲ್ಲೆಂದರಲ್ಲಿ ಕಸ ಬೀಸಾಡುವುದನ್ನ ನಿಷೇಧಿಸಲಾಗಿದೆ. ತಪ್ಪಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆ ನೀಡಲಾಗಿದೆ.