ಚಾಮರಾಜನಗರ: ಕಾವೇರಿ ನದಿ ನೀರು ಉಳಿವಿಗಾಗಿ ಚಾಮರಾಜನಗರದಲ್ಲಿ ನಡೆಯುತ್ತಿರುವ ಹೋರಾಟ 48 ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಸೋಮವಾರ ಒಂಟಿ ಕಾಲಿನಲ್ಲಿ ನಿಂತ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಚಾಮರಾಜನಗರದ ಶ್ರೀ ಭುವನೇಶ್ವರಿ ವೃತ್ತದಲ್ಲಿ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಒಂಟಿ ಕಾಲಿನಲ್ಲಿ ನಿಂತು ವಿನೂತನ ಚಳವಳಿ ನಡೆಸಿ ರಸ್ತೆ ಸಂಚಾರಕ್ಕೆ ಅಡ್ಡಿಯನ್ನುಂಟುಮಾಡಿದರು.
ಕರ್ನಾಟಕ ತಮಿಳುನಾಡು ನಡುವೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಶ್ರೀ ಭುವನೇಶ್ವರಿ ವೃತ್ತದಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಿದ ಚಳವಳಿಗಾರರು ಕೇಂದ್ರ ಸರ್ಕಾರ, ತಮಿಳುನಾಡು ಕಾವೇರಿ ನದಿ ನೀರು ನಿರ್ವಾಹಣಾ ಸಮಿತಿ ಹಾಗೂ ರಾಜ್ಯ ಸರ್ಕಾರವು ರಾಜ್ಯದ ಜನತೆಯನ್ನು ಒಂಟಿ ಕಾಲಿನಲ್ಲಿ ನಿಲ್ಲಿಸುವಂತೆ ಮಾಡಿದೆ ಎಂದು ಆರೋಪಿಸಿ ಅಣಕು ಪ್ರದರ್ಶನ ಮಾಡಿದರು.
ಕರ್ನಾಟಕ ಸೇನಾಪಡೆಯ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ಹಿರಿಯ ಚಳವಳಿಗಾರ ಶಾ.ಮುರಳಿ, ಚಾ.ವೆಂ.ರಾಜಗೋಪಾಲ್, ಮಹೇಶ್ ಗೌಡ, ಪಣ್ಯದಹುಂಡಿ ರಾಜು, ಗು. ಪುರುಷೋತ್ತಮ್, ತಾಂಡವಮೂರ್ತಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.