ಚಾಮರಾಜನಗರ: ಮಲ ಹೊರುವ ಪದ್ದತಿ ವಿರುದ್ದ ಅರಿವು ಮೂಡಿಸಿ ಕ್ರಮಕ್ಕೆ ಮುಂದಾಗ ಬೇಕಾದ ಸ್ಥಳೀಯ ಪಟ್ಟಣ ಪಂಚಾಯ್ತಿ ಅಧಿಕಾರಿಗಳೇ ಪೌರಕಾರ್ಮಿಕರಿಂದ ಸಾರ್ವತ್ರಿಕವಾಗಿ ಮಲ ಹೊರಿಸುವ ಮೂಲಕ ಕಾರ್ಮಿಕರನ್ನು ಅಪಮಾನಗೊಳಿಸಿ ಅಮಾನವೀಯ ಕೃತ್ಯ ಎಸಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣ ಪಂಚಾಯ್ತಿ ಕಚೇರಿಯ ಕೆಳಗಡೆಯೇ ಇರುವ ಖಾಸಗಿ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯದ ಬೃಹತ್ ಗುಂಡಿಯಲ್ಲಿ ತುಂಬಿದ ಮಲವನ್ನು ಗುರುವಾರ ಮುಂಜಾನೆ ಅವೈಜ್ಞಾನಿಕವಾಗಿ ಪಟ್ಟಣ ಪಂಚಾಯ್ತಿ ಜೆಸಿಬಿ ಯಂತ್ರದಿಂದ ಕಸ ಸಾಗಿಸುವ ಟ್ರಾಕ್ಟರ್ ಗೆ ತುಂಬಿ ಸಾಗಿಸಲಾಗುತ್ತಿತ್ತು. ಪಟ್ಟಣ ಪಂಚಾಯ್ತಿಗೆ ಸೇರಿದ ವಾಣಿಜ್ಯ ಸಂಕೀರ್ಣದ ಅಂಗಡಿ ಮಳಿಗೆಗಳ ಮುಂದೆ ಹಾಗೂ ರಸ್ತೆಯುದ್ದಕ್ಕೂ ಅಲ್ಲಲ್ಲಿ ರಾಶಿ ರಾಶಿಯಾಗಿ ಬಿದ್ದು ಬಸ್ ಗಾಗಿ ನಿಂತ ಪ್ರಯಾಣಿಕರು, ಹಾದಿ ಹೋಕರು, ಅಂಗಡಿ ಮಾಲೀಕರುಗಳು ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಯಿತು.
ಇದರಿಂದ ವಿಚಲಿತರಾದ ಪಟ್ಟಣ ಪಂಚಾಯ್ತಿ ಅಧಿಕಾರಿ ಆರೋಗ್ಯ ನಿರೀಕ್ಷಕಿರವರುಗಳು ಪೌರಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುವ ಕಾರ್ಮಿಕರಿಂದಲೇ ರಸ್ತೆಯ ಅಲ್ಲಲ್ಲಿ ರಾಶಿ ರಾಶಿಯಾಗಿ ಬಿದ್ದಿದ್ದ ಮಲವನ್ನು ಸಾರ್ವಜನಿಕರ ಸಮ್ಮುಖದಲ್ಲಿಯೇ ಮಮುಟಿಯಿಂದ ಪ್ಲಾಸ್ಟಿಕ್ ಬುಟ್ಟಿಗೆ ತುಂಬಿ ತಲೆ ಮೇಲೆ ಹೊತ್ತು ಕಸ ಸಾಗಿಸುವ ಟೆಂಪೋದಲ್ಲಿ ತುಂಬಿ ಸಾಗಿಸುವಂತೆ ಮಾಡುವ ಮೂಲಕ ಪೌರ ಕಾರ್ಮಿಕರನ್ನು ಸಾರ್ವತ್ರಿಕವಾಗಿ ಅಪಮಾನಗೊಳಿಸುವುದರ ಜತೆಗೆ ಅಮಾನವೀಯತೆ ಮೆರೆದಿದ್ದಾರೆ.
ಈ ಅಮಾನವೀಯ ದೃಶ್ಯವನ್ನು ಬಸ್ ನಿಲ್ದಾಣದಲ್ಲಿದ್ದ ಖಾಸಗಿ ವ್ಯಕ್ತಿಗಳು ಸೆರೆಹಿಡಿದು ಮಾಧ್ಯಮಗಳವರಿಗೆ ನೀಡಿದ್ದಾರೆ. ಅಲ್ಲದೆ ಸದರಿ ಘಟನೆಯ ದೃಶ್ಯಾವಳಿಗಳು ಪಟ್ಟಣ ಪಂಚಾಯ್ತಿ ಮುಖ್ಯ ದ್ವಾರದಲ್ಲೆ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲೂ ಸೆರೆಯಾಗಿದೆ.
ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣ ಪಂಚಾಯ್ತಿಯಲ್ಲಿ ಮಲ ಸಾಗಿಸಲೆಂದೇ ಸೈಕಿಂಗ್ ಯಂತ್ರವಿದೆಯಾದರೂ ಅದನ್ನು ಬಳಸದೆ ಪಂಚಾಯ್ತಿಯ ಜೆಸಿಬಿ ಹಾಗೂ ಕಸ ಸಾಗಣೆ ಟ್ರಾಕ್ಟರ್ ಮತ್ತು ಟೆಂಪೋವನ್ನು ಬಳಸಿಕೊಳ್ಳುವುದರ ಜತೆಗೆ ಪೌರಕಾರ್ಮಿಕರನ್ನು ಬಳಸಿಕೊಂಡಿರುವುದು ಅಕ್ಷಮ್ಯ ಅಪರಾದವಾಗಿದೆ. ಸಾಲದೆಂಬಂತೆ ಸಾರ್ವಜನಿಕ ಶೌಚಾಲಯದ ಶೌಚ ಗುಂಡಿಯಿಂದ ತೆರೆದ ವಾಹನಗಳಲ್ಲಿ ತುಂಬಿದಂತಹ ಬಹುಪಾಲು ದ್ರವ ರೂಪದ ಮಲವನ್ನು ಸಾರ್ವತ್ರಿಕ ಪ್ರದೇಶದ ಹಾದಿಯುದ್ದಕ್ಕೂ ಎಲ್ಲೆಂದರಲ್ಲಿ ಚೆಲ್ಲಿಕೊಂಡು ಹೋಗುವುದರ ಜತೆಗೆ ಬಯಲು ಪ್ರದೇಶದಲ್ಲೇ ಸುರಿಯುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡದೆ ಅನೈರ್ಮಲ್ಯಕ್ಕೆ ಮೂಲ ಕಾರಣರಾಗುವ ಮೂಲಕ ಸಾಂಕ್ರಾಮಿಕ ರೋಗ ರುಜಿನಗಳಿಗೆ ನಾಂದಿ ಹಾಡಿ ನಾಗರೀಕರ ಜೀವದ ಜತೆ ಚೆಲ್ಲಾಟ ಆಡಿದ್ದಾರೆ.
ಇದಲ್ಲದೆ ಸಾರ್ವಜನಿಕ ಶೌಚ ಗುಂಡಿಯ ಮೇಲೆ ಮಲ ಸಾಗಣೆ ಸೈಕಿಂಗ್ ಯಂತ್ರವನ್ನು ನಿಲ್ಲಿಸಿದ್ದರಿಂದ ಅದರ ಭಾರಕ್ಕೆ ಶೌಚ ಗುಂಡಿಯ ಮೇಲ್ಬಾಗದ ಕಾಂಕ್ರೀಟ್ ಸ್ಲ್ಯಾಬ್ ಕುಸಿದು ಶೌಚ ಗುಂಡಿ ತೆರೆದಂತೆಯೇ ಇರುವುದರಿಂದ ಗುಂಡಿಯಲ್ಲಿ ತುಂಬಿರುವ ಮಲ ಹಾಗೆಯೇ ಗೋಚರವಾಗುವುದರ ಜತೆಗೆ ದುರ್ನಾತ ವಾಣಿಜ್ಯ ಸಂಕೀರ್ಣದ ಸುತ್ತ ಮುತ್ತಲ ಅಂಗಡಿಗಳವರು ಮತ್ತು ಬಸ್ಸಿಗಾಗಿ ಕಾದು ನಿಲ್ಲುವ ಪ್ರಯಾಣಿಕರಿಗೆ ವ್ಯಾಪಿಸಿ ಸಾಂಕ್ರಾಮಿಕ ರೋಗದ ಭೀತಿಯಲ್ಲೇ ಕಾಲ ದೂಡುವಂತಹ ದುಸ್ಥಿತಿ ಉಂಟಾಗಿದೆ.
ಕಾರ್ಮಿಕರ ದಿನಾಚರಣೆಯಂದು ಪೌರಕಾರ್ಮಿಕರನ್ನು ಸನ್ಮಾನಿಸುವಂತಹ ಬೂಟಾಟಿಕೆ ತೋರುವ ಪಂಚಾಯ್ತಿ ಅಧಿಕಾರಿಗಳು ವಾಸ್ತವದಲ್ಲಿ ಅವರಿಂದಲೇ ಮಲ ಹೊರಿಸುವ ಮೂಲಕ ಅಮಾನವೀಯವಾಗಿ ನಡೆಸಿಕೊಂಡಿರುವುದರ ವಿರುದ್ದ ತಪ್ಪಿತಸ್ತರ ವಿರುದ್ದ ಶಿಸ್ತು ಕ್ರಮ ಕೈಗೊಂಡು ಕ್ರಿಮಿನಲ್ ಪ್ರಕರಣ ದಾಖಲಿಸಿ ಮುಂದೆಂದೂ ಇಂತಹ ಮಲ ಹೊರುವ ಪದ್ದತಿ ಮರುಕಳಿಸದಂತೆ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಪ್ರಬುದ್ದ ನಾಗರೀಕರು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.