ತಿ.ನರಸೀಪುರ: ತಾಲ್ಲೂಕಿನಲ್ಲಿ ಚಿರತೆಯ ಹಾವಳಿ ಮುಂದುವರೆದಿದ್ದು ಬನ್ನೂರು ಹೋಬಳಿಯ ನುಗ್ಗನಹಳ್ಳಿ ಗ್ರಾಮದಲ್ಲಿ ಕುರಿ ಮತ್ತು ಮೇಕೆ ಮೇಲೆ ದಾಳಿ ಮಾಡಿ ಕುರಿಯನ್ನು ಕೊಂದು ಹಾಕಿ ಪರಾರಿಯಾಗಿದೆ.
ನುಗ್ಗನಹಳ್ಳಿ ಗ್ರಾಮದ ಬಾಲರಾಜು ಎಂಬುವರರಿಗೆ ಸೇರಿದ ಕುರಿ ಮತ್ತು ಮೇಕೆ ಹಿಂಡಿನ ಮೇಲೆ ಚಿರತೆ ದಾಳಿ ಮಾಡಿದೆ. ಬಾಲರಾಜು ಅವರು ಎಂದಿನಂತೆ ಕುರಿ ಮತ್ತು ಮೇಕೆಗಳನ್ನು ಊರ ವಲಯದಲ್ಲಿ ಮೇಯಿಸಿಕೊಂಡು ಬರುವಾಗ ಸಂಜೆ 5.30 ರ ಸಮಯದಲ್ಲಿ ಚಿರತೆ ಏಕಾ ಏಕಿ ದಾಳಿ ನಡೆಸಿದ್ದು ಚಿರತೆದಾಳಿಯಿಂದ ಗಾಬರಿಗೊಂಡ ಕುರಿಗಳು ದಿಕ್ಕಪಾಲಾಗಿ ಓಡಿಹೋಗಿವೆ. ಇದರಿಂದ ಕಂಗಾಲಾದ ಬಾಲರಾಜು ಮತ್ತು ಮನೆಯವರು ಓಡಿಹೋದ ಕುರಿಗಳಿಗಾಗಿ ಹುಡುಕಾಟ ನಡೆಸಿದ ವೇಳೆ ತಿವ್ರ ದಾಳಿಗೊಳಗಾಗಿ ಸತ್ತು ಬಿದ್ದಿದ್ದ ಕುರಿ ಸಿಕ್ಕಿದೆ ಮತ್ತೊಂದು ಮೇಕೆ ಸಿಕ್ಕಿಲ್ಲ ಎಂದು ಬಾಲರಾಜು ತಿಳಿಸಿದ್ದಾರೆ.
ಕುರಿ ಮೇಕೆ ಸಾಕಾಣಿಕೆ ಮಾಡಿಕೊಂಡು ನಮ್ಮ ಕುಟುಂಬದ ಜೀವನ ಸಾಗಿಸುತಿದ್ದೇವೆ ಚಿರತೆ ದಾಳಿಯಿಂದ ಸುಮಾರು 50 ಸಾವಿರ ಬೆಲೆ ಬಾಳುವ ಕುರಿ ಮೇಕೆ ಕಳೆದುಕೊಂಡಿದ್ದೇನೆ ಮುಂದೆ ಯಾವ ತರ ನಾವು ಜೀವನ ಸಾಗಿಸುವುದು ಎಂಬ ಚಿಂತೆ ಎದುರಾಗಿದೆ ಎಂದು ಬಾಲರಾಜು ಅಳಲು ತೋಡಿಕೊಂಡಿದ್ದಾರೆ.
ಈ ಕುರಿತಂತೆ ಮಾತನಾಡಿದ ರೈತ ಮುಖಂಡ ಬನ್ನೂರು ನಾರಾಯಣ್ ಅವರು, ಕಳೆದ ಎರಡು ತಿಂಗಳಿನಿಂದ ತಾಲ್ಲೂಕಿನಲ್ಲಿ ಚಿರತೆ ಹಾವಳಿ ಜಾಸ್ತಿಯಾಗಿದೆ ಈಗಾಗಲೇ ಇಬ್ಬರು ವಿದ್ಯಾರ್ಥಿಗಳ ಜೀವ ತೆಗೆದಿದೆ. ಈ ನಡುವೆ ಯಾಚನಹಳ್ಳಿ ಗ್ರಾಮದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ ಹಸು ಮೇಲೆ ದಾಳಿ ನಡೆಸಿದೆ ಈಗ ಮೇಕೆ ಹಿಂಡಿನ ಮೇಲೆ ದಾಳಿ ನಡೆಸಿದ್ದು, ಇದೇ ರೀತಿ ಚಿರತೆ ದಾಳಿ ಮುಂದುವರೆದರೆ ರೈತರು ಬದುಕುವುದಾದರು ಹೇಗೆ ಅರಣ್ಯ ಇಲಾಖೆಯವರು ಚಿರತೆ ಹಿಡಿಯುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಎಂದು ದೂರಿದ್ದಾರೆ.