ಗುಂಡ್ಲುಪೇಟೆ: ಸಾರ್ವಜನಿಕರು ಹಾಗೂ ಭಕ್ತಾದಿಗಳಿಂದ ಬಾರಿ ಟೀಕೆ ವ್ಯಕ್ತವಾದ ಹಿನ್ನೆಲೆ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಮಧ್ಯಾಹ್ನ 3ಗಂಟೆಯೊಳಗೆ ಬಸ್ ಸಂಚಾರ ನಿಷೇಧಿಸಿ ಹೊರಡಿಸಿದ ಆದೇಶವನ್ನು ತಹಸೀಲ್ದಾರ್ ಟಿ.ರಮೇಶ್ ಬಾಬು ಒಂದೇ ದಿನಕ್ಕೆ ಹಿಂಪಡೆದಿದ್ದಾರೆ ಈ ಮೂಲಕ ಪ್ರವಾಸಿಗರಿಗೆ ಗೋಪಾಲನ ದರ್ಶನ ಎಂದಿನಂತೆ ಸಿಗಲಿದೆ.
ವಿವಿಧ ಕಾರಣ ನೀಡಿ ತಾಲ್ಲೂಕು ಆಡಳಿತ ಹಾಗೂ ತಹಸೀಲ್ದಾರ್ ಟಿ.ರಮೇಶ್ ಬಾಬು ಗೋಪಾಲಸ್ವಾಮಿ ಬೆಟ್ಟಕ್ಕೆ ಮಧ್ಯಾಹ್ನ 3 ಗಂಟೆಗೆ ಬಸ್ ಸಂಚಾರ ನಿಷೇದಿಸಿ ಗುರುವಾರ ಆದೇಶ ಹೊರಡಿಸಿದ್ದರು ಆದರೆ ಸಾರ್ವಜನಿಕರು ಹಾಗೂ ಭಕ್ತಾದಿಗಳು ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು ಜೊತೆಗೆ ಕನ್ನೇಗಾಲ ಗ್ರಾಮಸ್ಥರು ಸ್ವತಃ ತಹಸೀಲ್ದಾರ್ ಬಳಿ ಆದೇಶ ಹಿಂಪಡೆಯುವಂತೆ ಲಿಖಿತ ಮನವಿ ಸಲ್ಲಿಸಿದ್ದರು. ಈ ಕುರಿತು ತಹಸೀಲ್ದಾರ್ ಟಿ.ರಮೇಶ್ ಬಾಬು ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಅವರ ಸೂಚನೆಯ ಮೇರೆಗೆ ಈ ಹಿಂದೆ ಇದ್ದ ನಿಯಮದಂತೆ 4ಗಂಟೆಯವರೆಗೆ ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟು ಹೊಸ ಆದೇಶವನ್ನು ಹಿಂಪಡೆದಿದ್ದಾರೆ.ಜೊತೆಗೆ ಅರಣ್ಯ ಇಲಾಖೆಯಿಂದ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಿಸಿ ಪ್ರಸಾದ ತಿನ್ನಲು ಬರುವ ಕಾಡಾನೆಯ ಮೇಲೆ ಹಾಗೂ ನಿಗಾವಹಿಸುವಂತೆ ಸೂಚಿಸಿದ್ದಾರೆ.
ಈ ಕುರಿತು ತಹಸೀಲ್ದಾರ್ ಟಿ.ರಮೇಶ್ ಬಾಬು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ ದೂರದ ಊರುಗಳಿಂದ ಬರುವ ಪ್ರವಾಸಿಗರು ,ಭಕ್ತಾದಿಗಳು ಹಾಗೂ ಸಾರ್ವಜನಿಕರಿಗೆ 3ಗಂಟೆಯೊಳಗೆ ಬಸ್ ಸಂಚಾರ ನಿಷೇಧದ ಆದೇಶದಿಂದ ಸಮಸ್ಯೆಯಾಗುತ್ತದೆ ಎಂದು ದೂರುಗಳು ಕೇಳಿಬಂದ ಹಿನ್ನೆಲೆ ಜೊತೆಗೆ ಪ್ರವಾಸಿಗರ ಅನುಕೂಲತೆಯ ಉದ್ದೇಶದಿಂದ ಹೊಸ ಆದೇಶವನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದ್ದಾರೆ.