ಚಾಮರಾಜನಗರ: ಜಿಲ್ಲೆಯ ಹನೂರು ತಾಲ್ಲೂಕಿನ ಬಂಡಳ್ಳಿ ಗ್ರಾಮದ ಮೂವರು ಗಾರೆ ಕೆಲಸ ಮಾಡುವ ಕಾರ್ಮಿಕರು ಚಿಂಚಳ್ಳಿ ಗ್ರಾಮದ ಜಮೀನೊಂದರಲ್ಲಿ ಕೆಲಸ ಮುಗಿಸಿ ವಾಪಾಸ್ಸಾಗುತ್ತಿದ್ದ ವೇಳೆ ಮಳೆಯಾದ ಕಾರಣ ಚಿಂಚಳ್ಳಿ ಸರ್ಕಾರಿ ಪ್ರೌಢಶಾಲೆ ಸಮೀಪದಲ್ಲಿ ಮರದ ಕೆಳಗೆ ನಿಂತಿದ್ದ ಸಮಯ ಸಿಡಿಲ ಬಡಿತಕ್ಕೆ ಒಳಗಾಗಿದ್ದು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.
ನೆನ್ನೆ ಸಂಜೆ 6 ಗಂಟೆಯ ವೇಳೆ ಈ ಘಟನೆ ನಡೆದಿದೆ , ಕೂಲಿ ಮುಗಿಸಿ ಮನೆಗೆ ವಾಪಸ್ಸಾಗುವ ವೇಳೆ ಮಳೆ ಆರಂಭವಾಗಿದೆ ಈ ವೇಳೆ ಮರದ ಕೆಳಗೆ ಆಶ್ರಯ ಪಡೆದಿದ್ದ ಬಂಡಳ್ಳಿ ಗ್ರಾಮದ ಮೂವರು ಸಿಡಿಲ ಬಡಿತಕ್ಕೆ ಸಿಲುಕಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಂಡಳ್ಳಿ ಗ್ರಾಮದ ಗುರು (33) ಮಂಜು (33)ಗುರುಸ್ವಾಮಿ( 44) ಇವರನ್ನು ತುರ್ತು ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಸಿಗದ ಕಾರಣ ಸ್ಥಳೀಯರು ಖಾಸಗಿ ವಾಹನದಲ್ಲಿ ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.
ಚಿಕಿತ್ಸೆ ನೀಡಿದ ಹೋಲಿಕ್ರಾಸ್ ಆಸ್ಪತ್ರೆ ವೈದ್ಯೆ ಡಾ ಭಾರ್ಗವಿ ಅವರು ಒಬ್ಬರಿಗೆ ಮಾತ್ರ ಕಾಲು ಬೆರಳುಗಳಿಗೆ ಗಾಯಗಳಾಗಿದ್ದು ಇನ್ನಿಬ್ಬರಿಗೆ ಶಾಕ್ ಆಗಿದೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಒಂದು ದಿನ ಚಿಕಿತ್ಸೆ ನೀಡಿ ನಂತರ ಡಿಸ್ಚಾರ್ಜ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.