ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಮಾಪುರ ಆನೆ ಶಿಬಿರದಲ್ಲಿ ಮಂಗಳವಾರ ಅಕ್ಕಿ ಕಳ್ಳ ಎಂದೇ ಖ್ಯಾತವಾಗಿದ್ದ ಗಂಡಾನೆ ವಿನಾಯಕನ್ ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದೆ. ಸ್ಥಳದಲ್ಲಿದ್ದ ಪಶುವೈದ್ಯರು ಮತ್ತು ಇತರ ಅರಣ್ಯ ಸಿಬ್ಬಂದಿ ಆನೆಯನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯಲ್ಲಿ ಚಿಕಿತ್ಸೆ ನೀಡಿ ಪ್ರಯತ್ನಿಸಿದರು. ಆದರೆ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ ಎಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ರಮೇಶ್ ಕುಮಾರ್ ತಿಳಿಸಿದ್ದಾರೆ.
ಅಕ್ಕಿ ಕಳ್ಳ, ವಿನಾಯಗನ್ ಟ್ರೈ ಜಂಕ್ಷನ್ ಕಿಂಗ್ ಎಂದೇ ಈ ಆನೆ ಖ್ಯಾತಿ ಪಡೆದಿತ್ತು. ಅಭಿಮನ್ಯು ಬಳಿಕ ದಸರಾ ಅಂಬಾರಿ ಹೊರಲು ಈ ಆನೆ ಸೂಕ್ತ ಎಂಬ ಮಾತುಗಳು ಕೇಳಿ ಬಂದಿತ್ತು. ಹೀಗಾಗಿ ಈ ಆನೆಗೆ ತರಬೇತಿ ನೀಡಲು ಅರಣ್ಯ ಇಲಾಖೆ ಅಧಿಕಾರಿಗಳು ಯೋಜಿಸಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ಪ್ರಾಣ ಬಿಟ್ಟಿದೆ. ಈ ಆನೆ ಬಂಡೀಪುರದ ಎಲಚಟ್ಟಿ ಗ್ರಾಮದ ಕಾಡಂಚಿನ ಮನೆಗಳಿಗೆ ಲಗ್ಗೆ ಇಟ್ಟು ಅಕ್ಕಿ, ತರಕಾರಿ ಕದ್ದು ತಿನ್ನುತ್ತಿತ್ತು. ಬೆಳೆ ನಾಶ ಮಾಡುತ್ತಿತ್ತು. ಹೀಗಾಗಿ ಬಂಡೀಪುರದ ಎಲಚಟ್ಟಿಯ ಗುಡ್ಡೇಕೇರಿ ಸಮೀಪ ಐದು ತಿಂಗಳ ಹಿಂದೆ ಕರ್ನಾಟಕ ಅರಣ್ಯ ಇಲಾಖೆ ಈ ಆನೆಯನ್ನು ಸೆರೆ ಹಿಡಿದಿತ್ತು.