ಚಾಮರಾಜನಗರ: ಪಂಚಮಸಾಲಿ ಲಿಂಗಾಯತರು ‘2ಎ’ ಮೀಸಲಾತಿಗಾಗಿ ಮಾಡುತ್ತಿರುವ ಹೋರಾಟ ನ್ಯಾಯಯುತವಲ್ಲ. ಅದು ಸ್ವಾರ್ಥದ ಹೋರಾಟ ಎಂದು ನಟ ಚೇತನ್ ಅಹಿಂಸಾ ಹೇಳಿದರು.
ಚಾಮರಾಜನಗರದಲ್ಲಿ ಬಹುಜನ ವಾಲಂಟಿಯರ್ ಫೋರ್ಸ್ (ಬಿವಿಎಫ್) ಹಮ್ಮಿಕೊಂಡಿದ್ದ ‘ಮೀಸಲಾತಿ ಪ್ರಾತಿನಿಧ್ಯವೋ- ಆರ್ಥಿಕ ಸಬಲೀಕರಣವೋ’ ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಒಕ್ಕಲಿಗರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿದರು. ಆದರೆ ಪಂಚಮಸಾಲಿಗಳು 3ಬಿಯಿಂದ 2ಎಗೆ ಸೇರಿಸಿ ಎನ್ನುವುದು ಸ್ವಾರ್ಥದ ಹೋರಾಟ ಎಂದರಲ್ಲದೆ, ಈಗಿರುವುದಕ್ಕಿಂತ ಇನ್ನೂ ಹಿಂದುಳಿದ ವರ್ಗಕ್ಕೆ ಸೇರಿಸಿ ಎನ್ನುವುದು ಎಷ್ಟು ಸರಿ? ಶೇ 4ರಿಂದ ಶೇ 12ರಷ್ಟು ಮೀಸಲಾತಿ ಹೆಚ್ಚಿಸಬೇಕು ಎಂಬ ಒಕ್ಕಲಿಗರ ಹೋರಾಟ ಸಮಂಜಸವಾಗಿದೆ. ಅವರು ಅಷ್ಟು ಜನಸಂಖ್ಯೆ ಹೊಂದಿದ್ದರೆ ಮೀಸಲಾತಿ ಹೆಚ್ಚಳ ಮಾಡಿದರೆ ತಪ್ಪಿಲ್ಲ. ಯಾವುದೇ ಸಮಾಜವು ಜನಸಂಖ್ಯೆ ಆಧಾರಿತವಾಗಿ ಮೀಸಲಾತಿ ಕೇಳಿದರೆ ತಪ್ಪಾಗುವುದಿಲ್ಲ ಎಂದರು.
ಭಾರತೀಯ ಕ್ರಿಕೆಟ್ನಲ್ಲಿ ಶೇ 70ರಷ್ಟು ಮೇಲ್ಜಾತಿಯವರೇ ಇದ್ದಾರೆ. ಕ್ರಿಕೆಟ್ನಲ್ಲೂ ಮೀಸಲಾತಿ ಜಾರಿಯಾಗಬೇಕು. ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದಲ್ಲಿ 2016ರಿಂದ 6 ಮಂದಿ ಕರಿಯರಿಗೆ ಮೀಸಲಾತಿ ನೀಡಲಾಗುತ್ತಿದೆ. ಅದೇ ರೀತಿ ಭಾರತೀಯ ಕ್ರಿಕೆಟ್ನಲ್ಲೂ ಮೀಸಲಾತಿ ನೀಡಬೇಕು. ಇಲ್ಲಿನ ಕ್ರಿಕೆಟ್ ಶ್ರೀಮಂತವಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಸಮುದಾಯದವರಿಗೆ ಮೀಸಲಾತಿ ನೀಡಿದಲ್ಲಿ ಕ್ರಿಕೆಟ್ ತಂಡ ಇನ್ನಷ್ಟು ಉತ್ತಮವಾಗುತ್ತದೆ’ ಎಂದರು.
ತಿ.ನರಸೀಪುರದ ನಳಂದ ಬುದ್ದವಿಹಾರ ಬೋಧಿರತ್ನ ಬಂತೇಜಿ ಅವರು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಕರ್ನಾಟಕ ಬೌದ್ಧ ಸಮಾಜ ರಾಜ್ಯಾಧ್ಯಕ್ಷ ಹ.ರಾ.ಮಹೇಶ್, ಬಿವಿಎಫ್ ಜಿಲ್ಲಾಧ್ಯಕ್ಷ ಚಂದ್ರಕಾಂತ್ ಇತರರು ಇದ್ದರು.