ಚಾಮರಾಜನಗರ: ಕಾಡಾನೆಗಳ ಹಾವಳಿಯಿಂದ ಬೇಸತ್ತಿರುವ ರೈತರು ತಮ್ಮ ಜಮೀನಿಗೆ ದಾಳಿ ಮಾಡಲು ಬಂದ ಕಾಡಾನೆಯನ್ನು ಟ್ರಾಕ್ಟರ್ ಮೂಲಕ ಹಿಮ್ಮೆಟ್ಟಿಸಿದ ಘಟನೆ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿ ಸಮೀಪದಲ್ಲಿ ನಡೆದಿದೆ.
ಈಗಾಗಲೇ ಈ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿಯಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದು, ಕಷ್ಟಪಟ್ಟು ಬೆಳೆದ ಬೆಳೆ ಫಸಲಿಗೆ ಬರುತ್ತಿದ್ದಂತೆಯೇ ಕಾಡಾನೆಗಳು ಸೇರಿದಂತೆ ವಿವಿಧ ವನ್ಯ ಪ್ರಾಣಿಗಳು ಜಮೀನಿಗೆ ನುಗ್ಗಿ ಫಸಲನ್ನು ತಿಂದು ಹಾಳು ಮಾಡುತ್ತಿದ್ದು ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಈಗ ಬೇಸಿಗೆಯ ದಿನವಾಗಿರುವುದರಿಂದ ಕಾಡಿನಲ್ಲಿ ನೀರು ಮತ್ತು ಮೇವು ದೊರಕದ ಕಾರಣದಿಂದ ಕಾಡಾನೆಗಳು ಕಾಡಿನಿಂದ ನೇರವಾಗಿ ನಾಡಿಗೆ ಬಂದು ರೈತರ ಜಮೀನಿಗೆ ನುಗ್ಗುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗದ ಕಾರಣದಿಂದ ತಾಳವಾಡಿ ಸುತ್ತ ಮುತ್ತಲ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ನಡುವೆ ಕೃಷಿ ಜಮೀನಿಗೆ ಫಸಲು ನಾಶ ಮಾಡಲು ಬಂದ ಕಾಡಾನೆಯನ್ನು ರೈತರು ತಮ್ಮ ಟ್ರ್ಯಾಕ್ಟರ್ ನಲ್ಲಿ ಭಾರಿ ಶಬ್ದ ಮಾಡಿಕೊಂಡು ಚಾಲನೆ ಮಾಡಿ ಹಿಮ್ಮೆಟ್ಟಿಸಿದ ಬೆಳಕಿಗೆ ಬಂದಿದೆ. ಇದು ಅಪಾಯಕಾರಿಯಾಗಿದ್ದರೂ ಅನ್ಯ ಮಾರ್ಗವಿಲ್ಲದೆ ಪ್ರಾಣದ ಹಂಗು ತೊರೆದು ರೈತರು ಈ ಕೆಲಸವನ್ನು ಮಾಡಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಅರಣ್ಯ ಇಲಾಖೆ ಇತ್ತ ಗಮನಹರಿಸಿ ಕಾಡಾನೆಗಳು ನಾಡಿಗೆ ಬಂದು ಕೃಷಿ ಜಮೀನಿಗೆ ನುಗ್ಗಿ ಫಸಲು ನಾಶ ಮಾಡುವುದನ್ನು ತಡೆಯಬೇಕಾಗಿದೆ.