ಗುಂಡ್ಲುಪೇಟೆ: ಮೇವು ತರಲು ಜಮೀನಿಗೆ ತೆರಳಿದ ವ್ಯಕ್ತಿ ಮೇಲೆ ಹುಲಿ ದಾಳಿ ನಡೆಸಿ ಕೊಂದು ತಿಂದು ಹಾಕಿರುವ ಘಟನೆ ತಾಲೂಕಿನ ಆಡಿನ ಕಣಿವೆ ಗ್ರಾಮದಲ್ಲಿ ನಡೆದಿದೆ.
ಆಡಿನ ಕಣಿವೆ ಗ್ರಾಮದ ಜೇನು ಕುರುಬ ಸಮುದಾಯದ ವ್ಯಕ್ತಿ ಬಸವಯ್ಯ(55) ಹುಲಿ ದಾಳಿಗೆ ಬಲಿಯಾದ ವ್ಯಕ್ತಿ. ಇವರು ಮೇಕೆಗಳಿಗೆ ಮೇವು ತರಲೆಂದು ಜಮೀನಿನ ಕಡೆಗೆ ತೆರಳಿದ್ದು, ಈ ವೇಳೆ ಹುಲಿ ಅವರ ಮೇಲೆ ದಾಳಿ ಮಾಡಿ ಕೊಂದು ಅವರನ್ನು ಕಾಡಿನೊಳಕ್ಕೆ ಎಳೆದೊಯ್ದು ದೇಹದ ಕೆಲವು ಭಾಗವನ್ನು ತಿಂದು ಹಾಕಿದೆ.
ಮೇವು ತರಲೆಂದು ಜಮೀನಿಗೆ ಹೋದ ಬಸವಯ್ಯ ಮರಳಿ ಬಾರದೆ ಇದ್ದಾಗ ಇತ್ತ ಮನೆಯಲ್ಲಿ ಆತಂಕ ಶುರುವಾಗಿದೆ. ಹೀಗಾಗಿ ಗಾಬರಿಗೊಂಡ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸಿದ್ದು, ಬಂಡೀಪುರ ರಾಷ್ಟ್ರೀಯ ಉದ್ಯಾನವನ ಕುಂದಕೆರೆ ಅರಣ್ಯ ವಲಯದ ವ್ಯಾಪ್ತಿಗೆ ಬರುವ ವೀರೇಶ್ವರ ಗುಡ್ಡ ಎಂಬ ಅರಣ್ಯದಲ್ಲಿ ಬಸವಯ್ಯನ ಅರ್ಧ ದೇಹ ಪತ್ತೆಯಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕುಂದಕೆರೆ ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್ ಮತ್ತು ಸಿಬ್ಬಂದಿ ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಅರಣ್ಯ ವ್ಯಾಪ್ತಿಯಲ್ಲಿ ಮಾನವ-ಪ್ರಾಣಿ ಸಂಘರ್ಷ ಮುಂದುವರಿದಿದ್ದು, ಕಳೆದ ತಿಂಗಳು ಬಂಡೀಪುರ ಅರಣ್ಯ ಪ್ರದೇಶ ವ್ಯಾಪ್ತಿಗೆ ಒಳಪಡುವ ನಂಜನಗೂಡು ತಾಲೂಕಿನ ಯಡಿಯಾಲ ವ್ಯಾಪ್ತಿಯ ಬಳ್ಳೂರ ಹುಂಡಿಯಲ್ಲಿ ಹುಲಿ ದಾಳಿಗೆ ವ್ಯಕ್ತಿಯೋರ್ವ ಮೃತಪಟ್ಟಿದ್ದನು. ಈ ಘಟನೆ ಮಾಸುವ ಮುನ್ನವೆ ಹುಲಿ ದಾಳಿಗೆ ಮತ್ತೋರ್ವ ಬಲಿಯಾಗಿರುವುದು ಕಾಡಂಚಿನ ಗ್ರಾಮದ ಜನರಲ್ಲಿ ಆತಂಕ ಮೂಡಿಸಿದೆ.