ಚಾಮರಾಜನಗರ: ಮಾರಕಾಸ್ತ್ರದಿಂದ ತಲೆಗೆ ಹೊಡೆದು ವ್ಯಕ್ತಿಯೊಬ್ಬನನ್ನು ಹತ್ಯೆಗೈದ ಘಟನೆ ತಾಲೂಕಿನ ಮಧುವನಹಳ್ಳಿ ಗ್ರಾಮದ ಜಿ.ವಿ ಗೌಡ ನಗರದಲ್ಲಿ ನಡೆದಿದ್ದು, ಹಂತಕರಿಗೆ ಬಲೆ ಬೀಸಲಾಗಿದೆ.
ಮಧುವನಹಳ್ಳಿ ಗ್ರಾಮದ ಜಿ.ವಿ ಗೌಡ ನಗರದ ನಿವಾಸಿ ಮಹದೇವಸ್ವಾಮಿ (45) ಎಂಬಾತನೇ ಹತ್ಯೆಗೀಡಾದ ದುರ್ದೈವಿ. ಮೃತ ಮಹದೇವಸ್ವಾಮಿಗೆ ಪತ್ನಿ , ಇಬ್ಬರು ಮಕ್ಕಳಿದ್ದಾರೆ. ಪತ್ನಿ ಹಾಗೂ ಮಕ್ಕಳು ಮನೆಯಲ್ಲಿ ಇರದೆ ಹೊರ ಹೋಗಿದ್ದರು ಎಂದು ಹೇಳಲಾಗಿದ್ದು, ಈ ವೇಳೆ ಮಹದೇವಸ್ವಾಮಿ ಒಬ್ಬನೇ ಇದ್ದ ಸಂದರ್ಭದಲ್ಲಿ ಹಂತರು ಈತನ ತಲೆಗೆ ಹೊಡೆದು ಹತ್ಯೆಗೈದಿದ್ದಾರೆ ಎಂದು ಹೇಳಲಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಜಿ.ಯು. ಸೋಮೇಗೌಡ, ವೃತ್ತ ನಿರೀಕ್ಷಕ ಶಿವರಾಜ್ ಮುಧೋಳ್ ಹಾಗೂ ಸಬ್ ಇನ್ಸ್ ಪೆಕ್ಟರ್ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ದೇಹವನ್ನು ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.